ಬೆಂಗಳೂರು : ಅಮೆರಿಕ, ಇಸ್ರೇಲ್ – ಇರಾನ್ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ದುಬೈಯಲ್ಲಿ ಸಿಲುಕಿ ಆತಂಕದಲ್ಲಿರುವ ಕನ್ನಡಿಗರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ ಅವರಿಗೆ ಧೈರ್ಯ ತುಂಬಿದರು.
ಸಂಕಷ್ಟದಲ್ಲಿ ಸಿಲುಕಿದ ಕನ್ನಡಿಗರನ್ನು ತಕ್ಷಣ ಕರ್ನಾಟಕಕ್ಕೆ ಕರೆದುಕೊಂಡು ಬರಲು ಕೇಂದ್ರ ಸರ್ಕಾರದ ಜೊತೆ ಮಾತನಾಡುತ್ತೇನೆಂದು ಅವರು ಭರವಸೆ ನೀಡಿದರು. ಪ್ರಶಸ್ತಿ ಪಡೆಯಲೆಂದು ಒಟ್ಟು 61 ಜನರ ತಂಡವು ತೆರಳಿದ್ದು, ದುಬೈಯಲ್ಲಿ ವಾಸ್ತವ್ಯ ಇರುವುದಾಗಿ ತಂಡದವರು ನುಡಿದರು. ಅರಸೀಕೆರೆಯ 5 ಜನರೂ ಇವರ ಜೊತೆಗೆ ಇರುವುದಾಗಿ ಹಾಗೂ ಹೋಟೆಲ್ ಒಂದರಲ್ಲಿ ತಂಗಿರುವುದಾಗಿ ಅವರು ಆತಂಕವನ್ನು ಹಂಚಿಕೊಂಡರು. ಇದೀಗ 7ನೇ ದಿನ ತಲುಪಿದೆ. ಇವತ್ತು ರಾತ್ರಿ ಇದ್ದ ವಿಮಾನವೂ ರದ್ದಾಗಿದೆ ಎಂದು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿಜೀ ಅವರು ಇದರ ಸಂಬಂಧ ಆದ್ಯ ಗಮನ ಕೊಟ್ಟಿದ್ದಾರೆ. ಹಿಂದೆ ಉಕ್ರೇನ್ನಲ್ಲಿ ಇಂಥ ಸಮಸ್ಯೆ ಆದಾಗ ಕೇಂದ್ರ ಸರ್ಕಾರವು ಅದನ್ನು ಬಗೆಹರಿಸಿತ್ತು. ಅಲ್ಲಿ ಸಿಲುಕಿದ್ದವರನ್ನು ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗಿತ್ತು. ಈ ಯುದ್ಧ ಅಚಾನಕ್ ಆಗಿ ಆರಂಭವಾಗಿದೆ. ದೆಹಲಿಯ ಸಂಬಂಧಿತರ ಜೊತೆ ನಾನು ಕೂಡ ಮಾತನಾಡುವೆ ಎಂದು ವಿಜಯೇಂದ್ರ ಧೈರ್ಯ ತುಂಬಿದರು.
ತಂಡವು ಸುರಕ್ಷಿತವಾಗಿ ವಾಪಸ್ ಬರಲು ಕ್ರಮ ಕೈಗೊಳ್ಳುವಂತೆ ಕೋರುವುದಾಗಿ ತಿಳಿಸಿದರು. ಆತಂಕಗೊಳ್ಳದಿರಿ. ನೀವೆಲ್ಲರೂ ಸುರಕ್ಷಿತವಾಗಿ ವಾಪಸ್ ಬರಲು ಕ್ರಮ ಕೈಗೊಳ್ಳಲು ಕೋರಲಿದ್ದೇನೆ ಎಂದು ಧೈರ್ಯ ಹೇಳಿದರು.













