ಮನೆ ಪೌರಾಣಿಕ ವಿಷ್ಣು ಪದ – ಪರಮಪದ

ವಿಷ್ಣು ಪದ – ಪರಮಪದ

0

ನಭೋ ಮಂಡಲದಲ್ಲಿ ಸೂರ್ಯ ಮಂಡಲಕ್ಕಿಂತಲೂ ಅನೇಕ ಗುಣಿತವಾಗಿ ಕಾಂತಿಮಂತವಾಗಿ ಪ್ರಕಾಶಿಸುತ್ತಿರುವ ಅಗಸ್ತ್ರ ಪದಕ್ಕೆ ಹತ್ತಿರದಲ್ಲಿಯೇ ಮೂರು ನಕ್ಷತ್ರಾವಸ್ಥಾನಗಳಿವೆ. ಇವುಗಳಲ್ಲಿ ಉತ್ತರ ದಿಕ್ಕಿನಲ್ಲಿ ನೆಲೆಸಿರುವುದು ಐರಾವತ ನಕ್ಷತ್ರ ಸ್ಥಾನ ದಕ್ಷಿಣದಲ್ಲಿರುವುದು ಜಾರದ್ಗವ, ಇವೆರಡಕ್ಕೂ ಮಧ್ಯ ತಳವು ವೈಶ್ವಾನರ ನಕ್ಷತ್ರಾವಸ್ಥಾನ.

Join Our Whatsapp Group

        ನಕ್ಷತ್ರಾ ವಸ್ಥಾನಗಳು ಮೂರರಲ್ಲೂ ಒಂದೊಂದು ಕಡೆ ಮೂರರಂತೆ ಬೀದಿಗಳಿವೆ. ಒಂದೊಂದು ಬೀದಿಗಳಲ್ಲಿಯೂ ಮೂರರಂತೆ ನಕ್ಷತ್ರಗಳು ಕಾಣಿಸುತ್ತವೆ. ಉತ್ತರ ದಿಕ್ಕಿನ ಭಾಗದಲ್ಲಿರುವ ಐರಾವತಾ ಸ್ಥಾನದಲ್ಲಿ ನಾಗಬೀಧಿ, ಗಜಬೀಧಿ, ಐರಾವತೀ ಬೀಧಿಗಳಿವೆ. ಇವುಗಳ ಸ್ವರೂಪಗಳನ್ನು ಸುಲಭವಾಗಿಯೇ ಊಹಿಸಬಹುದು. ಅಶ್ವಿನೀ, ಭರಣೀ, ಕೃತಿಕಗಳ ಸಮುದಾಯವು ನಾಗಬೀಧಿ, ರೋಹಿಣಿ, ಮೃಗಶಿರ ಆರ್ದಗಳ ಕುರುಂಬವು ಗಜಬೀಧಿ. ಪುನರ್ವಸು, ಪುಷ್ಯಮಿ, ಆಶ್ಲೇಷಗಳ ಕದಂಬ ಐರಾವತೀ ಬೀಧಿ. ಜಾಗದ್ಗವ ನಕ್ಷತ್ರಾ ವಸ್ಥಾನದಲ್ಲಿ ಆರ್ಷಭಿ, ಗೋವೀಧಿ ಜಾರದ್ಗವೀ ಬೀಧಿಗಳು ಭಾಸಿಸುತ್ತಿವೆ. ಮಖ, ಪೂರ್ವಫಲ್ಗುಣೀ, ಉತ್ತರ ಫಲ್ಗುಣೀ, ನಕ್ಷತ್ರಗಳ ಸಮಾಹಾರವು ಆರ್ಷಭೀಬೀಧಿ, ಹಸ್ತ, ಚಿತ್ರ, ಸ್ವಾತಿ ನಕ್ಷತ್ರಗಳ ಸಂದೋಹವು ಗೋಬಿಧಿ. ವಿಶಾಖ, ಅನೂರಾಧ, ಜೇಷ್ಠಗಳ ಸಮೂಹ ಜಾರದ್ಗವೀ ಬೀಧಿ. ದಕ್ಷಿಣದಲ್ಲಿ ದ್ಯೋತಿಸುತ್ತಿರುವ ವೈಶ್ವಾನರ ಸ್ಥಾನದಲ್ಲಿ ಅಜಬೀಧಿ, ಮೃಗಬೀಧಿ, ವೈಶ್ವಾನರೀಬೀಧಿ ಗೋಚರಿಸುತ್ತವೆ. ಇವುಗಳಲ್ಲಿ ಅಜಬೀಧಿ ಮೂಲ, ಪೂರ್ವಾಷಾಢ, ಉತ್ತರಾಷಾಢಗಳ ಬೃಂದವಿರುವ ಪ್ರದೇಶ.

      ಶ್ರವಣ, ಧನಿಷ್ಠ, ಶತಭಿಷ ಸಂಘಾತ ಮೃಗಬೀಧಿ, ಪೂರ್ವಾಭಾದ್ರ,ಉತ್ತರಾಭಾದ್ರ, ರೇವತಿ ನಕ್ಷತ್ರಗಳ ಸಮಾವೇಶ ಸ್ಥಳವು ವೈಶ್ವಾನರೀ ರಥ ಅಗಸ್ತ ಪದಕ್ಕೂ ಉತ್ತರದಲ್ಲಿ ಅಜಬೀಧಿಗೂ ದಕ್ಷಿಣ ಭಾಗದಲ್ಲಿ ವೈಶ್ವಾನರ ಪಥಕ್ಕೂ ಆವರಣದಲ್ಲಿ ಮೋಕ್ಷ ಮಾರ್ಗೋಪಾಧಿಯಾದ ಪಿತೃಪಥವಿದೆ. ಇದು ಪಿತೃದೇವತೆಗಳಿಗೂ, ಮಂತ್ರದ್ರಷ್ಟರಾದ ಆದಿಮಹರ್ಷಿಗಳಿಗೂ ನಿಲಯ. ಬ್ರಹ್ಮದಿನವು ಗತಿಸಿ ಕಲ್ಪಾವಸಾನದಲ್ಲಿ ಪ್ರಳಯವು ಸಂಭವಿಸಿದ ನಂತರ ಪದ್ಮಗರ್ಭನು ಮತ್ತೆ ಸೃಷ್ಟಿಗೆ ಉಪಕ್ರಮಿಸಿದಾಗ ಈ ಮಹರ್ಷಿಗಳು ವೇದಮಂತ್ರಗಳನ್ನು ಪುನರುದ್ಧರಿಸಿ ಲೋಕಗಳಲ್ಲಿ ವೇದ ಧರ್ಮವನ್ನು ವ್ಯಾಪಿಸುವಂತೆ ಮಾಡಿದರು. ನಾಗಬೀಧಿಯ ಉತ್ತರ ದಿಕ್ಕಿನಲ್ಲಿ ಎಂಭತ್ತೆಂಟು ಸಾವಿರ ಸಿದ್ದರು ವಾಸಿಸುವ ದೈವಪದವಿದೆ. ಇವರು ಜಿತೇಂದ್ರಿಯರಾಗಿ ಧರ್ಮನಿಷ್ಠೆಯನ್ನು ಹೊಂದಿ ಕಲ್ಪಾಂತರದವರೆಗೂ ಜೀವಿಸಿ ವೈಘಾನಸತೇಜದಲ್ಲಿ ವಿಲೀನವಾಗುತ್ತಾರೆ. ಸಪ್ತರ್ಷಿ ಮಂಡಲಕ್ಕೆ ಊರ್ಧ ಅಭಿಮುಖವಾಗಿ ಲಕ್ಷ ಯೋಜನಗಳ ದೂರದಲ್ಲಿ ಧ್ರುವಪದವಿದೆ. ಈ ಎರಡೂ ಪ್ರದೇಶಗಳಿಗೂ ಮಾಧ್ಯಮಿಕವಾಗಿ ನೆಲೆಸಿರುವುದು ಶ್ರೀಮನ್ನಾರಾಯಣನ ಪರಮಪದವಾದ ವಿಷ್ಣುಪದ. ವಿಷ್ಣುಪದ ಸರ್ವಜೀವರಾಶಿಗೂ ಆರಾಧ್ಯಮಂಡಲ, ಈ ಪವಿತ್ರಾವಾಸವನ್ನು ಆಧಾರವಾಗಿ ಮಾಡಿಕೊಂಡು ಜ್ಯೋತಿಶ್ಚಕ್ರವನ್ನು ಕೈಯಲ್ಲಿಡಿದಿರುವ ಧ್ರುವನು ತನ್ನ ಸ್ಥಾನದಲ್ಲಿ ಪ್ರಕಾಶಿಸುತ್ತಿದ್ದಾನೆ.

         ಚತುರ್ದಶ ಭುವನಗಳಲ್ಲಿಯೂ ಸಚ್ಚರಿತರೆಂದು ಹೆಸರು ಪಡೆದ ತಪೋಧನರೂ, ಸಂಯಮಿ ಪ್ರವರ್ತರೂ, ಈ ಪರಮಪಾವನ ಪದಕ್ಕೆ ಬಂದು ಜನ್ಮ ಜನ್ಮಾಂತರಗಳ ಮಹಾಪುಣ್ಯ ಫಲವನ್ನು ಹೊಂದಿ ಧನ್ಯತೆಯನ್ನು ಪಡೆಯುತ್ತಾರೆ. ವಿಷ್ಣುಪದವು ಶ್ರೀಮನ್ನಾರಾಯಣನ ಚರಣಸ್ಮರಣೆ ಪಾರಾಯಣರಾದ ಭಕ್ತಗಣಗಳಿಗೆ ಎಷ್ಟು ಸನ್ನಿಧಾನದಲ್ಲಿದೆಯೋ ಶ್ರೀಹರಿ ಪಾದಸೇವೆಯನ್ನು ಮಾಡದ ಭಾಗ್ಯಹೀನರಿಗೆ ಅಷ್ಟು ವಿಪ್ರಕೃಷ್ಟವಾಗಿದೆ. ವಿಷ್ಣುನಿಲಯ ಸೌಭಾಗ್ಯವನ್ನು ಅಭಿವರ್ಣಿಸುವುದಕ್ಕೆ ಸಾವಿರ ನಾಲಿಗೆಗಳಿದ್ದರೂ ಸಾಲದು. ಶ್ರೀ ಮಹಾವಿಷ್ಣು ಪಾದಗಳನ್ನು ಹೃದಯದಲ್ಲಿಟ್ಟು ಪೂಜಿಸುತ್ತಾ ಬ್ರಹ್ಮಭಾವನಾಪರರಾದ ಸನಕಾದಿ ಮುನೀಂದ್ರರೂ ದಾಮೋದರನ ಸನ್ನಿಧಿಯ ಸೇವೆಯನ್ನು ಮಾಡದ ಕರ್ಮಭಾವನಾಪರರಾದ ಪುರಂದರಾದಿ ಬೃಂದಾರಕರೂ ಬ್ರಹ್ಮಕರ್ಮ ತತ್ಪರರಾಗಿ ಭವ್ಯವಿವೇಕವನ್ನು ಕಳೆದ ಪದ್ಧಗರ್ಭಾದಿಗಳೂ ಅಷ್ಟಾಕ್ಷರೀ ಮಂತ್ರವನ್ನು ಭಕ್ತಿಪೂರ್ವಕವಾಗಿ ಜಪಿಸಿ ಸಚ್ಚಿದಾನಂದ ನಿಲಯವನ್ನು ‘ತದ್ವಿಷ್ಟೋ ಪರಮಂಪದಂ’ ಎಂದು ಸಂಭಾವಿಸುವರೋ ಆ ವಿಷ್ಣು ಪದವನ್ನು ಎಷ್ಟು ಸ್ತುತಿಸಿದರೂ ಸಾಲದಾಗುತ್ತದೆ.

 ಆಕಾಶಗಂಗೆ :

        ಪರಮೋತ್ತಮವಾದ ವಿಷ್ಣುಪದದಲ್ಲಿ ಶ್ರೀ ವಾಸುದೇವನ ಅಂಘ್ರ ಕಮಲಗಳಿಂದ ಆಕಾಶಗಂಗೆಯು ಅವತರಿಸಿದೆ. ಆತನ ಕಾಲಿನ ಹೆಬ್ಬೆರಳಿನಿಂದ-

ಆವಿರ್ಭವಿಸಿದ ಆ ಗಗನ ಗಂಗಾ ತರಂಗಿಣಿಯು ದಕ್ಷಿಣಾಭಿಮುಖವಾಗಿ ಕೆಳಕ್ಕೆ ಜಾರಿ ಕೈಲಾಸ ಪರ್ವತದ ಮೇಲಿನ ದೂರ್ಜಟಿಯ ಜಟಾಜೂಟವನ್ನು ತಲುಪಿ, ಅಲ್ಲಿಂದ ಅನೇಕ ಸಹಸ್ರ ಯೋಜನಗಳು ಹರಿದು ಸಪ್ತರ್ಷಿ ಮಂಡಲವನ್ನು ಪವಿತ್ರಗೊಳಿಸಿ ನಕ್ಷತ್ರ ಗ್ರಹ ತಾರಾಮಂಡಲಗಳ ಮೂಲಕ ಎಂಭತ್ತೆಂಟು ಸಾವಿರ ಯೋಜನಗಳ ಚಂದ್ರಮಂಡಲವನ್ನು ನೆನೆಸಿ, ಚಂದ್ರ ಚಂದ್ರಿಕಗಳಲ್ಲಿನ ಅಮೃತಧಾರಗಳ ಶೀತಲ ಶ್ವೇತಕಾಂತಿಗಳ ಹೊಳಪಿನಿಂದ ಮೇರುಪರ್ವತದ ಮೇಲಕ್ಕೆ ಧುಮುಕಿ, ದೇವೇಂದ್ರನ ರಾಜಧಾನಿಯಾದ ಅಮರಾವತಿ ಸಮೀಪದಲ್ಲಿನ ಸೀತ, ಅಲಕನಂದ, ಚಕ್ಷು, ಭದ್ರ ಎಂಬ ಹೆಸರುಗಳೊಂದಿಗೆ ನದಿಗಳಾಗಿ ಸೀಳಿ ಜಂಬೂದ್ವೀಪವನ್ನು ಪ್ರವೇಶಿಸಿತು.

        ಅಮರಾವತಿಯ ದಕ್ಷಿಣದ ತುದಿಯ ಆಕಾಶಗಂಗೆಯಿಂದ ಹುಟ್ಟಿದ ಅಲಕನಂದಾ ನದಿಯು ಕೈಲಾಸ ಶಿಖರಗಳ ಮೇಲೆ ಶ್ರೀ ಮಹಾದೇವನ ಕಪರ್ಥದೊಳಕ್ಕೆ ಪ್ರವೇಶಿಸಿ ನೂರು ದಿವ್ಯ ವರ್ಷಗಳ ಕಾಲ ಅಲ್ಲೇ ಇದ್ದು ಆನಂತರ ಕಾಲಾಂತರದಲ್ಲಿ ಸೂರ್ಯವಂಶ ಸಂಜಾತನಾದ ಭಗೀರಥನ ಪ್ರಯತ್ನದಿಂದ ಭೂಮಿಗೆ ಇಳಿದುಬಂದಿತು. ಪೂರ್ವದಲ್ಲಿ ಒಮ್ಮೆ ಕಪಿಲ ಮಹರ್ಷಿಯ ಆಗ್ರಹಕ್ಕೆ ಒಳಗಾಗಿ ಆತನ ಕೋಪಾಗ್ನಿಯಲ್ಲಿ ಸುಟ್ಟು ಭಸ್ಮವಾದ ಸಗರಪುತ್ರರ ಭಸ್ಮಾವಶೇಷಗಳ ಮೇಲೆ ಅಲಕನಂದವನ್ನು ಪ್ರವಹಿಸುವಂತೆ ಮಾಡಿ ಭಗೀರಥನು ತನ್ನ ಪಿತರರಿಗೆ ಪುಣ್ಯ ಲೋಕಗಳನ್ನು ಉಂಟುಮಾಡಿದನು. ಪರಮಪಾವನವಾದ ಭಾಗೀರಥಿ ತೀರವು ರಮಾದೇವೀ ಸಮೇತ ಶ್ರೀಮನ್ನಾರಾಯಣನ ನಿತ್ಯ ನಿವಾಸ, ಐಹಿಕ ಸುಖ ಭೋಗಗಳ ಮೇಲೆ ವಿರಕ್ತಿಯನ್ನು ಹೊಂದಿ ಮೋಕ್ಷಾಭಿಲಾಷಿಯಾಗಿ ತಪಸ್ಸನ್ನು ಮಾಡಲು ಗಂಗಾನದೀ ತೀರಕ್ಕೆ ಬಂದ ವಿಷ್ಣುಭಕ್ತರಿಗೆ ಸಕಲ ಶುಭಗಳೂ ಸಂಪ್ರಾಪ್ತಿಸುತ್ತವೆ. ಗಂಗಾ ಸ್ನಾನವೆಂದರೆ ಸಕಲ ಕಲ್ಮಷ ಮಲಿನಗಳ ಅಪಹರಣ. ಪುಣ್ಯ ಕಾಲದಲ್ಲಿ ಗಂಗಾ ತರಂಗಿಣಿಗೆ ಹೋಗಿ ಶ್ರಾದ್ಧಕರ್ಮಗಳನ್ನು ಆಚರಿಸಿ ತಿಲೋದಕ ಪಿಂಡದಾನಗಳನ್ನು ಜೀವನದಲ್ಲಿ ಕನಿಷ್ಠ ಪಕ್ಷ ಒಮ್ಮೆಯಾದರೂ ಪ್ರಧಾನ ಮಾಡಿದರೆ ಸಾಕು. ಅವರ ಕುಲವೆಲ್ಲಾ ಏಳೇಳು ಜನ್ಮಗಳ ಪಾಪಗಳಿಂದ ಮುಕ್ತಿಯನ್ನು ಪಡೆಯುತ್ತಾರೆ. ದೂರದ ದೇಶಗಳಲ್ಲಿರುವವರು ವಿಷ್ಣು ಪಾದೋದ್ಭವವನ್ನು ದರ್ಶಿಸುವ ಭಾಗ್ಯವು ಉಂಟಾಗಲಿಲ್ಲವೆಂದು ಬೇಸರಪಡುವ ಅಗತ್ಯವಿಲ್ಲ. ಭಕ್ತಿಪೂರ್ವಕವಾಗಿ ಆ ಪುಣ್ಯವಾಹಿನಿಗೆ ನಮಸ್ಕರಿಸಿದರೆ ಸಾಕು. ಮೂರು ಜನ್ಮಗಳಲ್ಲಿ ಸಂಘಟಿಸಿದ ದುಃಖಭಾರವು ತೊಲಗಿ ಹೋಗಿ ಮನಸ್ಸಿಗೆ ಪ್ರಶಾಂತಿಯು ಲಭಿಸುತ್ತದೆ. ಈ ರೀತಿಯಾಗಿ ಪಾಪಾತ್ಮರಿಗೆ ಪುಣ್ಯಫಲವಾಗಿ ನೆಲೆಸಿರುವ ಗಂಗಾನದಿಗೆ ತವರಾದ ವಿಷ್ಣುಪಥದಲ್ಲಿ ಶಾಶ್ವತವಾಗಿ ವೈಷ್ಣವಾಗ್ರೇಸರನಾದ ಶಿಂಶುಮಾರ ಪ್ರಜಾಪತಿಯು ಮಕರ ರೂಪದಲ್ಲಿದ್ದುಕೊಂಡು ಪೂಜಿಸುತ್ತಿದ್ದಾನೆ.

 ಶಿಂಶುಮಾರ ಚಕ್ರ :-

        ಶಿಂಶುಮಾರನ ಪುಣ್ಯಚರಿತೆಯು ಭವಜಲಧಿಗೆ ತಾರಕ ಮಂತ್ರವಿದ್ದಂತೆ. ಪೂರ್ವ ಕಾಲದಲ್ಲಿ ಉತ್ಸಾನಪಾದನ ಹಿರಿಯ ಮಗನು ತಪಸ್ಸನ್ನಾಚರಿಸಿ ಧ್ರುವಪದವನ್ನು ಅಧಿರೋಹಿಸಿದಂತೆಯೇ ಈ ಶಿಂಶುಮಾರನೂ ಸಹ ಶ್ರೀ ಹರಿಯ ಪಾದಪದ್ಮಗಳನ್ನು ನಂಬಿಕೊಂಡು ಆತನ ದಯೆಯಿಂದ ವಿಷ್ಣುಪದವನ್ನು ತಲುಪಿ ಮೊಸಳೆಯ ರೂಪವನ್ನು ಜ್ಯೋತಿರ್ಮಂಡು ತಲುಪಿದನ್ನು ಅತಿ ಬೃಹದ್ರೂಪದಲ್ಲಿದ್ದಂತಹ ಆ ಮಹಾಮಕರಕ್ಕೆ ಬಾಲದ ಕಡೆಗೆ ಧ್ರುವಮಂಡಲವಿದೆ. ಕಾಲಚಕ್ರಕ್ಕೂ, ಸೂರ್ಯಚಂದ್ರ ಗ್ರಹತಾರಾ ಸಮೂಹಕ್ಕೆ ಸಹ ಆಧಾರವಾದ ಶಿಂಶುಮಾರ ಮಹಾ ಚಕ್ರವನ್ನು ತಿರುಗಿಸುತ್ತಾ, ತಾನೂ ಸಹ ಮಂಡಲಾಕಾರದಲ್ಲಿ ಪರಿಭ್ರಮಿಸುತ್ತಾ ಶಿಂಶುಮಾರನು ಲೋಕಾಲೋಕಗಳನ್ನು ದಿಕ್ಕುತಪ್ಪದೇ ಕಾಪಾಡುತ್ತಿದ್ದಾನೆ. ಶಿಂಶುಮಾರ ಪ್ರಜಾಪತಿಯು ಮಕರ ರೂಪದಲ್ಲಿ ಸುತ್ತುತ್ತಾ ನಿಟ್ಟುಸಿರನ್ನು ಬಿಡುತ್ತಿದ್ದಾಗ ಆತನ ನಿಶ್ವಾಸ ಪವನಗಳು ಉದ್ದವಾದ ಅಲೆಗಳಾಗಿ ರೂಪೊಂದಿವೆ. ಧ್ರುವನು ಆ ವಾಯು ನಾಳಗಳೊಂದಿಗೆ ಗ್ರಹ ನಕ್ಷತ್ರಗಳಲ್ಲಿಯೂ ಸೂರ್ಯಚಂದ್ರರನ್ನೂ ತನ್ನ ದೃಢಬಂಧದಲ್ಲಿ ಬಂಧಿಸಿ ಅವುಗಳನ್ನು ವರ್ತುಲಾಕಾರದಲ್ಲಿ ನಡೆಸುತ್ತಿದ್ದಾನೆ. ನಿತ್ಯ ಪ್ರಸರಣಶೀಲವಾದ ಸೂರ್ಯನ ಕಿರಣಗಳಿಂದ ಪ್ರಾಣಶಕ್ತಿಯು ಉಂಟಾಗುತ್ತಿದೆ. ಪ್ರಾಣಶಕ್ತಿಯಿಂದ ಭೂಮಿಯ ಮೇಲೆ ಸಸ್ಯಗಳು, ಗಿಡ, ಮರಗಳು ಮೊಳಕೆಯೆತ್ತಿ ಪ್ರಾಣಿಕೋಟಿ ಸುಸ್ಥಿತಿಗೆ ಮೂಲವಾಗುತ್ತಿವೆ. ಸೂರ್ಯನಿಂದ ಮಳೆಗಳಾಗುತ್ತಿವೆ. ವರ್ಷದಲ್ಲಿ ಎಂಟು ತಿಂಗಳ ಕಾಲ ರವಿಯು ಭೂಮಿಯ ಮೇಲಿರುವ ಜಲವನ್ನು ತನ್ನ ಕಿರಣಗಳೊಂದಿಗೆ ಆಕರ್ಷಿಸಿ ಉಳಿದ ನಾಲ್ಕು ತಿಂಗಳುಗಳಲ್ಲಿ ಆ ಜಲಸಾರವನ್ನು ವೃಷ್ಟಿ ರೂಪದಲ್ಲಿ ಭೂಮಿಯ ಮೇಲೆ ಬೀಳುವಂತೆ ಮಾಡಿ ಸಸ್ಯಗಳು, ಗಿಡ, ಮರಗಳನ್ನು ಹೇರಳವಾಗಿ ಬೆಳೆಸುತ್ತಿದ್ದಾನೆ.

       ಈ ರೀತಿಯಿಂದ ಭೂತರಾಶಿಗೆಲ್ಲಾ ಅನ್ನ ಪಾನೀಯಗಳು ಲಭಿಸುತ್ತಿವೆ. ಋತುಕರ್ತನಾದ ಪ್ರಭಾಕರನು ಭೂಮಿಯ ಉಪರಿತಳದ ಮೇಲೆ ಗಾಳಿಯಲ್ಲಿನ ತೇವಾಂಶವನ್ನು ತನ್ನ ಕಿರಣಗಳ ಮೂಲಕ ಹೀರಿಕೊಂಡು, ಆ ಉದಕ ಸಾರವನ್ನು ಶೀತಕಿರಣಮಂಡಲದೊಳಕ್ಕೆ ಪ್ರಸರಿಸುವಂತೆ ಮಾಡುತ್ತಾನೆ. ಸೂರ್ಯನಿಂದ ಗ್ರಹಿಸಿದ ಆ ಜಲಬಿಂದುಗಳನ್ನು ಶೀತಕಿರಣನು ಗಗನಮಂಡಲದಲ್ಲಿ ನಿಕ್ಷೇಪಿಸುತ್ತಾನೆ. ಅಲ್ಲಿ ವ್ಯೂಮ್ ಧೂಮಗಳು, ಜ್ಯೋತಿಸ್ಸಗಳು ಮರತ್ತುಗಳ ಸನ್ನಿಪಾತ (ಶೀತಲೀಕರಣ) ದಿಂದ ಆಕಾಶದಲ್ಲಿ ಅಭ್ರಸಮಿತಿಯು ಜನ್ನಿಸುತ್ತದೆ. ಆ ರೀತಿಯಾಗಿ ಜನಿಸಿದ ಮೇಘಗಳಿಗೆ ವೃಷ್ಠಿ ಸಂಸ್ಕಾರ ಕಾಲದಲ್ಲಿ ವಾಯುಬಂಧನಗಳು ಸಡಿಲಿಸಿ ಮಳೆಬಿಂದುಗಳಾಗಿ ಭೂಮಿಯ ಮೇಲೆ ಬೀಳುತ್ತವೆ. ಈ ವಿಧವಾಗಿ ಸಮುದ್ರಗಳು, ನದಿಗಳು, ಭೂಮಿ, ಭೂತರಾಶಿ ಗಳೆಲ್ಲದರಲ್ಲಿಯೂ ಸೂರ್ಯನು ಜಲಕಣಗಳನ್ನು ಆಕರ್ಷಿಸಿ ಮಳೆಯ ಮೂಲಕ ಮತ್ತೆ ಸುರಿಸುತ್ತಿದ್ದಾನೆ. ಸೂರ್ಯನು ಭೂಮಿಯಿಂದ ಗ್ರಹಿಸಿದ ನೀರಿನ ಕಣಗಳು ಮತ್ತೆಮೇಘಗಳ ಮೂಲಕ ಕೆಳಕ್ಕೆ ಇಳಿದು ಬರುವಂತೆಯೇ ದೇವಲೋಕದಲ್ಲಿ ಹರಿಯುತ್ತಿರುವ ಕಾಶಗಂಗೆಯಿಂದ ಗ್ರಹಿಸಿದ ಅದರ ಬಿಂದುಗಳೂ ಸಹ ಭೂಮಿಗೆ ಮಳೆಯ ರೂಪದಲ್ಲಿ ಬಂದು ಸೇರುತ್ತಿದೆ. ಆದರೆ ಈ ಗಗನ ಗಂಗಾಜಲವು ಮೇಘಗಳಿಂದಲ್ಲದೇ ಆಕಾಶದಲ್ಲಿ ಸ್ವಚ್ಛವಾಗಿ ಮೇಘಗಳು ಇಲ್ಲದೇಯಿದ್ದಾಗ ಸೂರ್ಯನ ಕಿರಣಗಳ ಮೂಲಕ ನೆಲದ ಮೇಲೆ ಮಳೆಬಿಂದುಗಳಾಗಿ ಸುರಿಯುತ್ತಿದೆ. ಈ ವಿಧವಾಗಿ ಸುರಿದ ಪುಣ್ಯಜಲದಲ್ಲಿ ಸ್ನಾನ ಮಾಡಿದವರು ನಿಜಕ್ಕೂ ಅದೃಷ್ಟವಂತರು ಅವರಿಗೆ ಜನ್ಮತಯ ದುಃಖ ತಾಪಗಳು ತೊಲಗಿ ಅಘಮರ್ಷಣ ಮಹಾಫಲಗಳುಂಟಾಗುತ್ತವೆ. ಸೂರ್ಯನು ಕೃತಿಕದಿಂದ ಕೂಡಿದ ಬೆಸಸಂಖ್ಯೆಯ ನಕ್ಷತ್ರಗಳಲ್ಲಿ ಪ್ರವೇಶಿಸಿದಾಗ ಮಾತ್ರ ಮೇಘಗಳಿಲ್ಲದ ಅಂಬರ ತಳದಿಂದ ಸೂರ್ಯನ ಕಿರಣಗಳು ಮಳೆಯನ್ನು ತರಲಾರವು. ಆ ಸಮಯದಲ್ಲಿ ಭೂಮಿಯ ಎಂಟು ದಿಕ್ಕುಗಳಲ್ಲಿಯೂ ನೆಲೆಸಿರುವ ದಿಗ್ಗಜಗಳು ಅವರ ಕಣಗಳನ್ನು ಸೂರ್ಯನಿಂದ ಪಡೆದು ತಮ್ಮ ಸೊಂಡಿಲುಗಳ ಮೂಲಕ ನೆಲಕ್ಕೆ ಸುರಿಯುತ್ತಾರೆ. ಸೂರ್ಯನು ಸರಿ ಸಂಖ್ಯೆಗಳುಳ್ಳ ನಕ್ಷತ್ರಗಳಲ್ಲಿದ್ದಾಗ ಮಾತ್ರವೇ ಆತನ ಕಿರಣಗಳು ಜಲವೃಷ್ಟಿಯನ್ನು ಭೂಮಿಗೆ ತರುತ್ತವೆ.

     ಸೂರ್ಯನು ಇಲ್ಲದೇಯಿದ್ದರೆ ಸಮಸ್ತ ಜೀವಿಗಳಿಗೂ ಜೀವನೋಪಾಯವಿಲ್ಲ.

ಲೋಕದಲ್ಲಿನ ಯಜ್ಞಯಾಗಗಳು, ಚತುರ್ವಣ್ರ ವೇದವಾಣಿ, ದೇವಾಲಯಗಳು, ಪಶುಪಕ್ಷಿ, ಮನುಷ್ಯ, ಚರಾಚರ ಜೀವರಾಶಿಯೆಲ್ಲಾ ಆತನ ಕಿರಣಗಳು ಕೊಡುವ

ಪ್ರಾಣಶಕ್ತಿಯೊಂದಿಗೆ ಪ್ರಾಣವನ್ನು ತುಂಬಿಕೊಂಡು ಜೀವಿಸುತ್ತಿವೆ. ಈ ರೀತಿಯಾಗಿ ಲೋಕಾಲೋಕಗಳಿಗೂ ನಾಯಕನಾದ ವಾಸುದೇವನು ಶಿಂಶುಮಾರ ಚಕ್ರಕ್ಕೆ ಭದ್ರವಾದ ಆಧಾರ ಶಿಂಶುಮಾರನು ಧ್ರುವ ಸ್ಥಾನಕ್ಕೆ ಆಧಾರ, ಧ್ರುವನು ಕಾಲಾತ್ಮಕನಾದ ಸೂರ್ಯನಿಗೆ ಆಧಾರ. ಸೂರ್ಯನು ಸಕಲ ಚರಾಚರ ಜೀವರಾಶಿಗೂ ಆಧಾರ. ಸರ್ವಾಧಾರನಾದ ಶ್ರೀಮನ್ನಾರಾಯಣನ ದಿವ್ಯಶಕ್ತಿಯನ್ನು ಉಪಾಸನೆ ಮಾಡಿ ಮೋಕ್ಷ ಪದವಿಯನ್ನು ಹೊಂದುವುದಕ್ಕಿಂತಲೂ ಮಿಗಿಲಾಗಿ ಮುಮುಕ್ಷುರಿಗೆ ಅನ್ಯ ಬಯಕೆಗಳು ಇರುವುದಿಲ್ಲ” ಎಂದು ಪರಾಶರ ಮುನಿಗಳು ಮೈತ್ರೇಯನೊಂದಿಗೆ ಕೇಳಿದನು.