ಮನೆ ರಾಜ್ಯ 12 ಡಿ ನೀಡಿರುವ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರಿಗೆ ಮನೆಯಿಂದಲೇ ಮತದಾನ: ಡಾ.ಕೆ.ವಿ.ರಾಜೇಂದ್ರ

12 ಡಿ ನೀಡಿರುವ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರಿಗೆ ಮನೆಯಿಂದಲೇ ಮತದಾನ: ಡಾ.ಕೆ.ವಿ.ರಾಜೇಂದ್ರ

0

ಮೈಸೂರು:  ಈಗಾಗಲೇ 12ಡಿ ಅಡಿ ಅರ್ಜಿ ನೀಡಿರುವ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನ ಮತದಾರರಿಗೆ ಏಪ್ರಿಲ್ 29 ರಿಂದ ಮೇ 06 ರ ವರೆಗೆ ಮನೆ ಮನೆಗೆ ತೆರಳಿ ಬ್ಯಾಲೆಟ್ ಪೇಪರ್ ನೀಡಿ ಮತದಾನ ಮಾಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಅವರು ತಿಳಿಸಿದರು.

Join Our Whatsapp Group

ಮೈಸೂರು ವಿಶ್ವ ವಿದ್ಯಾನಿಲಯದ ಸೆನೆಟ್ ಭವನದಲ್ಲಿ ಹಮ್ಮಿಕೊಂಡಿದ್ದ ಸೆಕ್ಟರ್ ಅಧಿಕಾರಿಗಳು ಹಾಗೂ ಮತದಾನ ಪ್ರಕ್ರಿಯೆಯ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ 12 ಡಿ ಅಡಿ ಅರ್ಜಿ ಸಲ್ಲಿರುವವರ ಮನೆ ಮನೆಗೆ ತೆರಳಿ ಮತದಾನ ಅಧಿಕಾರಿಗಳು ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಿಸುವರು. ಈ ಸಂದರ್ಭದಲ್ಲಿ ಮತ ಯಾರಿಗೆ ಚಲಾಯಿಸುತ್ತಾರೆ ಎಂಬುದನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ಮಾಡಲಾಗುವುದು. ಮತದಾನ ಮಾಡಿಸಲು ಆರ್.ಒ.ಗಳು ರೂಟ್ ಮ್ಯಾಪ್ ಹಾಗೂ ನಿಗಿದಿತ ಸಮಯ ಹಾಗೂ ದಿನಾಂಕವನ್ನು ನೀಡುವರು ಅ ಸಮಯದಲ್ಲಿ  ನಿರ್ದಿಷ್ಟ ವಿಳಾಸಗಳಿಗೆ ತೆರಳಿ ಮತದಾನವನ್ನು ಬ್ಯಾಲೆಟ್ ಪೇಪರ್‍ನಲ್ಲಿ ಪಡೆಯಬೇಕು ಎಂದು ತಿಳಿಸಿದರು.

ಸೆಕ್ಟರ್ ಅಧಿಕಾರಿಗಳು ಮತದಾನ ಪ್ರಕ್ರಿಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ರೂಟ್ ಮ್ಯಾಪ್ ಪ್ರಕಾರ ಮಾಹಿತಿಯನ್ನು ನೀಡಬೇಕು.  ತಂಡದಲ್ಲಿ ಪ್ರಿಸೈಡಿಂಗ್ ಅಧಿಕಾರಿಗಳು,ಮೈಕ್ರೋ ಅಬ್ಸರ್ವರ್ಸ್, ಪೋಲಿಂಗ್ ಅಧಿಕಾರಿಗಳು, ಪೊಲೀಸ್ ಸಿಬ್ಬಂಧಿ ವಿಡಿಯೋಗ್ರಾಫರ್ ಹಾಗೂ ಗ್ರೂಪ್ ಡಿ ಸಿಬ್ಬಂದಿ ಭಾಗವಹಿಸುತ್ತಾರೆ. ಪೋಸ್ಟಲ್ ಬ್ಯಾಲೆಟ್ ಮತದಾನ ಸಂದರ್ಭದಲ್ಲಿ ಅಭ್ಯರ್ಥಿಗಳು ತಮ್ಮ ಏಜೆಂಟ್‍ಗಳನ್ನು ನೇಮಿಸಿಕೊಳ್ಳಲು ಅವಕಾಶವಿರುತ್ತದೆ. ಈ ಸಂಬಂಧ ತಮ್ಮ ಏಜೆಂಟ್‍ಗಳ ವಿವಿರವನ್ನು ಆರ್.ಒ ಗಳಿಗೆ ನೀಡಿರಬೇಕು. ಆರ್.ಒ ಗಳಿಂದ ದೃಢೀಕರಿಸಲ್ಪಟ್ಟ ಏಜೆಂಟರ್‍ಗಳು ಮಾತ್ರ ಬ್ಯಾಲೆಟ್ ಮತದಾನ ಪಡೆಯುವ ಸಂದರ್ಭದಲ್ಲಿ ಉಪಸ್ಥಿತರಿರಲು ಅವಕಾಶವಿರುತ್ತದೆ ಎಂದರು.

ಬ್ಯಾಲೆಟ್ ಮತದಾನದ ವೇಳೆ ಯಾವುದೇ ವ್ಯಕ್ತಿ ಪ್ರಭಾವ ಬೀರಲು ಅವಕಾಶ ಇರಬಾರದು. ಮತದಾನ ಮಾಡುವ ವ್ಯಕ್ತಿ ಅಂಧರಾಗಿದ್ದರೆ ಅಥವಾ ಹಾಸಿಗೆಯ ಮೇಲಿದ್ದು ಅಸಕ್ತರಾಗಿದ್ದರೆ ಅಂತವರು 18 ವರ್ಷ ತುಂಬಿದ ಒಬ್ಬರು ವೋಟಿಂಗ್ ಅಸಿಸ್ಟೆಂಟ್ ಅನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಒಬ್ಬ ವೋಟಿಂಗ್ ಅಸಿಸ್ಟೆಂಟ್ ಒಬ್ಬರಿಗೆ ಮಾತ್ರ ಸಹಾಯಕರಾಗಿ ನೇಮಕವಾಗಬಹುದು ಎಂದರು.

ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರು ಯಾವುದೇ ಲೋಪವಾಗದಂತೆ ಕರ್ತವ್ಯ ನಿರ್ವಹಿಸಿ, ತಮಗೆ ಯಾವುದೇ ಅನುಮಾನಗಳಿದ್ದರೆ ಕೇಳಿ ಬಗೆಹರಿಸಿಕೊಳ್ಳಿ, ಗಡಿಬಿಡಿಯಲ್ಲಿ ತೊಂದರೆ ತಂದುಕೊಳ್ಳಬೇಡಿ. ವಿಷಯವನ್ನು ಪೂರ್ಣವಾಗಿ ಅರ್ಥಮಾಡಿಕೊಂಡು ಕಾರ್ಯನಿರ್ವಹಿಸಿ ಎಂದು ಸಲಹೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಚುನಾವಣಾ ವೀಕ್ಷಕರಾದ ರಾಮ್ ಪ್ರತಾಪ್ ಸಿಂಗ್ ಜೊಡನ್, ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜರಾಂ ಸೇರಿದಂತೆ ಸೆಕ್ಟರ್ ಅಧಿಕಾರಿಗಳು, ಪ್ರಿಸೈಡಿಂಗ್ ಅಧಿಕಾರಿಗಳು  ಹಾಗೂ ಪೋಲಿಂಗ್ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದಿನ ಲೇಖನಟಿ20 ಕ್ರಿಕೆಟ್​​’ನಲ್ಲಿ ಅಪರೂಪದ ದಾಖಲೆ ಬರೆದ ರವೀಂದ್ರ ಜಡೇಜಾ..!
ಮುಂದಿನ ಲೇಖನಸಲಿಂಗ ವಿವಾಹಕ್ಕೆ ಮಾನ್ಯತೆ ಶಾಸಕಾಂಗಕ್ಕೆ ಬಿಟ್ಟ ವಿಚಾರ ಎಂದ ಸುಪ್ರೀಂ; ಮದುವೆ ಹಣೆಪಟ್ಟಿ ಹೊರತಾದ ಹಕ್ಕು ನೀಡಲು ಸಲಹೆ