ವಿಜಯಪುರ : ಜಿಲ್ಲೆಯಲ್ಲಿ ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದ ತೋಟದಲ್ಲಿ ಟ್ರ್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದುವೊಂದು ಪತ್ತೆಯಾಗಿದೆ. ಪತ್ತೆಯಾದ ರಣಹದ್ದಿಗೆ ಟ್ರ್ಯಾಕರ್, ಜಿಪಿಎಸ್ ಹಾಗೂ ಕ್ಯಾಮರಾ ಮಾದರಿಯ ವಸ್ತುವನ್ನು ಅಳವಡಿಸಲಾಗಿದೆ. ಜೊತೆಗೆ ಅದರ ಕಾಲಿನಲ್ಲಿ ಗುರುತಿನ ಸಂಖ್ಯೆಯ ಟ್ಯಾಗ್ ಇರುವುದು ಕಂಡುಬಂದಿದೆ.
ರಣಹದ್ದು ಕಂಡ ಸ್ಥಳೀಯರು 112ಗೆ ಕರೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ರಣಹದ್ದನ್ನು ವಶಕ್ಕೆ ಪಡೆದು, ಝಳಕಿ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ. ನಂತರ ಠಾಣೆಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮಹಾರಾಷ್ಟ್ರದ ನಾಗಪೂರ ಬಳಿಯ ಮೇಲಘಾಣ ಪ್ರದೇಶದಿಂದ ರಣಹದ್ದು ಬಂದಿದೆ ಎನ್ನಲಾಗಿದೆ. ಜಿಪಿಎಸ್, ಟ್ರ್ಯಾಕರ್ ಭಾರವಾದ ಕಾರಣ ಬಸವಳಿದಿದ್ದ ಪಕ್ಷಿ ತೆಳಗೆ ಬಿದ್ದಿದೆ. ಮಹಾರಾಷ್ಟ್ರದ ಅರಣ್ಯ ಇಲಾಖೆಯಿಂದ ರಣಹದ್ದಿಗೆ ಜಿಪಿಎಸ್ ಹಾಗೂ ಟ್ರ್ಯಾಕರ್ ಅಳವಡಿಸಿದ್ದಾರೆಂಬ ಮಾಹಿತಿ ಇದೆ.
ರಣಹದ್ದುಗಳ ಜೀವನ ಶೈಲಿ ಹಾಗೂ ಇತರೆ ಪಕ್ಷಿಗಳ ಮಾಹಿತಿ ಪಡೆಯೋಕೆ ಈ ಪ್ರಯತ್ನ ಮಾಡಲಾಗಿದೆ. ರಣಹದ್ದು ಸಂಖ್ಯೆ ಕಡಿಮೆಯಾಗಿರೋ ಕಾರಣ ಹೆಚ್ಚಿನ ಮಾಹಿತಿ ಪಡೆಯೋಕೆ ಮಾಹಾರಾಷ್ಟ್ರ ಅರಣ್ಯಾಧಿಕಾರಿಗಳು ಈ ಯೋಜನೆ ಮಾಡಿದ್ದಾರೆ. ರಣಹದ್ದು ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳ ಸುಪರ್ದಿಯಲ್ಲಿದೆ.
ಅಧಿಕಾರಿಗಳು ರಣಹದ್ದಿಗೆ ಆರೈಕೆ ಮಾಡಿ, ನಂತರ ಮಹಾರಾಷ್ಟ್ರದ ಅರಣ್ಯಾಧಿಕಾರಿಗಳ ಜೊತೆಗೆ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಸದ್ಯ ರಣಹದ್ದಿನ ಆರೋಗ್ಯ ಸ್ಥಿತಿಗತಿ ನೋಡಿಕೊಂಡು ಹಾರಿ ಬಿಡಲು ಚರ್ಚೆ ಮಾಡಲಾಗಿದ್ದು, ಮಹಾರಾಷ್ಟ್ರದ ಅರಣ್ಯಾಧಿಕಾರಿಗಳ ಸೂಚನೆ ಮೇರೆಗೆ ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ.















