ಬೆಂಗಳೂರು : ರಾಜ್ಯದಲ್ಲಿರುವ ನದಿಗಳ ನೀರಿನ ಕಲುಷಿತ ವಾತಾವರಣ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯೊಂದನ್ನು ಸಿದ್ಧಪಡಿಸಿದೆ. ಈ ವರದಿಯಲ್ಲಿ ರಾಜ್ಯದ 12 ನದಿಗಳ ನೀರು ಕುಡಿಯಲು ಸುರಕ್ಷಿತವಲ್ಲ ಎಂಬ ಮಾಹಿತಿ ನೀಡಿದೆ.
ಸೆಪ್ಟೆಂಬರ್ನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯದ 12 ಪ್ರಮುಖ ನದಿಗಳ ನೀರಿನ್ನು 32 ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದು, 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ನೀಡಿದೆ. 12 ನದಿಗಳ ನೀರಲ್ಲಿ ಆಮ್ಲಜನಕದ ಕೊರತೆ ಇರೋದು ಪತ್ತೆಯಾಗಿದ್ದು, ಪರೀಕ್ಷೆಗೆ ಒಳಪಟ್ಟ ನದಿಗಳ ಪೈಕಿ ಒಂದೂ ನದಿಗೂ ʼಎʼ ದರ್ಜೆ ಸಿಕಿಲ್ಲ.
ಹೀಗಾಗಿ ಯಾವುದೇ ನದಿ ನೀರನ್ನು ನೇರವಾಗಿ ಕುಡಿಯಲು ಬಳಕೆ ಮಾಡಬಾರದು. ನದಿಗಳ ನೀರಿನಲ್ಲಿ ಆಮ್ಲಜನಕದ ಕೊರತೆ, ಬಯೋಕೆಮಿಕಲ್ ಆಕ್ಸಿಜನ್, ಕೋಲಿಫಾರ್ಮ್ ಬ್ಯಾಕ್ಟೀರಿಯಾ, ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಜೀವನದಿ ಕಾವೇರಿಯೂ ಸೇರಿ 12 ನದಿ ನೀರು ಕಲುಷಿತವಾಗಿದೆ. ನೇತ್ರಾವತಿ ನದಿಗೆ ಮಾತ್ರ ಬಿ ದರ್ಜೆ ಸಿಕ್ಕಿದ್ದು, ಸ್ನಾನ ಹಾಗೂ ಗೃಹಬಳಕೆಗೆ ನೇತ್ರಾವತಿ ನದಿ ಯೋಗ್ಯ ಎನ್ನಲಾಗಿದೆ. ಇನ್ನುಳಿದಂತೆ 8 ನದಿಗಳಿಗೆ ಸಿ ಹಾಗೂ 3 ನದಿಗಳಿಗೆ ಡಿ ದರ್ಜೆ ಸಿಕ್ಕಿದೆ.
‘ಸಿ’ ದರ್ಜೆ ಹೊಂದಿರುವ ನದಿ ನೀರನ್ನು ಸಂಸ್ಕರಿಸಿ ಬಳಸಬಹುದಾಗಿದ್ದು, ಆ ದರ್ಜೆಯ ನೀರನ್ನು ಮೀನುಗಾರಿಕೆ ಸೇರಿ ಇನ್ನಿತರ ಚಟುವಟಿಕೆಗೆ ಬಳಸಬಹುದಾಗಿದೆ ಎಂದು ಪರೀಕ್ಷೆಯಲ್ಲಿ ತಿಳಿದುಬಂದಿದೆ. ರಾಜ್ಯದಲ್ಲಿ ಕಾವೇರಿ, ಕೃಷ್ಣ ಸೇರಿ 7 ಪ್ರಮುಖ ನದಿಗಳು, ಅವುಗಳನ್ನು ಸಂಧಿಸುವ 20ಕ್ಕೂ ಹೆಚ್ಚಿನ ಉಪನದಿಗಳಿವೆ.
ಆ ಪೈಕಿ ಶೇ.80ಕ್ಕೂ ಹೆಚ್ಚಿನನದಿಗಳು ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಹುಟ್ಟುತ್ತವೆ. ಈ ನದಿಗಳಲ್ಲಿ ಸುಮಾರು 3,700 ಟಿಎಂಸಿಗೂ ಹೆಚ್ಚಿನ ನೀರು ಹರಿಯುತ್ತವೆ. ಆದರೆ, ಕೈಗಾರಿಕೆ, ಗೃಹಬಳಕೆ ತ್ಯಾಜ್ಯ ನೀರು ನದಿಗಳಿಗೆ ಸೇರಿ ನೀರು ಕಲುಷಿತವಾಗಿ ಬಳಕೆಗೆ ಯೋಗ್ಯವಲ್ಲದಂತಾಗಿದೆ.















