ಬಳ್ಳಾರಿ: ಜನರ ಇಚ್ಛೆಯಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರೈಸಬೇಕು. ಆದರೆ, ಅವರ ಆಂತರಿಕ ಬೇಗುದಿಯಿಂದ ಸರ್ಕಾರ ಬಿದ್ದರೆ ಅದಕ್ಕೆ ನಾವು ಹೊಣೆಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 2023ನಲ್ಲಿ ನಡೆದ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಗೆ ಬಹುಮತ ನೀಡಿದ್ದಾರೆ. ನಾನು ಓರ್ವ ಕೇಂದ್ರ ಸಚಿವನಾಗಿ ಈ ಸರ್ಕಾರ ಐದು ವರ್ಷ ಪೂರೈಸಬೇಕು. ತುಘಲಕ್ ದರ್ಬಾರ್ ಆಗಬಾರದು. ಆದರೆ, ಆಂತರಿಕ ಬೇಗುದಿ, ಅಸಮಾಧಾನದ ಕಾರಣಕ್ಕೆ ಸರ್ಕಾರ ಬಲಿಯಾದರೆ ಏನು ಮಾಡಲಾಗದು. ಅದಕ್ಕೆ ನಾವು ಹೊಣೆಯಲ್ಲ ಎಂದು ತಿಳಿಸಿದರು.
ಸರ್ಕಾರ ವರ್ಷದಲ್ಲಿ ಮಾಡಿದ ಸಾಧನೆ ಶೂನ್ಯ. ವರ್ಷ ಆದರೂ ಒಂದೇ ಒಂದು ಕಿಮೀ ರಸ್ತೆಗಳಿಲ್ಲ, ಆಸ್ಪತ್ರೆಗಳಿಗೆ ಔಷಧ ಇಲ್ಲ, ಮೂರು ತಿಂಗಳಾದರೂ ಸರ್ಕಾರಿ ನೌಕರರಿಗೆ ವೇತನ ನೀಡಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದರು.
ತುಷ್ಠೀಕರಣ ನೆಪದಲ್ಲಿ ರಾಮೇಶ್ವರ ಬಾಂಬ್ ಸ್ಫೋಟವನ್ನು ಸಿಲಿಂಡರ್ ಸ್ಫೋಟ ಅಂದರು. ಬಯಲಾದ ಮೇಲೆ ಮಾಮೂಲು ಹೇಳಿಕೆ ನೀಡಿದರು ಎಂದು ಅವರು ಕಿಡಿಕಾರಿದರು.
ಇಂಥ ವಿಷಯಗಳ ವಿರುದ್ಧ ಧ್ವನಿ ಎತ್ತಿದವರ ಮೇಲೆ ಕೇಸ್ ಹಾಕಿ ಬೆದರಿಕೆ ಒಡ್ಡಲಾಗುತ್ತಿದೆ ಎಂದರು.
ಅತ್ಯಂತ ಅದಕ್ಷ ಶಿಕ್ಷಣ ಮಂತ್ರಿ. ಸರ್ಕಾರ ದಿವಾಳಿ ಆಗಿದೆ. ಭ್ರಷ್ಟಾಚಾರ ತಾಂಡವ ಆಡುತ್ತಿದೆ. ದೇಶದ ಅನೇಕ ಭಾಗಗಳಲ್ಲಿ ನಡೆಯುತ್ತಿರುವ ಚುನಾವಣೆಗಳಿಗೆ ಕಾಂಗ್ರೆಸ್ ಸರ್ಕಾರ ಎಟಿಎಂ ಆಗಿದೆ ಎಂದರು ಜೋಶಿ ಕಿಡಿಕಾರಿದರು.