ಮನೆ ರಾಜ್ಯ ಸರ್ಕಾರ ಮಾಡ್ತಿರೋ ಜಾತಿಗಣತಿಯನ್ನಯ ನಾವು ಒಪ್ಪಲ್ಲ ಸಾಧ್ಯವಿಲ್ಲ – ಸಿ.ಸಿ. ಪಾಟೀಲ್

ಸರ್ಕಾರ ಮಾಡ್ತಿರೋ ಜಾತಿಗಣತಿಯನ್ನಯ ನಾವು ಒಪ್ಪಲ್ಲ ಸಾಧ್ಯವಿಲ್ಲ – ಸಿ.ಸಿ. ಪಾಟೀಲ್

0

ಬೆಂಗಳೂರು : ಸರ್ಕಾರ ಮಾಡುತ್ತಿರುವ ಜಾತಿ ಗಣತಿ ಒಪ್ಪಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಸಿಸಿ ಪಾಟೀಲ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ಮಾಡುತ್ತಿರುವ ಜಾತಿ ಗಣತಿ ಸರ್ವೆ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಮಾಡುತ್ತಿರುವ ಈ ಜಾತಿ ಗಣತಿ ನಾವು ಒಪ್ಪಲ್ಲ. ಗಣತಿ ಪ್ರಾರಂಭ ಆಗಿದೆ. ಇವತ್ತು ಹೈಕೋಟ್‌ನಲ್ಲಿ ಕೇಸ್ ಇದೆ. ಏನಾಗುತ್ತೋ ನೋಡೋಣ. ಹೈಕೋರ್ಟ್‌ನಿಂದ ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು.

ಇದು ಯಾವ ರೀತಿ ಸರ್ಕಾರ ಅಂತ ಅರ್ಥ ಆಗುತ್ತಿಲ್ಲ. ಒಂದು ಸಾರಿ ಜಾತಿ ಗಣತಿ ಅಂತಾರೆ. ಇನ್ನೊಂದು ಸಾರಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಎನ್ನುತ್ತಾರೆ. ಹಾಗಾದರೆ ಇದುವರೆಗೂ ಇವರ ಬಳಿ ಅಂಕಿಅಂಶಗಳು ಇಲ್ಲವಾ? ಈ ರೀತಿ ಸರ್ಕಾರ ನಡೆಸಿದರೆ ಹೇಗೆ ಎಂದು ಪ್ರಶ್ನೆ ಮಾಡಿದರು. ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಈ ಗಣತಿ ಮಾಡಿಸುತ್ತಿದ್ದಾರೆ ಅನ್ನಿಸುತ್ತೆ. ಸರ್ಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ವಿರೋಧಿ ಅಲೆ ಪಕ್ಷದಲ್ಲಿ ಮತ್ತು ಪಕ್ಷದ ಹೊರಗೆ ಇದೆ. ಅದನ್ನ ಮರೆ ಮಾಚೋದಕ್ಕೆ ಈ ಗಣತಿ ಮಾಡಿಸುತ್ತಿದ್ದಾರೆ ಎನಿಸುತ್ತಿದೆ.

ಸಿದ್ದರಾಮಯ್ಯ ಇಂತಹ ವಿಷಯಗಳಲ್ಲಿ ಕ್ಲೆವರ್ ಇದ್ದಾರೆ. ಜಾತಿಗಣತಿ ಅನ್ನೋ ಕಾರ್ಡ್ ಅನ್ನ ಸಿದ್ದರಾಮಯ್ಯ ಪ್ಲೇ ಮಾಡುತ್ತಿದ್ದಾರೆ ಅನ್ನಿಸುತ್ತೆ. ಸಿಎಂ-ಡಿಸಿಎಂ ನಡುವೆ ಕುರ್ಚಿ ಕಿತ್ತಾಟ ಇದೆ. ಅದನ್ನ ಮರೆಮಾಚೋಕೆ ಇದನ್ನ ಮಾಡುತ್ತಿರಬಹುದು. ಇವರು ಒಂದೇ ದಿನದಲ್ಲಿ ಬೇಕಾದರೆ ಸರ್ವೆ ಮುಗಿಸುತ್ತಾರೆ. ಅವರಿಗೆ ಬೇಕಾದ ಹಾಗೇ ಸಮೀಕ್ಷೆ ಮುಗಿಸುತ್ತಾರೆ. ಅವರ ಮನೆಯಲ್ಲಿ ಕೂತೇ ಬರೆಯುತ್ತಾರೆ. ರಾತ್ರಿ ಮನೆ ಮುಂದೆ ಬಂದು ಸ್ಟಿಕರ್ ಅಂಟಿಸಿದ್ರೆ ಮುಗೀತು. ಮಿಕ್ಕಿದ್ದು ಅವರೇ ಬರೆದುಕೊಳ್ಳುತ್ತಾರೆ. ಈ ಗಣತಿ ಬಿಜೆಪಿ ಒಪ್ಪಲ್ಲ.ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ಅವರೇ ಈ ಸಮೀಕ್ಷೆ ಒಪ್ಪಲು ರೆಡಿ ಇಲ್ಲ. ಗಣತಿ ಬಗ್ಗೆ ಮುಂದೆ ಹೋರಾಟ ಮಾಡೋಣ ಎಂದರು.

ಧರ್ಮದಲ್ಲಿ ರಾಜಕೀಯ ಮಾಡಬೇಡಿ, ಚುನಾವಣೆ ಅಖಾಡದಲ್ಲಿ ರಾಜಕೀಯ ಮಾಡಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅವರೇ ಹಾಗಾದರೆ ವಿಧಾನಸಭೆಯನ್ನು ವಿಸರ್ಜನೆ ಮಾಡಿ ಚುನಾವಣೆಗೆ ಬನ್ನಿ. ನಾವು ಚುನಾವಣೆ ಎದುರಿಸೋಕೆ ರೆಡಿ ಇದ್ದೇವೆ. ಇವತ್ತೇ ಚುನಾವಣೆ ಆದರೂ ನಾವು ರೆಡಿ. ಸಿದ್ದರಾಮಯ್ಯ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಬರಲಿ ಎಂದು ಸಿಎಂಗೆ ಸವಾಲ್ ಹಾಕಿದರು.