ಗುರುವಾರ ಭಗವಾನ್ ವಿಷ್ಣುವನ್ನು ಮತ್ತು ಲಕ್ಷ್ಮಿಯನ್ನು ಪೂಜಿಸಬೇಕು. ಇದರಿಂದ ಸಿರಿ, ಸಂಪತ್ತು, ಸುಖ, ಶಾಂತಿ ಪಡೆಯುವಿರಿ. ಆದರೆ ಗುರುವಾರದಂದು ವಿಷ್ಣುವನ್ನು ಪೂಜಿಸುವುದು ಮಾತ್ರವಲ್ಲ, ಕೆಲವೊಂದು ಕೆಲಸಗಳನ್ನು ಕೂಡ ಮಾಡಬಾರದು. ಗುರುವಾರ ಯಾವ ಕೆಲಸ ಮಾಡಬೇಕು ಗೊತ್ತಾ..?
ಇಂದು ಗುರುವಾರದ ಶುಭದಿನ. ನೀವಿಂದು ಯಾವ ದೇವರನ್ನು ಪೂಜಿಸಬೇಕು ಗೊತ್ತಾ..? ಹೆಚ್ಚಿನವರು ಹೇಳುವ ಪ್ರಕಾರ ಗುರುವಾರ ಗುರು ರಾಘವೇಂದ್ರನನ್ನು ಪೂಜಿಸಬೇಕೆಂದು ಹೇಳುತ್ತಾರೆ. ಹೌದು ಇಂದು ಅಂದರೆ ಗುರುವಾರ ಕೇವಲ ರಾಯರನ್ನು ಮಾತ್ರವಲ್ಲ, ಸಾಯಿಬಾಬರನ್ನು ಪೂಜಿಸಿದರೂ ಕೂಡ ವಿಶೇಷ ಫಲವನ್ನು ಪಡೆದುಕೊಳ್ಳಬಹುದು. ಆದರೆ ಗುರುವಾರವು ಭಗವಾನ್ ವಿಷ್ಣು ದೇವರಿಗೆ ಅರ್ಪಿತವಾದ ದಿನವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.
ಗುರುವಾರ ವಿಷ್ಣು ಪೂಜೆ – ಭಗವಾನ್ ವಿಷ್ಣುವನ್ನು ತ್ರಿದೇವ ಎಂದು ಕರೆಯುತ್ತಾರೆ. ಗುರುವಾರವನ್ನು ಬೃಹಸ್ಪತಿವಾರವೆಂದು ಕರೆಯಲಲಾಗಿದ್ದು, ಇದನ್ನು ಭಗವಾನ್ ವಿಷ್ಣು ಇಲ್ಲವೇ ಭಗವಾನ್ ಬೃಹಸ್ಪತಿಗೆ ಮೀಸಲಾಗಿದೆ. ನೋಡಲು ಮಾನವ ದೇಹವನ್ನು ಹೊಂದಿದ್ದರೂ ವಿಷ್ಣು ನಾಲ್ಕು ಕೈಗಳನ್ನು ಹೊಂದಿದ್ದಾನೆ. ನಾಲ್ಕು ಕೈಗಳಲ್ಲೂ ವಿಭಿನ್ನ ರೀತಿಯ ಆಯುಧಗಳನ್ನು ಹಿಡಿದುಕೊಂಡಿದ್ದಾನೆ. ಕ್ಷೀರಸಾಗರದಲ್ಲಿ ದೈತ್ಯ ಶೇಷನಾಗನ ಮೇಲೆ ಮಲಗಿ ವಿಶ್ರಮಿಸುವನು ಭಗವಾನ್ ವಿಷ್ಣು. ವಿಷ್ಣುವಿನ ಪತ್ನಿ ದೇವಿ ಲಕ್ಷ್ಮಿಯಾಗಿದ್ದು, ಈಕೆಯನ್ನು ಧನಸಂಪತ್ತಿನ ಅಧಿಪತಿಯೆಂದು ಪರಿಗಣಿಸಲಾಗುತ್ತದೆ.
ಆದ್ದರಿಂದ ಗುರುವಾರ ಮತ್ತು ಶುಕ್ರವಾರದಂದು ಭಗವಾನ್ ವಿಷ್ಣು ಮತ್ತು ಆತನ ಪತ್ನಿ ಲಕ್ಷ್ಮಿ ದೇವಿಯನ್ನು ಜೊತೆಯಾಗಿ ಪೂಜಿಸಿದರೆ ಧನ, ಸಂಪತ್ತು, ಸಂತೋಷ, ಶಾಂತಿ ಹಾಗೂ ಜ್ಞಾನ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಭಗವಾನ್ ವಿಷ್ಣುವಿಗೆ ಹಳದಿ ಬಣ್ಣವೆಂದರೆ ಬಲು ಪ್ರೀತಿ. ಅಷ್ಟು ಮಾತ್ರವಲ್ಲ, ವಿಷ್ಣು ದೇವರನ್ನು ಮೆಚ್ಚಿಸುವುದು ಕೂಡ ತುಂಬಾ ಸುಲಭವಾಗಿದೆ.
ಗುರುವಾರದಂದು ವಿಷ್ಣು ಭಕ್ತರು ಅಥವಾ ವಿಷ್ಣುವನ್ನು ಆರಾದಿಸುವವರು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶುಚಿಯಾಗಿ ವಿಷ್ಣುವಿಗೆ ಪ್ರಿಯವಾದ ಹಳದಿ ಬಟ್ಟೆಯನ್ನು ಧರಿಸಬೇಕು. ವಿಷ್ಣುವಿನ ಪೂಜೆಯಲ್ಲಿ ಮಾತ್ರವಲ್ಲ, ಹಿಂದೂ ಧರ್ಮದಲ್ಲಿ ಅರಶಿಣಕ್ಕೆ ಅದರದ್ದೇ ಮಹತ್ವವಿದೆ.
ನಂತರ ವಿಷ್ಣುವಿನ ವಿಗ್ರಹವನ್ನು ಹಾಗೂ ಲಕ್ಷ್ಮಿ ವಿಗ್ರಹವನ್ನು ಶುಚಿಗೊಳಿಸಿ. ಪೂಜೆಯಲ್ಲಿ ವಿಷ್ಣುವಿಗೆ ಹೆಚ್ಚು ಅರಶಿಣ ಬಣ್ಣದ ಹೂವುಗಳನ್ನು, ಅರಶಿಣ ಬಣ್ಣದ ವಸ್ತುಗಳನ್ನು ಅರ್ಪಿಸಿ. ವಿಷ್ಣುವಿನೊಂದಿಗೆ ಲಕ್ಷ್ಮಿ ದೇವಿಯನ್ನು ಆರಾಧಿಸಿ. ಈ ದಿನ ವ್ರತವನ್ನು ಕೈಗೊಳ್ಳುವವರು ತುಪ್ಪದಿಂದ ತಯಾರಿಸಿದ ಆಹಾರವನ್ನು ಸೇವಿಸಿ. ಇಂದು ವಿಷ್ಣುವಿಗೆ ಹಳದಿ ಬಣ್ಣದ ಬೇಳೆ ಕಾಳುಗಳನ್ನು ಹಾಗೂ ಬೆಲ್ಲವನ್ನು ಅರ್ಪಿಸಬೇಕು.
ವಿಷ್ಣು ಮತ್ತು ಲಕ್ಷ್ಮಿ ಪೂಜೆ – ಹಿಂದೂ ಧರ್ಮದಲ್ಲಿ ಕೇವಲ ದೇವರನ್ನು ಮಾತ್ರವಲ್ಲ, ಕೆಲವೊಂದು ಮರಗಳನ್ನು, ಪ್ರಾಣಿ ಹಾಗೂ ಪಕ್ಷಿಗಳನ್ನು ಕೂಡ ಪೂಜಿಸುತ್ತೇವೆ. ಅವುಗಳನ್ನು ದೇವರೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಅಶ್ವತ್ಥಮರವನ್ನು, ಸೂರ್ಯನನ್ನು, ಚಂದ್ರನನ್ನು, ನದಿಯನ್ನು, ಅಗ್ನಿಯನ್ನು, ಗೋವನ್ನು, ತುಳಸಿಗಿಡವನ್ನು ಸೇರಿದಂತೆ ಇನ್ನು ಸಾಕಷ್ಟು ಅಂಶಗಳನ್ನು ದೇವರೆಂದು ಆರಾಧಿಸುತ್ತೇವೆ.
ಹಾಗೇ ಬಾಳೆ ಗಿಡವನ್ನು ಕೂಡ ಅನಾದಿಕಾಲದಿಂದಲೂ ಆರಾಧಿಸಿಕೊಂಡು ಬರುಲಾಗುತ್ತಿದೆ ಮತ್ತು ದೇವರ ಪೂಜೆಯಲ್ಲೂ ಕೂಡ ಬಾಳೆಗಿಡವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅದರಲ್ಲೂ ಬಾಳೆಹಣ್ಣುಗಳಿಲ್ಲದೇ ಪೂಜೆ ವಿಫಲವೆನ್ನಬಹುದು. ಆದ್ದರಿಂದ ಗುರುವಾರ ಬಾಳೆ ಗಿಡವನ್ನು ಪೂಜಿಸಬೇಕು. ಬಾಳೆಹಣ್ಣನ್ನು ವಿಷ್ಣುವಿಗೆ ಅರ್ಪಿಸಬೇಕು. ಹಾಗೂ ಬಾಳೆಗಿಡವನ್ನು ವಿಷ್ಣುವಿನ ಪೂಜೆಯಲ್ಲಿ ಬಳಸಬೇಕು.
ಗುರುವಾರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಿದರೆ ಉತ್ತಮ ಅಥವಾ ಗುರುವಾರದಂದು ವಿಷ್ಣುವಿನ ಪೂಜೆಯಲ್ಲಿ ಸತ್ಯನಾರಾಯಣ ಕಥೆಯನ್ನು ಪಾರಾಯಣ ಮಾಡಬಹುದು. ವಿಷ್ಣುವನ್ನು ಪೂಜಿಸುವಾಗ ಓಂ ಜೈ ಜಗದೀಶ ಹರೇ ಎನ್ನುವ ವಿಷ್ಣುವಿನ ಪವಿತ್ರ ಮಂತ್ರವನ್ನು ಪಠಿಸಬೇಕು. ಕೊನೆಯದಾಗಿ ವಿಷ್ಣುವಿಗೆ ಆರತಿ ಬೆಳಗಿ.
ವಿಷ್ಣುವಿಗೆ ಅರ್ಪಿಸಿದ ಬೇಳೆ ಕಾಳುಗಳನ್ನು, ಬೆಲ್ಲವನ್ನು ಹಾಗೂ ಬಾಳೆಹಣ್ಣನ್ನು ಪ್ರಸಾದವಾಗಿ ಸ್ವೀಕರಿಸಬಹುದು. ಗುರುವಾರ ಮಾಡುವ ದಾನಕ್ಕೆ ವಿಶೇಷ ಮಹತ್ವವಿದೆ. ಆದ್ದರಿಂದ ಇಂದು ಅಸಾಹಯಕರಿಗೆ, ಬಡವರಿಗೆ ಆಹಾರ, ಹಣ ಅಥವಾ ಬಟ್ಟೆಯನ್ನು ದಾನ ಮಾಡಿ. ಗುರುವಾರವಾದ ಇಂದು ಮತ್ತು ನಾಳೆ ವಿಷ್ಣುವನ್ನು ಹಾಗೂ ಲಕ್ಷ್ಮಿ ದೇವಿಯನ್ನು ಆರಾಧಿಸಿ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯನ್ನು ಕಂಡುಕೊಳ್ಳಿ. ಹಾಗೂ ಈ ದಿನ ಬಡವರಿಗೆ ದಾನ ಮಾಡುವುದನ್ನು ಮರೆಯದರಿ.














