ವಿಜಯಪುರ : 21 ದಿನಗಳ ಓದುವ ಅಭಿಯಾನದ ಚಟುವಟಿಕೆಗಳ ಮಾರ್ಗದರ್ಶಿಯ ವಿರುದ್ದ, ಶಾಸಕ ಬಸನಗೌಡಾ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಒಂದು ಕೋಮಿನ ಹಬ್ಬದ ತಿಳುವಳಿಕೆ ವಿಷಯವನ್ನು ಕೂಡಲೆ ತೆಗೆದು ಹಾಕಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿರುವ ಯತ್ನಾಳ್, 21 ದಿನಗಳ ಓದುವ ಅಭಿಯಾನದ ಚಟುವಟಿಕೆಗಳ ಮಾರ್ಗದರ್ಶಿಯಲ್ಲಿ ಒಂದು ಕೋಮಿನ ಹಬ್ಬವನ್ನು ತಿಳಿದುಕೊಳ್ಳಲು ನಿರ್ದೇಶಿಸಲಾಗಿದೆ. ಓದುವ ಅಭಿಯಾನವನ್ನು ಸರ್ಕಾರ ಪರಿಚಯಿಸಿದ್ದರೆ ಅದರಲ್ಲಿ ಪ್ರಚಲಿತ ವಿದ್ಯಮಾನ, ಕನ್ನಡ ಸಾಹಿತ್ಯ, ವಿಜ್ಞಾನ, ನಮ್ಮ ಸಂಸ್ಕೃತಿ, ಇತಿಹಾಸವನ್ನು ಓದಲು ಉತ್ತೇಜಿಸಬೇಕು ಎಂದರು.
ಯಾವುದೋ ಒಂದು ಕೋಮಿನ ಓಲೈಕೆಗೆ ಅವರ ಹಬ್ಬದ ಬಗ್ಗೆ ತಿಳುವಳಿಕೆ ನೀಡುವುದರಿಂದ ಮಕ್ಕಳ ಜ್ಞಾನವಾಗಲಿ, ಬೌದ್ಧಿಕ ಮಟ್ಟವಾಗಲಿ ಸುಧಾರಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನು ಸರ್ಕಾರ ಈ ರೀತಿಯಾದ ಓಲೈಕೆ ರಾಜಕಾರಣವನ್ನು ಬಿಡಬೇಕು ಎಂದರು.
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತಹ ಪಠ್ಯಕ್ರಮವನ್ನು, ವಿಷಯಗಳನ್ನು ಪರಿಚಯಿಸಲಿ. ಚಟುವಟಿಕೆ ಮಾರ್ಗದರ್ಶಿಯಲ್ಲಿ ಕೂಡಲೇ ಒಂದು ಕೋಮಿನ ಹಬ್ಬದ ತಿಳುವಳಿಕೆ ವಿಷಯವನ್ನು ತೆಗೆದು ಹಾಕಲಿ ಎಂದು ಒತ್ತಾಯಿಸಿದರು.















