ಲಂಡನ್ : ಪಾಕಿಸ್ತಾನ ತನ್ನ ದೇಶದ ಮೇಲೆಯೇ ನಡೆಸಿದ ವಾಯುದಾಳಿಯಲ್ಲಿ 30 ಮಂದಿ ನಾಗರಿಕರು ಬಲಿಯಾಗಿರುವ ಘಟನೆಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಭಾರತ ತೀವ್ರವಾಗಿ ಖಂಡಿಸಿದೆ.
ತನ್ನ ದೇಶದಲ್ಲೇ ವೈಮಾನಿಕ ದಾಳಿ ನಡೆಸಿದ ಪಾಕ್ ನಡೆಗೆ ಭಾರತ ಪ್ರತಿಕ್ರಿಯಿಸಿದೆ. ಜಾಗತಿಕವಾಗಿ ಅಸ್ಥಿರತೆ ಉಂಟುಮಾಡಲು ಭಯೋತ್ಪಾದನೆ ರಫ್ತು ಮಾಡುತ್ತದೆ. ಈಗ ನೋಡಿದ್ರೆ ತನ್ನ ಸ್ವಂತ ನಾಗರಿಕರ ಮೇಲೆಯೇ ಬಾಂಬ್ ದಾಳಿ ಮಾಡಿದೆ ಎಂದು (UNHRC) ಯುಎನ್ಹೆಚ್ಆರ್ಸಿಯಲ್ಲಿನ ಭಾರತೀಯ ಪ್ರತಿನಿಧಿ ಕ್ಷಿತಿಜ್ ತ್ಯಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾರ್ಯಸೂಚಿ ಐಟಂ-4ರ ವೇಳೆ ಮಾತನಾಡುವಾಗ, ಸೋಮವಾರ ಬೆಳಗ್ಗಿನ ಜಾವ ಜೆಎಫ್ -17 ಪಾಕಿಸ್ತಾನಿ ಯುದ್ಧ ವಿಮಾನಗಳು ತನ್ನ ಮಾಟ್ರೆ ದಾರಾ ಗ್ರಾಮದ ಮೇಲೆ 8 SL-6 ಬಾಂಬ್ಗಳ ಮೂಲಕ ವಾಯುದಾಳಿ ನಡೆಸಿದೆ. ಆ ದಾಳಿಯಲ್ಲಿ ಮಹಿಳೆಯರು ಮಕ್ಕಳು ಸೇರಿ 30 ಮಂದಿ ಬಲಿಯಾಗಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಿದರು.
ಭಾರತದ ಮೇಲೆ ದಾಳಿ ಮಾಡುವುದು, ಭಯೋತ್ಪಾದನೆಯನ್ನು ರಫ್ತು ಮಾಡುವುದು, ವಿಶ್ವಸಂಸ್ಥೆ ನಿಷೇಧಿಸಿದ ಉಗ್ರರಿಗೆ ಆಶ್ರಯ ನೀಡುವುದು, ಇದೆಲ್ಲದರಿಂದ ಸಮಯ ಸಿಕ್ಕ ನಂತರ ಈಗ ತನ್ನ ದೇಶದ ಮೇಲೆ ಬಾಂಬ್ ದಾಳಿ ಮಾಡುವ ಕೆಲಸ ಮಾಡಿದೆ ಎಂದು ಟೀಕಿಸಿದರು.















