ಮನೆ ಅಪರಾಧ ಶೇ. 40 ರಷ್ಟು ಕಮಿಷನ್ ಪ್ರಕರಣ ನ್ಯಾಯಾಂಗ ತನಿಖೆಯಾಗಬೇಕು: ಕೆಂಪಣ್ಣ

ಶೇ. 40 ರಷ್ಟು ಕಮಿಷನ್ ಪ್ರಕರಣ ನ್ಯಾಯಾಂಗ ತನಿಖೆಯಾಗಬೇಕು: ಕೆಂಪಣ್ಣ

0

ಬೆಂಗಳೂರು(Bengaluru): ಶೇ. 40 ಕಮಿಷನ್ ಪ್ರಕರಣ ನ್ಯಾಯಾಂಗ ತನಿಖೆಯಾಗಬೇಕು.  15 ದಿನಗಳಲ್ಲಿ ಮತ್ತೆ ಪ್ರಧಾನಿ ಮೋದಿಗೆ ಪತ್ರ ಬರೆಯುತ್ತೇವೆ ಎಂದು ಕೆಂಪಣ್ಣ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದರು.

ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಶೇಸ್ವಾತಂತ್ರ್ಯ ದಿನಾಚರಣೆ ದಿನ ಭ್ರಷ್ಟಾಚಾರ ದೇಶಕ್ಕೆ ಮಾರಕವೆಂದು ಅವರು ಭಾಷಣ ಮಾಡಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ನಾವು ಕೊಟ್ಟಿದ್ದ ದೂರಿನ ಬಗ್ಗೆ ಇನ್ನೂ ಯಾಕೆ ಕ್ರಮಕೈಗೊಂಡಿಲ್ಲ ಎಂದು ಅವರು ಪ್ರಶ್ನಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆಯ ಮನುಷ್ಯ. ಆದರೆ, ಅವರ ಮಾತಿಗೆ ಕವಡೆ ಕಾಸಿನ ಬೆಲೆ ಇಲ್ಲ. ಮುಖ್ಯಮಂತ್ರಿ ಆದೇಶ ನೀಡಿದರೂ ಹಣ ಬಿಡುಗಡೆ ಆಗುತ್ತಿಲ್ಲ  ಎಂದರು.

ಇದು ಅತ್ಯಂತ ಭ್ರಷ್ಟ ಸರ್ಕಾರ. ನನ್ನ ಸೇವಾ ಅವಧಿಯಲ್ಲೇ ಇಂತಹ ಸರ್ಕಾರವನ್ನು ನೋಡಿಲ್ಲ. ಶೇ 40 ಮಾತ್ರವಲ್ಲ ಕೆಲವು ಕಡೆ ಅದಕ್ಕಿಂತಲೂ ಹೆಚ್ಚು ಕಮಿಷನ್ ಕೇಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಕೋರ್ಟ್‌ಗೆ ಹೋಗಿ ಗುತ್ತಿಗೆ ಹಣ ಬಿಡಿಸಿಕೊಂಡಿದ್ದೇವೆ. ಕೋಲಾರ‌ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಕಲೆಕ್ಷನ್ ಮಾಡಲು ಹೇಳಿದ್ದಾರೆ. ಇವರಿಗೆಲ್ಲಾ ನಾಚಿಕೆ ಆಗಬೇಕು. ಒಬ್ಬ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೀಗೆ ಹೇಳಿದರೆ ಹೇಗೆ? ಅವರಷ್ಟೇ ಅಲ್ಲ, ಇನ್ನೂ ಹಲವು ಸಚಿವರು ಹೀಗೆ ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದರು.

ನಮ್ಮ‌ಹೋರಾಟ ಮುಂದುವರಿಯಲಿದೆ. ಮುಖ್ಯಮಂತ್ರಿ ಮಾತನ್ನು ಅಧಿಕಾರಿಗಳು ಕೇಳದ ಸ್ಥಿತಿ ನಿರ್ಮಾಣವಾಗಿದೆ. ಟೆಂಡರ್ ಕರೆಯುವ ಪ್ರಕ್ರಿಯೆ ಬದಲಾಯಿಸಲು ಮುಖ್ಯಮಂತ್ರಿ ಹೇಳಿದ್ದರು. ಆದರೆ, ಅವರ ಮಾತೇ ಕೇಳ್ತಾ ಇಲ್ಲ ಎಂದರು.

ನಾವು ಸಿದ್ದರಾಮಯ್ಯಗೆ ಯಾವುದೇ ದಾಖಲೆ ಕೊಟ್ಟಿಲ್ಲ. ದಾಖಲೆಗಳನ್ನು ಕೊಡುವುದು ದೊಡ್ಡದಲ್ಲ. ಕೊಟ್ಟ ಬಳಿಕ ದೊಡ್ಡ ಸಮಸ್ಯೆಗಳು ಆಗುತ್ತದೆ. ತನಿಖೆ ಮಾಡಿದಾಗ ದಾಖಲೆ ಕೊಡುತ್ತೇವೆ. ನ್ಯಾಯಾಂಗ ತನಿಖೆ ನಡೆಸಲಿ. ಈಗ ಸಂಪೂರ್ಣ ವ್ಯವಸ್ಥೆಯೇ ಹದಗೆಟ್ಟಿದೆ. ಕೆಲವು ಸಚಿವರು, ಪಿಡಬ್ಲ್ಯುಡಿ ಸಚಿವರು ನಮ್ಮ ಸಂಘಟನೆ ಒಡೆಯಲು ಪ್ರಯತ್ನ ಮಾಡಿದರು ಎಂದು ಅವರು ಆರೋಪಿಸಿದರು.

ದಾಖಲೆ ಯಾರಿಗೆ ಕೊಟ್ಟರೂ ಯಾರು ಕೊಟ್ಟರು ಅಂತ ಗೊತ್ತಾಗುತ್ತದೆ. ನಮ್ಮ ಗುತ್ತಿಗೆದಾರರಿಗೆ ಭಯ ಇದೆ. ಸಮಯ ಬಂದಾಗ ಮತ್ತಷ್ಟು ಮಾಹಿತಿ ಕೊಡುತ್ತೇವೆ. ಎಲ್ಲ ಶಾಸಕರು ಶೇ 10ರಿಂದ 15ರಷ್ಟು ಕೇಳುತ್ತಿದ್ದಾರೆ. ಇಡೀ ವ್ಯವಸ್ಥೆ ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದೆ. ಒಬ್ಬರು, ಇಬ್ಬರು ಅಂತ ಅಲ್ಲ, ಯಾರಿಗೂ ರ‍್ಯಾಂಕಿಂಗ್‌ ಕೊಡಲು ಆಗುವುದಿಲ್ಲ. ಎಲ್ಲ ಸಚಿವರು, ಶಾಸಕರು ನಂಬರ್ 1 ಸ್ಥಾನದಲ್ಲಿದ್ದಾರೆ. ಬಸವರಾಜ್ ಬೊಮ್ಮಾಯಿ ಸೇರಿ ಎಲ್ಲರೂ ಭ್ರಷ್ಟರಾಗಿದ್ದಾರೆ. ಕೆಲವು ಕಡೆ ಶೇ 100 ಭ್ರಷ್ಟಾಚಾರ ಇದೆ. ಕೆಲವು ಕಡೆ ಒಂದು ಪೈಸೆ ಕೆಲಸ ಮಾಡದೇ ಶೇ 100 ತಿಂದಿಲ್ಲವೇ  ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹಿಂದಿನ ಲೇಖನʼಪ್ರಚೋದನಾಕಾರಿ ಉಡುಪುʼ: ವಿವಾದಾತ್ಮಕ ಆದೇಶ ಹೊರಡಿಸಿದ್ದ ಕೇರಳ ನ್ಯಾಯಾಧೀಶರು ಕಾರ್ಮಿಕ ನ್ಯಾಯಾಲಯಕ್ಕೆ ವರ್ಗ
ಮುಂದಿನ ಲೇಖನಕಾಮಗಾರಿಗೆ ಶೇ.40 ರಷ್ಟು ಕಮಿಷನ್: ದಾಖಲೆ ಸಮೇತ ದೂರು ನೀಡಿದರೆ ಕ್ರಮ: ಸಿಎಂ ಬೊಮ್ಮಾಯಿ