ಮೂಡಿಗೆರೆ: ಕಾಫಿ ಬೆಳೆಗಾರರ ಮತ್ತು ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಕಾಫಿ ತೋಟಕ್ಕೆ ಕೆಲಸಕ್ಕೆ ಬರುವ ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ಕೂಲಿ ಕಾರ್ಮಿಕರ ಬಗ್ಗೆ ಸಂಪೂರ್ಣ ದಾಖಲಾತಿ ಪಡೆದು ಕೆಲಸಕ್ಕೆ ನೇಮಿಸಿಕೊಳ್ಳುವಂತೆ ತಿಳಿಸಲಾಯಿತು.
ಕಾಫಿ ಎಸ್ಟೇಟ್ ನ ಆಯಾಕಟ್ಟಿನ ಸ್ಥಳಗಳಲ್ಲಿ ಮತ್ತು ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಡುವ ಗೋಡಾನ್, ಕಾಫಿ ಕಣಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೊಳ್ಳುವಂತೆ ಸಲಹೆ ನೀಡಲಾಯಿತು. ತೋಟಕ್ಕೆ ಕಾರ್ಮಿಕರನ್ನು ಕರೆತರುವ ವಾಹನಗಳ ದಾಖಲೆಯನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ಸೂಚಿಸಲಾಯಿತು.
ಕಾಳು ಮೆಣಸು ಕೊಯ್ಯುವಾಗ ಲೋಹದ ಏಣಿಗಳನ್ನು ಬಳಸುವಾಗ ವಿದ್ಯುತ್ ಅವಘಡಗಳು ಹೆಚ್ಚಾಗುತ್ತಿದ್ದು, ಏಣಿ ಬಳಸುವಾಗ ತೋಟದ ಮಾಲಿಕರು ಜಾಗ್ರತೆ ವಹಿಸುವಂತೆ ಮತ್ತು ಹೆಚ್ಚಾಗಿ ಫೈಬರ್ ಕೋಟೆಡ್ ಏಣಿ ಬಳಸುವಂತೆ ಸೂಚಿಸಲಾಯಿತು.
ಇತ್ತೀಚೆಗೆ ಕಾರ್ಮಿಕ ಕುಟುಂಬದ ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ತೋಟಕ್ಕೆ ಕೆಲಸಕ್ಕೆ ಬರುವ ಕಾರ್ಮಿಕರ ಮಕ್ಕಳ ಸುರಕ್ಷತೆಯ ಬಗ್ಗೆ ಗಮನ ಹರಿಸುವಂತೆ ಬೆಳೆಗಾರರಿಗೆ ಸೂಚಿಸಲಾಯಿತು.
ಕಾರ್ಮಿಕರ ಚಲನವಲನ ಗುರುತಿಸಿ ಅನುಮಾನ ಬಂದರೆ ಕೂಡಲೆ ಹತ್ತಿರದ ಪೊಲಿಸ್ ಠಾಣೆಗೆ ದೂರು ನಿಡುವಂತೆ ಸಲಹೆ ನೀಡಲಾಯಿತು.
ಸಭೆಯಲ್ಲಿ ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್ ಸೋಮೇಗೌಡ, ಠಾಣಾಧಿಕಾರಿ ಶ್ರೀನಾಥ್ ರೆಡ್ಡಿ ಬೆಳೆಗಾರರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಕಾರ್ಯದರ್ಶಿ ಮನೊಹರ್, ಕೋಮಾರ್ಕ್ ಮಾಜಿ ಅಧ್ಯಕ್ಷ ಡಿ.ಎಸ್.ರಘು. ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ಅಶೋಕ್ ಕುಮಾರ್ ಸೇರಿದಂತೆ ಅನೇಕ ಹಿರಿಯ ಕಾಫಿ ಬೆಳೆಗಾರರು, ಸಾರ್ವಜನಿಕರು ಭಾಗವಹಿಸಿದ್ದರು.














