ಚಾಮರಾಜನಗರ(Chamarajanagar): ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಶಿವನಸಮುದ್ರದ ಪಾರಂಪರಿಕ ವೆಸ್ಲಿ ಸೇತುವೆ ಸುತ್ತಲಿನ ಪ್ರದೇಶದಲ್ಲಿ ಗಾಂಜಾ ಸೇವನೆ ಜೋರಾಗಿದ್ದು, ಪ್ರವಾಸಿಗರ ಸೋಗಲ್ಲಿ ಪುಂಡರು ನಶೆ ಏರಿಸಿಕೊಳ್ಳಲು ಬರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನದಿ ದಡ, ಸೇತುವೆ ಕೆಳಗೆ ಕೆಲವರು ಕುಳಿತು ರಾಜಾರೋಷವಾಗಿ ಸಿಗರೇಟುಗಳಿಗೆ ಗಾಂಜಾ ತುಂಬಿಕೊಂಡು ಹೊಗೆ ಬಿಡುತ್ತಿದ್ದಾರೆ. ಮಹಿಳೆಯರು ಸೇರಿದಂತೆ ಇತರ ಪ್ರವಾಸಿಗರಿಗೆ ಇದು ಕಿರಿಕಿರಿ ಉಂಟು ಮಾಡುತ್ತಿದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು.
ಇದರೊಟ್ಟಿಗೆ ಸೇತುವೆ ಕೆಳಗೆ ಕುಳಿತು ಸಾರ್ವಜನಿಕವಾಗಿ ಮದ್ಯ ಸೇವನೆ ಸೇರಿದಂತೆ ಮೋಜು ಮಸ್ತಿಗಳು ಎಗ್ಗಿಲ್ಲದೇ ನಡೆಯುತ್ತಿದ್ದು ಪೊಲೀಸರು ಮಾತ್ರ ಅತ್ತ ತಲೆಯೂ ಹಾಕುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಅಲ್ಲದೇ ಎಣ್ಣೆ ಏಟಲ್ಲಿ ನದಿಗಿಳಿದು ಗುಂಪು ಗುಂಪಾಗಿ ಈಜುವುದು ಮಾಮೂಲಾಗಿದೆ. ಇನ್ನಾದರೂ ಪೊಲೀಸರು ಸೇರಿದಂತೆ ಸಂಬಂಧಪಟ್ಟವರು ಪುಂಡರಿಗೆ ಬಿಸಿ ಮುಟ್ಟಿಸಿಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.