ಮನೆ ಅಪರಾಧ ಗುಜರಾತ್ ಮೂಲದ ಇಬ್ಬರು ದರೋಡೆಕೋರರ ಕಾಲಿಗೆ ಪೊಲೀಸರ ಗುಂಡೇಟು

ಗುಜರಾತ್ ಮೂಲದ ಇಬ್ಬರು ದರೋಡೆಕೋರರ ಕಾಲಿಗೆ ಪೊಲೀಸರ ಗುಂಡೇಟು

0

ಹುಬ್ಬಳ್ಳಿ: ನಗರದ ಹೊರವಲಯದಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಗ್ಯಾಂಗ್​ನ ಇಬ್ಬರು ನಟೋರಿಯಸ್ ದರೋಡೆಕೋರರ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

Join Our Whatsapp Group

ಆತ್ಮರಕ್ಷಣೆಗೆ ಬೆಂಡಿಗೇರಿ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್​ ಎಸ್. ಆರ್. ನಾಯಕ ನೇತೃತ್ವದ ತಂಡ ಆರೋಪಿಗಳಾದ ಗುಜರಾತ್ ಮೂಲದ ನಿಲೇಶ್, ದಿಲೀಪ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಸೋಮವಾರ ತಡರಾತ್ರಿ ಬೈಕ್ ಮೇಲೆ ಹೊರಟಿದ್ದ ಕುಂದಗೋಳ ಮೂಲದ ವ್ಯಕ್ತಿಗೆ ನಾಲ್ಕೈದು ಜನರ ಗುಂಪು ಅಡ್ಡಗಟ್ಟಿ ಬೈಕ್, ನಗದು, ಮೊಬೈಲ್ ಸುಲಿಗೆ ಮಾಡಿ ಹಲ್ಲೆಗೈದು ಪರಾರಿಯಾಗಿದ್ದರು. ಇದಾದ ಸ್ವಲ್ಪ ಸಮಯದಲ್ಲಿ ರವಿಚಂದ್ರ ಎಂಬಾತರನ್ನು ಅಡ್ಡಗಟ್ಟಿ ಸುಲಿಗೆ ಮಾಡಿತ್ತು. ಆಮೇಲೆ ಮಂಟೂರ ರಸ್ತೆಯಲ್ಲಿನ ಶಾರುಕ್ ಎಂಬುವರ ಮನೆಗೆ ಕನ್ನ ಹಾಕಲು ಯತ್ನಿಸಿದ್ದಾರೆ‌. ಈ ವೇಳೆ ಮನೆಗೆ ಕಲ್ಲು ತೂರಾಟ ಮಾಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಬೆಂಡಿಗೇರಿ ಪಿಐ ಎಸ್.ಆರ್. ನಾಯಕ ನೇತೃತ್ವದ ತಂಡ ಅಲರ್ಟ್ ಆಗಿದ್ದು, ಬೈಕ್ ಮೇಲೆ ಅನುಮಾನಾಸ್ಪದವಾಗಿ ಹೋಗುತ್ತಿದ್ದವರ ತಪಾಸಣೆಗೆ ಮುಂದಾಗಿದ್ದರು. ಅದರಂತೆ ಪಿಎಸ್ಐ ಅಶೋಕ್​ ಹಾಗೂ ಇನ್ನಿಬ್ಬರು ಸಿಬ್ಬಂದಿ ಹುಬ್ಬಳ್ಳಿಯ ಹೊರವಲಯದ ಬಿಡನಾಳ ಸಮೀಪದಲ್ಲಿ ತಪಾಸಣೆ ನಡೆಸುವ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ದರೋಡೆಕೋರರು ಎಸ್ಕೇಪ್ ಆಗಲು ಮುಂದಾಗಿದ್ದರು. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು 4 ಸುತ್ತು ಗುಂಡು ಹಾರಿಸಿದರು. ಬಳಿಕ ಇಬ್ಬರು ಆರೋಪಿಗಳ ಕಾಲಿಗೆ ತಲಾ ಒಂದೊಂದು ಗುಂಡು ಹೊಡೆದು ಆರೋಪಿಗಳನ್ನು ಬಂಧಿಸಲಾಗಿದೆ.

ಸದ್ಯ ಗುಂಡೇಟು ತಿಂದ ದಿಲೀಪ್ ಮತ್ತು ನಿಲೇಶ್​ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಪಿಎಸ್ಐ ಅಶೋಕ್​, ಮತ್ತು ಕಾನ್​ಸ್ಟೇಬಲ್​ಗಳಾದ ಶರಣು ಹಾಗೂ ಮತ್ತೋರ್ವ ಸಿಬ್ಬಂದಿಗೆ ಗಾಯವಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಿಮ್ಸ್ ಆಸ್ಪತ್ರೆಗೆ ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ್ ಭೇಟಿ ನೀಡಿ, ಗಾಯಗೊಂಡ ಪೊಲೀಸ್ ಸಿಬ್ಬಂದಿಯ ಆರೋಗ್ಯ ವಿಚಾರಿಸಿದರು. ಅಲ್ಲದೇ ಗಾಯಗೊಂಡ ಇಬ್ಬರು ಆರೋಪಿಗಳನ್ನು ಪರಿಶೀಲಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಪಿಗಳು ಹಲವಾರು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಗುಜರಾತ್​ನಿಂದ ಬಂದು ಕಳ್ಳತನ ಮಾಡಿ ಮತ್ತೆ ಎಸ್ಕೇಪ್ ಆಗುತ್ತಿದ್ದರು. ರಾಜ್ಯದಲ್ಲಿ ನಡೆಯುತ್ತಿರುವ ದರೋಡೆ ಪ್ರಕರಣಗಳ ಹಿನ್ನೆಲೆಯಲ್ಲಿ ಅವಳಿ ನಗರದಲ್ಲಿ 17 ಕಡೆ ನಾಕಾಬಂದಿ ಹಾಕಲಾಗಿತ್ತು. ಅದರಂತೆ ಸೋಮವಾರ ತಡರಾತ್ರಿ ದಡೋರೆಗೆ ಯತ್ನಿಸಿ ಅನುಮಾನಾಸ್ಪದವಾಗಿ ಬೈಕ್ ಮೇಲೆ ವೇಗವಾಗಿ ಹೋಗುತ್ತಿದ್ದವರ ತಪಾಸಣೆಗೆ ಮುಂದಾಗಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ದುಷ್ಕರ್ಮಿಗಳು ಎಸ್ಕೇಪ್ ಆಗಲು ಯತ್ನಿಸಿದ್ದರು. ಆಗ ಪೊಲೀಸರು ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಇಬ್ಬರು ಆರೋಪಿಗಳಿಗೆ ತಲಾ ಒಂದು ಗುಂಡು ತಾಗಿದೆ. ಇತರೆ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

ಬಂಧಿತ ದಿಲೀಪ್ ಮತ್ತು ನೀಲೇಶ್ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿವೆ. ಹುಬ್ಬಳ್ಳಿಯ ಜೈನ್ ಮಂದಿರದ ಹುಂಡಿಯಲ್ಲಿದ್ದ 4 ಲಕ್ಷ ರೂ. ಕದ್ದಿದ್ದರು. ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಅಂಗಡಿಗಳಿಗೆ ಕನ್ನ ಹಾಕಿದ್ದರು. ಇವರ ಮೇಲೆ ಗದಗ, ಬಳ್ಳಾರಿ, ಚಿತ್ರದುರ್ಗ ಸೇರಿ ಹಲವು ಜಿಲ್ಲೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಉಳಿದ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ತಿಳಿಸಿದ್ದಾರೆ.