ಮನೆ ರಾಜಕೀಯ ಯಾರನ್ನೂ ಹೈಜಾಕ್ ಮಾಡುವ ಅವಶ್ಯಕತೆ ನಮಗಿಲ್ಲ: ಡಿ.ಕೆ. ಶಿವಕುಮಾರ್

ಯಾರನ್ನೂ ಹೈಜಾಕ್ ಮಾಡುವ ಅವಶ್ಯಕತೆ ನಮಗಿಲ್ಲ: ಡಿ.ಕೆ. ಶಿವಕುಮಾರ್

0

ಬೆಂಗಳೂರು: ನಾವು ಯಾರನ್ನೂ ಹೈಜಾಕ್ ಮಾಡಿಲ್ಲ, ಅದರ ಅವಶ್ಯಕತೆಯು ನಮಗಿಲ್ಲ. ಕಾಂಗ್ರೆಸ್ ನ ಎಲ್ಲ 69 ಮಂದಿ ಪಕ್ಷಕ್ಕೇ ಮತ ನೀಡಿದ್ದಾರೆ. ಅದು ಸಮಾಧಾನದ ವಿಷಯ. ಬೇರೆ ಪಕ್ಷದ ವಿಚಾರ ನನಗೆ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ರಾಜ್ಯಸಭೆ ಚುನಾವಣೆ ಮತದಾನ ಮುಗಿದ ನಂತರ ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಅವರು ಮಾತನಾಡಿದರು.

ತಮ್ಮ ಪಕ್ಷದ ಶಾಸಕರನ್ನು ಕಾಂಗ್ರೆಸ್ ನವರು ಹೈಜಾಕ್ ಮಾಡಿದ್ದಾರೆ ಎಂಬ  ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ನಾವು ಹೈಜಾಕ್ ಮಾಡಬೇಕು ಅಂತಿದ್ದರೆ ಅರ್ಧಡಜನ್ ಶಾಸಕರು ಇದ್ದರು. ಆದರೆ ನಮಗೆ ಅದರ ಅವಶ್ಯಕತೆ ಇಲ್ಲ. ಬೇರೆಯವರಿಗೆ ಮುಜುಗರ ಮಾಡುವುದು ನಮಗೆ ಬೇಕಿಲ್ಲ.  ಅವರಿಗೆ ನಾವೇನು ಅಡ್ವೈಸ್ ಮಾಡಿದ್ದೇವೆ ಅಂತ ಬೇಕಿದ್ದರೆ ಅವರನ್ನೇ ಕೇಳಿ. ನಮ್ಮ ಪಕ್ಷದ  69 ಮಂದಿಗೆ ವಿಪ್ ನೀಡಿದ್ದೆವು. ಅವರೆಲ್ಲರೂ ನಮಗೇ ಹಾಕಿದ್ದಾರೆ. ಅದನ್ನು ನಾನು ಕಣ್ಣಲ್ಲಿ ನೋಡಿದ್ದೇನೆ. ನನಗೆ ಅಷ್ಟು ಸಾಕು. ಬೇರೆಯವರ ವಿಚಾರ ನಾನು ಮಾತಾಡುವುದಿಲ್ಲ ಎಂದು ಉತ್ತರಿಸಿದರು.

ಜೆಡಿಎಸ್ ಮುಖಂಡ ರೇವಣ್ಣ ಮತಪತ್ರ ತೋರಿಸಿದ ವಿಚಾರ ಕುರಿತು ಮಾತನಾಡಿ, ನಾನು ಒಂದು ಪಕ್ಷದ ಮತಗಟ್ಟೆ ಎಜೆಂಟ್ ಆಗಿ ಗೌಪ್ಯ ಮತದಾನ ಪ್ರಕ್ರಿಯೆ ಬಗ್ಗೆ  ಮಾತಾಡಲು ಹಕ್ಕಿಲ್ಲ. ಅದು ಸರಿಯೂ ಅಲ್ಲ. ನಾನು ಕಣ್ಣಲ್ಲಿ ಕಂಡಿದ್ದು ಮಾತ್ರ ಹೇಳಬಹುದು. ಬೇರೆ ಪಕ್ಷದ ಯಾರೂ ನನಗೆ ಮತಪತ್ರ ತೋರಿಸಿಲ್ಲ. ರೇವಣ್ಣನವರ ವಿಚಾರಕ್ಕೆ ಎರಡೂ ಪಕ್ಷದವರೂ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಗೌಪ್ಯ ಮತದಾನದ ಬಗ್ಗೆ ನಾನು ಮಾತಾಡುವುದಿಲ್ಲ, ಅದಕ್ಕೆ ನನಗೆ ಹಕ್ಕೂ ಇಲ್ಲ ಎಂದರು.

ಶ್ರೀನಿವಾಸಗೌಡರು ನಮ್ಮ ಉತ್ತಮ ಸ್ನೇಹಿತರು. ಬಹಳ ಬೇಕಾದವರು. ಅದರಲ್ಲಿ ಎರಡು ಮಾತಿಲ್ಲ. ಅಸೆಂಬ್ಲಿಯಲ್ಲಿ ನಾವು ಧರಣಿ ಮಾಡಿದಾಗ ನಮ್ಮ ಜತೆ ಕೂತಿದ್ದರು, ಹೋರಾಟ ಮಾಡಿದ್ದರು. ಲೋಕಲ್ ಬಾಡಿ ಚುನಾವಣೆಯಲ್ಲಿ ನಮಗೇ ಬಹಳ ಸಹಾಯ ಮಾಡಿದ್ದಾರೆ. ನಿನ್ನೆ ನನ್ನ ಮನೆಗೂ ಬಂದು ಭೇಟಿ ಮಾಡಿದ್ದರು. ಹಿಂದೆ ಆಫೀಸಿಗೂ ಬಂದಿದ್ದರು. ಆದರೆ ಮತದಾನದ ವಿಚಾರದಲ್ಲಿ ಆವರೇನು ಮಾಡಿದ್ದಾರೋ ಗೊತ್ತಿಲ್ಲ. ಆತ್ಮಸಾಕ್ಷಿ ಮತ ನೀಡಿ ಎಂದು ಕೇಳಿದ್ದೆವು. ಅವರೇನು ಮಾಡಿದ್ದಾರೋ, ಬೇರೆಯವರು ಏನೂ ಹೇಳಿದ್ದಾರೋ ನನಗೆ ಗೊತ್ತಿಲ್ಲ ಎಂದರು.