ಮೈಸೂರು : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ೨೦೨೫- ೨೦೩೦ ನೇ ಸಾಲಿನ ಅಧ್ಯಕ್ಷೀಯ ಚುನಾವಣೆಯು ಏಪ್ರಿಲ್ ೧೩ರಂದು ನಡೆಯಲಿದ್ದು, ಹಾಲಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಬೆಂಬಲಿತ ಅಭ್ಯರ್ಥಿ ಡಾ. ಭಾನುಪ್ರಕಾಶ್ ಶರ್ಮ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಬೆಂಬಲಸೂಚಿಸಲಾಯಿತು.
ಬುಧವಾರ ನಗರದ ಅಗ್ರಹಾರದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್, ಜಿಲ್ಲಾ ಬ್ರಾಹ್ಮಣ ಸಂಘದ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ, ಡಾ.ಭಾನುಪ್ರಕಾಶ್ ಶರ್ಮಾ ರವರು ಕಳೆದ ೩೦ ವರ್ಷಗಳಿಂದ ವೈದಿಕ ಧರ್ಮದ ವೃತ್ತಿಯಲ್ಲಿ ತೊಡಗಿದ್ದು ಹಳೆ ಮೈಸೂರು ಭಾಗದಲ್ಲಿ ಮನೆ ಮಾತಾಗಿದ್ದಾರೆ. ವಿಶ್ವ ಹಿಂದೂ ಪರಿಷತ್, ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ, ಶ್ರೀರಂಗಪಟ್ಟಣ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಅವರನ್ನು ಬೆಂಬಲಿಸೋಣ ಎಂದು ಸಲಹೆ ನೀಡಿದರು.
ಅದೇ ರೀತಿ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಡಿ.ಟಿ. ಪ್ರಕಾಶ್ ಹಾಗೂ ಬ್ರಾಹ್ಮಣ ಯುವ ವೇದಿಕೆಯ ಕಡಕೊಳ ಜಗದೀಶ್ ಅವರನ್ನು ಸಹ ಬೆಂಬಲಿಸಬೇಕೆಂದು ಹಿರಿಯ ಸಮಾಜ ಸೇವಕರಾದ ಕೆ. ರಘುರಾಮ್ ವಾಜಪೇಯಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವೆಂಗಿಪುರ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಗ್ರಾಮಾಂತರ ಅಧ್ಯಕ್ಷರಾದ ಗೋಪಾಲರಾವ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷರಾದ ಎಚ್. ಎನ್. ಶ್ರೀಧರ್ ಮೂರ್ತಿ, ಬಬ್ಬೊರಕಮ್ಮೆ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಸೂರ್ಯನಾರಾಯಣ, ಎಚ್.ಡಿ ಕೋಟೆ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ನಾಗೇಂದ್ರ, ಇಲವಾಲ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ರವಿಶಂಕರ್, ವಿಪ್ರ ಜಾಗೃತಿ ವೇದಿಕೆ ಅಧ್ಯಕ್ಷರಾದ ನಾಗರಾಜ್, ವಿಪ್ರ ಪ್ರೊಫೆಷನಲ್ ಫೋರಮ್ ಶ್ರೀನಿವಾಸ್ ಭಾಷ್ಯಂ, ಕಾರ್ಯದರ್ಶಿ ಸುಧೀಂದ್ರ, ಜ್ಯೋತಿ, ಲತಾ ಬಾಲಕೃಷ್ಣ, ಹೊಯ್ಸಳ ಕರ್ನಾಟಕ ಸಂಘದ ಪದಾಧಿಕಾರಿಗಳು, ವೆಂಕಟೇಶ್ವರ ಪ್ರಾರ್ಥನಾ ಮಂದಿರದ ಪದಾಧಿಕಾರಿಗಳು ಹಾಗೂ ಇನ್ನಿತರ ವಿಪ್ರ ಮುಖಂಡರುಗಳು ಹಾಜರಿದ್ದರು.