ಮನೆ ರಾಷ್ಟ್ರೀಯ ಎನ್‌ ಕೌಂಟರ್‌: ಬ್ಯಾಂಕ್‌ ಮ್ಯಾನೇಜರ್‌ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರ ಸೇರಿ ಇಬ್ಬರ ಹತ್ಯೆ

ಎನ್‌ ಕೌಂಟರ್‌: ಬ್ಯಾಂಕ್‌ ಮ್ಯಾನೇಜರ್‌ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರ ಸೇರಿ ಇಬ್ಬರ ಹತ್ಯೆ

0

ಶ್ರೀನಗರ (Srinagar): ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಎನ್‌ ಕೌಂಟರ್‌ ನಡೆದಿದ್ದು, ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.

ಇತ್ತೀಚೆಗಷ್ಟೇ ಕುಲ್ಗಾಮ್‌ನಲ್ಲಿ ನಡೆದಿದ್ದ ಬ್ಯಾಂಕ್‌ ಮ್ಯಾನೇಜರ್‌ ಹತ್ಯೆಯಲ್ಲಿ ಭಾಗಿಯಾಗಿದ್ದ ಜಾನ್‌ ಮೊಹಮ್ಮದ್‌ ಲೋನ್‌ ಎಂಬ ಉಗ್ರನನ್ನು ಎನ್‌ಕೌಂಟರ್‌ ಮಾಡಿರುವುದಾಗಿ ಕಾಶ್ಮೀರ ವಲಯದ ಐಜಿಪಿ ವಿಜಯ್‌ ಕುಮಾರ್‌ ಹೇಳಿದ್ದಾರೆ.

ಈತ ಭಯೋತ್ಪಾದನಾ ಚಟುವಟಿಕೆಗಳ ಜೊತೆಗೆ ಕುಲ್ಗಾಮ್‌ ಜಿಲ್ಲೆಯಲ್ಲಿ 2/6/2022ರಂದು ನಡೆದ ಬ್ಯಾಂಕ್‌ ಮ್ಯಾನೇಜರ್ ವಿಜಯ್‌ ಕುಮಾರ್‌ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ಕಾಶ್ಮೀರ ಪೊಲೀಸ್‌ ಟ್ವೀಟ್‌ ಮಾಡಿದೆ.

ಬುಧವಾರ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಕಾರ್ಯಾಚರಣೆಯನ್ನು ಎನ್‌ ಕೌಂಟರ್‌ ಆಗಿ ಪರಿವರ್ತಿಸಿ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ.

ಕಾಶ್ಮೀರಿ ಪಂಡಿತರು, ಹಿಂದೂ ಸಮುದಾಯದ ವಲಸಿಗರು ಹಾಗೂ ಸರ್ಕಾರಿ ಉದ್ಯೋಗಿಗಳನ್ನು ಗುರಿಯಾಗಿಸಿ ಉಗ್ರರು ಹತ್ಯೆ ನಡೆಸುತ್ತಿದ್ದಾರೆ. ಅಮರನಾಥ ಯಾತ್ರೆ ವೇಳೆ ದಾಳಿಗೆ ಸಂಚು ರೂಪಿಸಿದ್ದ ಎಲ್‌ಇಟಿಯ ಇಬ್ಬರು ಸೇರಿದಂತೆ ಮೂವರು ಉಗ್ರರನ್ನು ಶ್ರೀನಗರದ ಬೆಮಿನಾದಲ್ಲಿ ಮಂಗಳವಾರ ಬೆಳಿಗ್ಗೆ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಜೂನ್‌ 30ರಿಂದ ಅಮರನಾಥ ಯಾತ್ರೆ ಆರಂಭವಾಗಲಿದೆ.