ದಾವಣಗೆರೆ: ದಾವಣಗೆರೆ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ನಾಗರೀಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನ್ಯಾಯಾಲಯದ ಆದೇಶದಂತೆ ಜನನ, ಮರಣ ದಿನಾಂಕವು ನೋಂದಾಣಿಯಾಗಬೇಕು. ನ್ಯಾಮತಿಯಲ್ಲಿ ನೋಂದಾಣಿಗೆ ಶೀಘ್ರವೇ ಲಾಗಿನ್ ಸಮಸ್ಯೆಯನ್ನು ಸರಿಮಾಡಿಸಬೇಕು. ಸಾರ್ವಜನಿಕರು ಜನನ ದಿನಾಂಕವನ್ನು ತಿದ್ದುಪಡಿ ಮಾಡುವಂತೆ ಒತ್ತಾಯಿಸಬಾರದು. ಜನನ ಮರಣಗಳನ್ನು ನಿಗಧಿತ ದಿನಗಳ ಒಳಗಾಗಿ ಕಡ್ಡಾಯವಾಗಿ ಪ್ರಾಧಿಕಾರದ ಮುಂದೆ ಪ್ರತಿಯೊಬ್ಬರೂ ನೋಂದಾಯಿಸಬೇಕು ಎಂದರು.
2024 ರ ಸಾಲಿನ ಜನವರಿಯಿಂದ ಡಿಸೆಂಬರ್ ಮಾಹೆಯವರೆಗೆ ಜನನ ಅಂಕಿ ಅಂಶದಲ್ಲಿ 14703 ಗಂಡು, 13847 ಹೆಣ್ಣು ಸೇರಿ 28550 ಜನನ ಪ್ರಕರಣಗಳಿವೆ. ಮರಣ ಪ್ರಕರಣಗಳಲ್ಲಿ ಇದೇ ಅವಧಿಯಲ್ಲಿ 9902 ಗಂಡು, 7361, ಹೆಣ್ಣು, 1 ತೃತೀಯ ಲಿಂಗ ಸೇರಿ 17264 ಮರಣ ಪ್ರಕರಣಗಳು ಜಿಲ್ಲೆಯಲ್ಲಿ ಜರುಗಿದೆ.
ಪ್ರಸಕ್ತ 2025 ರ ಸಾಲಿನ ಜನವರಿಯಿಂದ ಏಪ್ರಿಲ್ ವರೆಗೆ ಜನನ ಅಂಕಿ ಅಂಶದಲ್ಲಿ 4593 ಗಂಡು, 4439 ಹೆಣ್ಣು ಸೇರಿ 9032 ಜನನ ಪ್ರಕರಣಗಳಿವೆ. ಮರಣ ಪ್ರಕರಣಗಳಲ್ಲಿ ಇದೇ ಅವಧಿಯಲ್ಲಿ 3313 ಗಂಡು, 2599 ಹೆಣ್ಣು ಸೇರಿ 5912 ಮರಣ ಪ್ರಕರಣಗಳು ಜಿಲ್ಲೆಯಲ್ಲಿ ಜರುಗಿದೆ. ಜನನ ಹಾಗೂ ಮರಣಗಳ ಅಂಕಿ ಅಂಶಗಳನ್ನು ಇ-ಜನ್ಮ ತಂತ್ರಾಂಶದಲ್ಲಿ ನೋಂದಾಯಿಸಲಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಗ್ರಾಮಲೆಕ್ಕಿಗರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಜನನ, ಮರಣ ನೊಂದಣಿ ಪ್ರಾಧಿಕಾರವಾಗಿದ್ದು ನಗರ, ಪಟ್ಟಣ ಪ್ರದೇಶದಲ್ಲಿ ಮುಖ್ಯಾಧಿಕಾರಿ, ಆಯುಕ್ತರು ಪ್ರಾಧಿಕಾರವಾಗಿರುತ್ತಾರೆ.
ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 916 ನೋಂದಣಿ ಘಟಕಗಳು, ನಗರ ಪ್ರದೇಶದಲ್ಲಿ 20 ಸೇರಿದಂತೆ ಒಟ್ಟು 936 ನೋಂದಣಿ ಘಟಕಗಳಿರುತ್ತವೆ.
ಜಿಲ್ಲಾ ಸಾಂಖ್ಯಿಕ ಅಧಿಕಾರಿ ನೀಲಾ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಾನಾಯ್ಕ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ, ಜಿಲ್ಲಾ ಸರ್ಜನ್ ಡಾ. ನಾಗೇಂದ್ರಪ್ಪ ಉಪಸ್ಥಿತರಿದ್ದರು.














