ಬೆಂಗಳೂರು: ನಗರದಲ್ಲಿ ಅಮೃತಹಳ್ಳಿಯ ರಾಯಲ್ ಸಲೂನ್ ಮತ್ತು ಸ್ಪಾಗೆ ಎಂಟ್ರಿ ಕೊಟ್ಟಿದ್ದ ಲೇಡಿ ಡಾನ್ ಗ್ಯಾಂಗ್ ಮಾಲೀಕ ಸಂಜು ಮೇಲೆ ದಾಳಿ ಮಾಡಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತ ಮೂವರಲ್ಲಿ ಕಾವ್ಯಗೆ ರೌಡಿಸಂ ಲಿಂಕ್ ಇದೆ. ಹೇಗೆ ಅಂದರೆ ಬೆಂಗಳೂರಿನ ರೌಡಿಶೀಟರ್ ಮುನಿಕೃಷ್ಣ ಅಲಿಯಾಸ್ ಅಮೃತಹಳ್ಳಿ ಕಪ್ಪೆ ಪ್ರಿಯತಮೆ ಈ ಕಾವ್ಯ. ಈಕೆ ಸಾಮಾನ್ಯ ಮಹಿಳೆ ಅಲ್ಲ ಎಂಬುದು ಪೋಲಿಸರ ತನಿಖೆಯಿಂದ ಬಹಿರಂಗವಾಗಿದೆ.
ರೌಡಿಶೀಟರ್ ಕಪ್ಪೆ ಈಗ ಗೂಂಡಾ ಕಾಯ್ದೆ ಅಡಿಯಲ್ಲಿ ಕಲಬುರಗಿ ಜೈಲಿನಲ್ಲಿ ಇರೋದಾಗಿ ದೃಢವಾಗಿದೆ. ಈ ಹಿಂದೆ ಈತನನ್ನು ಬೆಂಗಳೂರು ನಗರದಿಂದ ಗಡಿಪಾರು ಮಾಡಲಾಗಿತ್ತು. ಆದರೂ ಕೂಡ ಕಾವ್ಯ ಪ್ರಿಯತಮನ ಹೆಸರಿನಲ್ಲಿ ಫೈನಾನ್ಸ್ ಮಾಡಿ ರೌಡಿಸಂ ಮಾಡುತ್ತಿದ್ದಳು. ಆದರೆ ಜೈಲಿನಲ್ಲಿದ್ದರೂ ತನ್ನ ಪ್ರಭಾವ ಕಡಿಮೆಯಾಗದಂತೆ ಕಾವ್ಯ, ಕಪ್ಪೆ ಹೆಸರನ್ನು ಬಳಸಿಕೊಂಡು ಹವಾ ಮೈಂಟೇನ್ ಮಾಡುತ್ತಿದ್ದಳು. ಈಗ ಕಾವ್ಯ ಕೂಡ ಜೈಲುಪಾಲಾಗಿದ್ದಾಳೆ.














