ಮನೆ ಅಪರಾಧ ಪೆಟ್ರೋಲ್‌ ಕಳ್ಳತನಕ್ಕೆ ಸಂಚು ರೂಪಿಸಿದ್ದ 6 ಮಂದಿಯ ಬಂಧನ

ಪೆಟ್ರೋಲ್‌ ಕಳ್ಳತನಕ್ಕೆ ಸಂಚು ರೂಪಿಸಿದ್ದ 6 ಮಂದಿಯ ಬಂಧನ

0

ಹಾಸನ (Hassan): ಪೆಟ್ರೋಲ್‌ ಕಳ್ಳತನ ಮಾಡಲು ಸಂಚು ರೂಪಿಸಿದ್ದ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಾನುಬಾಳು ಗ್ರಾಪಂ ಸದಸ್ಯ ಹುರುಡಿ ಗ್ರಾಮದ ಕೇಶವ ಮೂರ್ತಿ(57), ಹಾಸನ ತಾಲೂಕು ಯೋಗಿಹಳ್ಳಿ ಗ್ರಾಮದ ಸಚಿನ್‌(22), ಮಂಗಳೂರು ಗೋಳಿಯಾರ್‌ ಮೂಲದ ಹಿಟಾಚಿ ಆಪರೇಟರ್‌ ಸಿರಾಜುದ್ದೀನ್‌(31), ಸುಳ್ಯ ತಾಲೂಕು ಅಡಿಯಾರು ಮನೆ ಮಜಲೂರು ಗ್ರಾಮದ ಧನಂಜಯ್ಯ, ಬಂಟ್ವಾಳ ತಾಲೂಕು ಪಾಣೆ ಮಂಗಳೂರು ಸುಭಾಷ್‌ನಗರ ವಾಸಿ ಹಿಟಾಚಿ ಮಾಲೀಕ ಅಬ್ದುಲ್‌ ಹಕೀಮ್‌(47) ಹಾಗೂ ಹುರುಡಿ ಗ್ರಾಮದ ಗಿರೀಶ್‌ (42) ಬಂಧಿತ ಆರೋಪಿಗಳು.

ಆರೋಪಿಗಳು ಸಕಲೇಶಪುರ ತಾಲೂಕಿನ ಹಾನುಬಾಳು ಹೋಬಳಿ ಹುರುಡಿ ಗ್ರಾಮದ ಸಮೀಪ ಪೆಟ್ರೋಲಿಯಂ ಪೈಪ್‌ಲೈನ್‌ ರಂಧ್ರ ಕೊರೆದು ಪೆಟ್ರೋಲ್‌ ಕಳ್ಳತನ ಮಾಡಲು ಸಂಚು ರೂಪಿಸಿದ್ದರು. ಇವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಿಎಂಬಿಎಚ್‌ಎಲ್‌ ಹಾಗೂ ಎಚ್‌ಪಿಸಿಎಲ್‌ ಸಂಸ್ಥೆಗೆ ಸೇರಿದ ಮಂಗಳೂರು- ಬೆಂಗಳೂರು(362 ಕಿ.ಮೀ) ತೈಲ ಸರಬರಾಜು ಪೈಪ್‌ಲೈನನ್ನು ಹುರುಡಿ ಸಮೀಪ(116.6 ಕಿಮೀ ವ್ಯಾಪ್ತಿ) ಜೂ.4 ರಂದು ರಾತ್ರಿ ವೇಳೆ ಅಗೆದು ಪೈಪ್‌ ಕೊರೆದು ತೈಲ ಕದಿಯಲು ಪೈಪ್‌ ಅಳವಡಿಸುವ ಪ್ರಯತ್ನ ನಡೆಸಲಾಗಿದೆ. ತಕ್ಷಣವೇ ಸಂಸ್ಥೆಯ ತಾಂತ್ರಿಕ ವಿಭಾಗಕ್ಕೆ ಇದು ಗೊತ್ತಾಗಿದ್ದು, ಪೈಪ್‌ಲೈನ್‌ ಮಾರ್ಗ ಪರಿಶೀಲಿಸಿದಾಗ ಈ ಪ್ರಕರಣ ಪತ್ತೆಯಾಗಿದೆ. ಸಂಸ್ಥೆ ನೀಡಿದ ದೂರಿನ ಅನ್ವಯ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದಾಗ ಈ ಆರೋಪಿಗಳು ಕೃತ್ಯ ಎಸಗಿರುವುದು ಪತ್ತೆಯಾಗಿದೆ ಎನ್ನಲಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ, ಎಡಿಸಿ ನಂದಿನಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಅನಿಲ್‌ ಕುಮಾರ್‌, ಇನ್ಸ್‌ಪೆಕ್ಟರ್‌ ಚೈತನ್ಯ, ಪಿಎಸ್‌ಐ ಬಸವರಾಜು ಅವರ ತಂಡ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.