ಮನೆ ರಾಜ್ಯ ಕರ್ನಾಟಕಕ್ಕೆ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಕೆ: ಜೆ.ಪಿ. ನಡ್ಡಾ ಭರವಸೆ : ಬೊಮ್ಮಾಯಿ...

ಕರ್ನಾಟಕಕ್ಕೆ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಕೆ: ಜೆ.ಪಿ. ನಡ್ಡಾ ಭರವಸೆ : ಬೊಮ್ಮಾಯಿ ಸ್ಪಷ್ಟನೆ

0

ನವದೆಹಲಿ: ಹತ್ತು ಹದಿನೈದು ದಿನಗಳಲ್ಲಿ ಕರ್ನಾಟಕಕ್ಕೆ ಅಗತ್ಯವಿರುವ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರವನ್ನು ಪೂರೈಸುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ನವ ದೆಹಲಿಯಲ್ಲಿ ಇಂದು ರಾಜ್ಯದ ಬಿಜೆಪಿ ಸಂಸದರ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕರ್ನಾಟಕದಲ್ಲಿ ರೈತರಿಗೆ ಸಕಾಲಕ್ಕೆ ಯುರಿಯಾ ಗೊಬ್ಬರ ಸಿಗುತ್ರಿಲ್ಲ. ಇದು ದಿಡೀರ್ ಉದ್ಭವಿಸಿದ ಸಮಸ್ಯೆ ಅಲ್ಲ. ಮುಂಗಾರು ಹಾಗೂ ಮುಂಗಾರು ಪೂರ್ವ ಮಳೆ ಈ ವರ್ಷ ಚನ್ನಾಗಿ ಬಂದಿರುವುದರಿಂದ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ರೈತರು ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಮೆಕ್ಕೆ ಜೋಳ ಬಿತ್ತನೆ ಪ್ರದೇಶ ಈ ವರ್ಷ ಶೇ 1.5 ರಷ್ಟು ಹೆಚ್ಚಳವಾಗಿದೆ. ಅಷ್ಟು ಪ್ರಮಾಣದಲ್ಲಿ ಬಿತ್ತನೆಯಾಗಿರುವುದು ಕೃಷಿ ಇಲಾಖೆಗೆ ಗೊತ್ತಿದೆ. ಅದನ್ನು ಇಲಾಖೆ ಒಪ್ಪಿಕೊಂಡಿದೆ. ಸಾಮಾನ್ಯವಾಗಿ ಯುರಿಯಾ ಬಹಳ ಬೇಡಿಕೆ ಜುಲೈ ನಿಂದ ಪ್ರಾರಂಭವಾಗಿ ಆಗಸ್ಟ್ ವರೆಗೂ ಇರುತ್ತದೆ. ಆದರೆ, ಸಮಯಕ್ಕೆ ಸರಿಯಾಗಿ ಮಳೆ ಆಗಿರುವುದರಿಂದ ಜೂನ್ ಮೂರನೇ ವಾರದಿಂದಲೇ ಗೊಬ್ಬರದ ಬೇಡಿಕೆ ಪ್ರಾರಂಭವಾಗಿದೆ ಎಂದರು.

ಸಾಮಾನ್ಯವಾಗಿ ರೈತರು ಒಂದು ಬಾರಿ ಯೂರಿಯಾ ಗೊಬ್ಬರ ಹಾಕುತ್ತಾರೆ. ಆದರೆ, ಈ ಬಾರಿ ಒಂದು ಸಾರಿ ಹಾಕಿದ ನಂತರ ಮಳೆಯಾಗಿ ಮತ್ತೊಂದು ಸಾರಿ ಹಾಕಿದಾಗಲೂ ಮಳೆಯಾಗಿ ಮೂರು ಬಾರಿ ಗೊಬ್ಬರ ಹಾಕುವ ಪರಿಸ್ಥಿತಿ ನಿರ್ಮಾಣ ಆಗಿದೆ. ಪದೇ ಪದೇ ಯುರಿಯಾ ಹಾಕುವುದರಿಂದ ರೈತರಿಗೆ ಅರ್ಥಿಕ ಸಂಕಷ್ಟ ಬಂದೊದಗಿದೆ. ಅದಲ್ಲದೇ ಗೋವಿನ ಜೋಳದಲ್ಲಿ ಕಸ ಬೆಳೆದಿದ್ದರಿಂದ ಕೂಲಿ ಕಾರ್ಮಿಕರ ಕೊರತೆಯಿಂದ ಅದಕ್ಕೂ ಔಷಧ ಹೊಡೆಯುವ ಪರಿಸ್ಥಿತಿ ಬಂದಿದೆ. ಇದರಿಂದ ರೈತರಿಗೆ ಸಾಕಷ್ಟು ಆರ್ಥಿಕ ಹೊರೆಯಾಗುತ್ತಿದೆ. ಇದರ ಹೊರತಾಗಿ ಗೊಬ್ಬರ ಡೀಲರ್ ಅಂಗಡಿಗಳ ಮುಂದೆ ಹಗಲು ರಾತ್ರಿ ನಿಲ್ಲುವುದರಿಂದ ಬಹಳ ಕ್ಷೋಭೆ ಉಂಟಾಗಿದೆ ಇದರಿಂದ ರೈತರು ಬಹಳ ಉಗ್ರವಾಗಿ ಪ್ರತಿಭಟಿಸಿದ್ದಾರೆ. ಈ ಸಮಸ್ಯೆ ಸುಮಾರು ಎಂಟತ್ತು ಜಿಲ್ಲೆಗಳಲ್ಲಿ ತೀರ್ವವಾಗಿದೆ. ಮೂರ್ನಾಲ್ಕು ಜಿಲ್ಲೆಗಳಲ್ಲಿ ಸಾಮಾಮ್ಯವಾಗಿದೆ ಎಂದರು.

ಮುಂಗಾರು ಹಂಗಾಮಿಗೆ 11.17 ಲಕ್ಷ ಮೆಟ್ರಿಕ್ ಟನ್ ಗೊಬ್ಬರದ ಬೇಡಿಕೆ ಇದೆ. ಜುಲೈ ಅಂತ್ಯದವರೆಗೆ 6.25 ಲಕ್ಷ ಮೆಟ್ರಿಕ್ ಟನ್ ಕೊಡಬೇಕು. ಈಗಾಗಲೇ 5.35 ಲಕ್ಷ ಮೆಟ್ರಿಕ್ ಟನ್ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಇದುವರೆಗೂ 8.82 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಇದೆ. ಅದರಲ್ಲಿ ಕರ್ನಾಟಕ ಸರ್ಕಾರ 7.74 ಲಕ್ಷ ಮೆಟ್ರಿಕ್ ಟನ್ ವಿತರಣೆಯಾಗಿದೆ ಎಂದು ವರದಿ ಕಳುಹಿಸಿದೆ. ಅಂದರೆ ಅವರು 6.25 ಲಕ್ಷ ಮೆಟ್ರಿಕ್ ಟನ್ ವಿತರಣೆ ಬದಲು 7.74 ಲಕ್ಷ ಮೆಟ್ರಿಕ್ ಟನ್ ವಿತರಣೆ ಮಾಡಿದ್ದಾರೆ ಎಂದರೆ ಅವರ ಬಳಿ ಬಫರ್ ಸ್ಟಾಕ್ ಇತ್ತು ಎಂದರ್ಥ. ಈಗ ಕೇಂದ್ರ ಸರ್ಕಾರ ಕೊಡಬೇಕಾಗಿರುವುದು 1.35 ಲಕ್ಷ ಮೆಟ್ರಿಕ್ ಟನ್.ನಾವು ಇಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಜೆ.ಪಿ. ನಡ್ಡಾ ಅವರನ್ನು ನಿಯೋಗದಲ್ಲಿ ಭೇಟಿ ಮಾಡಿ ರಾಜ್ಯದಲ್ಲಿನ‌ ಗೊಬ್ಬರದ ಸಮಸ್ಯೆ ಕುರಿತು ಚರ್ಚೆ ಮಾಡಿದ್ದೇವು. ಅವರು ತಕ್ಷಣ ಅಧಿಕಾರಿಗಳ ಜೊತೆ ಚರ್ಚಿಸಿ ಕರ್ನಾಟಕಕ್ಕೆ 1.35 ಲಕ್ಷ ಮೆಟ್ರಿಕ್ ಟನ್ ಯುರಿಯಾ ಗೊಬ್ಬರವನ್ನು ಕಳುಹಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮೂರ್ನಾಲ್ಕು ಕಂಪನಿಗಳಿಗೆ ಸೂಚನೆ ಕೊಡುತ್ತೇನೆ ಕೋರಮಂಡಲ, ಮದ್ರಾಸ್ ಫರ್ಟಿಲೈಸರ್ ಗಳಿಗೆ ಸೂಚನೆ ಕೊಡುತ್ತೇವೆ. ಹತ್ತು ಹದಿನೈದು ದಿನಗಳಲ್ಲಿ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಸುವುದಾಗಿ ತಿಳಿಸಿದ್ದಾರೆ. ಇವತ್ತು ಹದಿನಾರು ಸಾವಿರ ಮೆಟ್ರಿಕ್ ಟನ್ ಗೊಬ್ಬರ ಕಳುಹಿಸಲಾಗುತ್ತಿದೆ. ಪ್ರತಿ ದಿನ ಹದಿನೈದರಿಂದ ಇಪ್ಪತ್ತು ಸಾವಿರ ಮೆಟ್ರಿಕ್ ಟನ್ ಗೊಬ್ಬರ ಸರಬರಾಜು ಮಾಡಲಾಗುತ್ತದೆ. ರಾಜ್ಯ ಸರ್ಕಾರ ಕೇಂದ್ರದಿಂದ ಸರಬರಾಜಾದ ಗೊಬ್ಬರವನ್ನು ಯಾವ ಜಿಲ್ಲೆ, ತಾಲೂಕು, ಹಾಗೂ ಯಾವ ಗ್ರಾಮದಲ್ಲಿ ಬೇಡಿಕೆ ಇದೆ ಎನ್ನುವುದನ್ನು ತಿಳಿದುಕೊಂಡು ಸರಬರಾಜು ಮಾಡಬೇಕು. ರೈತರು ಎಲ್ಲಿಯೂ ಸರತಿ ಸಾಲಿನಲ್ಲಿ ನಿಲ್ಲದೇ ಅವರಿಗೆ ಗೊಬ್ಬರ ದೊರೆಯುವಂತೆ ನೋಡಿಕೊಳ್ಳಬೇಕು. ಎಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಾರೊ ಅವರ ಅಂಗಡಿಗಳ ಮೇಲೆ ದಾಳಿ ಮಾಡಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಅಕ್ರಮವಾಗಿ ಸಂಗ್ರಹಿಸಿದ್ದ ಗೊಬ್ಬರವನ್ನು ವಶಪಡಿಸಿಕೊಂಡು ರೈತರಿಗೆ ವಿತರಿಸಬೇಕು.ಅವರ ಪರವಾನಗಿ ರದ್ದುಪಡಿಸುವ ಕ್ರಮ ಕೈಗೊಳ್ಳಬೇಕು.ಎಲ್ಲಿ ಗೊಬ್ಬರದ ಅಗತ್ಯವಿದೆ ಅಲ್ಲಿ ಸರಿಯಾಗಿ ಸರಬರಾಜು ಮಾಡಿದರೆ ಯೂರಿಯಾ ಗೊಬ್ಬರ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.