ಮನೆ ರಾಜ್ಯ ದಿನೇಶ್ ವಿಚಾರಣೆಯಿಂದ ಮತ್ತಷ್ಟು ಅಕ್ರಮ ಬಯಲು – ಇಡಿಯಿಂದ 150 ಕೋಟಿ ಮೌಲ್ಯದ ಆಸ್ತಿ-ಜಪ್ತಿ

ದಿನೇಶ್ ವಿಚಾರಣೆಯಿಂದ ಮತ್ತಷ್ಟು ಅಕ್ರಮ ಬಯಲು – ಇಡಿಯಿಂದ 150 ಕೋಟಿ ಮೌಲ್ಯದ ಆಸ್ತಿ-ಜಪ್ತಿ

0

ಮೈಸೂರು : ಮುಡಾ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನವಾಗಿರುವ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ವಿಚಾರಣೆಯಿಂದ ಕೋಟಿ ಕೋಟಿ ಅಕ್ರಮದ ಕಥೆ ಬಯಲಾಗಿದೆ. ದಿನೇಶ್ ಕುಮಾರ್ ವಿಚಾರಣೆಯಿಂದ ಸಿಕ್ಕ ದಾಖಲೆ ಪ್ರಕಾರ ಒಟ್ಟು 150 ಕೋಟಿ ಮೌಲ್ಯದ ಅಕ್ರಮದ ಸೈಟ್‌ಗಳನ್ನು ಇಡಿ ಜಪ್ತಿ ಮಾಡಿದೆ.

ಈ ಮೂಲಕ ಮುಡಾ ಬ್ರಹ್ಮಾಂಡ ಭ್ರಷ್ಟಾಚಾರದ ಕಿಂಗ್‌ಪಿನ್ ದಿನೇಶ್ ಎಂಬ ತೀರ್ಮಾನಕ್ಕೆ ಇಡಿ ಬಂದಂತೆ ಇದೆ. ಇಡಿಯ ಡೆಪ್ಯೂಟಿ ಡೈರೆಕ್ಟರ್ ಬರೆದ ಅಧಿಕೃತ ಪತ್ರದಲ್ಲಿ ಮುಡಾದ ಇದುವರೆಗಿನ ಭ್ರಷ್ಟಾಚಾರದ ಬಗ್ಗೆ ಸಂಪೂರ್ಣ ಉಲ್ಲೇಖವಿದೆ.

ಇ.ಡಿ ಸಿದ್ಧಪಡಿಸಿರುವ ಪಟ್ಟಿಯಲ್ಲಿರುವ ಸೈಟ್‌ಗಳ ವರ್ಗಾವಣೆ, ಮಾರಾಟ ಯಾವುದೂ ನಡೆಸುವಂತಿಲ್ಲ ಎಂದು ಎಲ್ಲಾ ಸಬ್ ರಿಜಿಸ್ಟರ್‌ಗಳಿಗೆ ಸೂಚನೆ ಪತ್ರ ರವಾನಿಸಿದೆ. ಈ ಪತ್ರದಲ್ಲಿ ಮುಡಾ ಮಾಜಿ ಆಯುಕ್ತ ಜಿ.ಟಿ ದಿನೇಶ್ ಕುಮಾರ್, ದಿನೇಶ್ ಕುಮಾರ್ ಸಂಬಂಧಿಕರು ಹಾಗೂ ಸಿದ್ದರಾಮಯ್ಯ ಆಪ್ತ ಬೆಂಬಲಿಗ ಪಾಪಣ್ಣಗೆ ಸೇರಿದ ಅಕ್ರಮವಾಗಿ ಮಂಜೂರಾದ ನಿವೇಶನಗಳ ಪಟ್ಟಿ ಇದೆ.

ಮುಡಾ ಅಕ್ರಮಕ್ಕೆ ಮಾಜಿ ಆಯುಕ್ತ ದಿನೇಶ್ ಕುಮಾರ್ ತಮ್ಮ ಮನೆ ಮಂದಿಯನ್ನೆಲ್ಲ ಬಳಸಿಕೊಂಡಿದ್ದಾರೆ. ತಮ್ಮ ಹೆಂಡತಿ, ಹೆಂಡತಿಯ ತಮ್ಮ, ಹೆಂಡತಿಯ ಅಜ್ಜಿ, ಸಂಬಂಧಿಕರು, ಮಾವ, ಮನೆ ಕೆಲಸದವರು ಎಲ್ಲರ ಹೆಸರಿನಲ್ಲೂ ಬ್ಯಾಂಕ್ ಖಾತೆ ತೆರೆದು ತನ್ನ ಬಳಿ ಅದನ್ನು ಇಟ್ಟುಕೊಂಡು ಅವರ ಹೆಸರಿನಲ್ಲಿ ಎಲ್ಲಾ ಅವ್ಯವಹಾರ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.

ದಿನೇಶ್ ಕುಮಾರ್ ತಮ್ಮ ಮನೆ ಮಂದಿಯ ಹೆಸರಿನಲ್ಲೇ ಹಣ ವರ್ಗಾವಣೆ, ಜಮೀನು ಖರೀದಿ ಸೇರಿದಂತೆ ಭಾರಿ ಅಕ್ರಮ ನಡೆಸಿರುವುದು ಸಾಕ್ಷಿಗಳ ಹೇಳಿಕೆ ಮೂಲಕ ಸಾಬೀತಾಗಿದೆ. ಇ.ಡಿಯ ವರದಿಯಲ್ಲಿ ಸಾಕ್ಷಿಗಳ ಹೇಳಿಕೆ ಸೇರಿದಂತೆ ಎಲ್ಲವೂ ಉಲ್ಲೇಖವಿದೆ. ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘ ಮತ್ತು ಚಾಮುಂಡೇಶ್ವರಿ ಸೌಹಾರ್ಧ ಸಹಕಾರ ಸಂಘ ಹೆಸರಿನಲ್ಲೇ ದಿನೇಶ್ ಬಹುದೊಡ್ಡ ಅಕ್ರಮ ನಡೆಸಿದ್ದಾರೆ.

ದಿನೇಶ್ ಕುಮಾರ್ ವಿಚಾರಣೆಯಿಂದ ಸಿಎಂ ಸಿದ್ದರಾಮಯ್ಯ ಪರಮಾಪ್ತನಿಗೆ ಸಂಕಷ್ಟ ಶುರುವಾಗಿದೆ. ಮೈಸೂರಿನ ಸಿಎಂ ಸಿದ್ದರಾಮಯ್ಯ ಅವರ ಬಹುಕಾಲಿನ ಪರಮಾಪ್ತ ಪಾಪಣ್ಣ, 50:50 ಅನುಪಾತದಲ್ಲಿ ಬಹುದೊಡ್ಡ ಫಲಾನುಭವಿ ಆಗಿದ್ದಾರೆ.

ನ್ಯಾಯಾಲಯ ಪರಿಹಾರಕ್ಕೆ ಪಾಪಣ್ಣ ಅರ್ಹ ಅಲ್ಲ ಎಂದು ಆದೇಶಿಸಿದ್ದರೂ ಪರಿಹಾರದ ಮೂಲಕ ದಿನೇಶ್ ಕುಮಾರ್ ಇವರಿಗೆ ಸೈಟ್ ಕೊಟ್ಟಿದ್ದಾರೆ. ಪಾಪಣ್ಣಗೆ ಎಲ್ಲಾ ಕಾನೂನುಗಳನ್ನ ಗಾಳಿಗೆ ತೂರಿ ಒಟ್ಟು 31 ಸೈಟ್ ಅಕ್ರಮವಾಗಿ ನೀಡಲಾಗಿದೆ. ನ್ಯಾಯಾಲಯದ ಆದೇಶವನ್ನೇ ಉಲ್ಲಂಘಿಸಿ ಸಿಎಂ ಪರಮಾಪ್ತನಿಗೆ ಸಹಾಯ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ ಆ ಎಲ್ಲಾ ಸೈಟ್‌ಗಳನ್ನು ಇ.ಡಿ ಜಪ್ತಿ ಮಾಡಿದೆ.

ಒಟ್ಟಾರೆ ಇ.ಡಿ ನಿಧಾನವಾಗಿ ಇಡೀ ಹಗರಣದ ಮೂಲಕ್ಕೆ ಕೈ ಹಾಕಿ ಸಾಕ್ಷಿ ಸಮೇತ ಎಲ್ಲವನ್ನೂ ಬಯಲು ಮಾಡುತ್ತಿದೆ. ಪ್ರಕರಣದಲ್ಲಿ ಕೇಳಿ ಬಂದ ಇನ್ನಷ್ಟು ಅಧಿಕಾರಿಗಳ ಬಂಧನವಾದರೆ ಮತ್ತಷ್ಟು ಹಗರಣ ಬಯಲಿಗೆ ಬರುವುದು ನಿಶ್ಚಿತವಾಗಿದೆ.