ಶ್ರೀನಗರ : ದೆಹಲಿಯ ಕೆಂಪು ಕೋಟೆಯ ಬಳಿ ಸಂಭವಿಸಿದ್ದ, ಕಾರು ಸ್ಫೋಟದ ರೂವಾರಿ ಉಮರ್ ಎಂದು ತನಿಖೆ ವೇಳೆ ತಿಳಿದುಬಂದಿದೆ. ಅದರ ಬೆನ್ನಲ್ಲೇ ಭದ್ರತಾ ಪಡೆಗಳು ಇಂದು (ಶುಕ್ರವಾರ) ಉಗ್ರನ ಮನೆಯನ್ನು ಧ್ವಂಸಗೊಳಿಸಿವೆ.
ದೆಹಲಿ ಸ್ಫೋಟದ ತನಿಖೆ ಚುರುಕುಗೊಂಡಂತೆ ಉಗ್ರರ ಹಿಂದಿನ ರಹಸ್ಯ ಒಂದೊಂದಾಗಿಯೇ ಹೊರಬರುತ್ತಿದೆ. ಡಾ.ಉಮರ್ ನಬಿ ತಾಯಿಯ ಡಿಎನ್ಎ ಪರೀಕ್ಷೆ ಮಾಡಿದಾಗ, ಸ್ಫೋಟದ ವೇಳೆ ಕಾರಿನಲ್ಲಿ ಸಿಕ್ಕಿದ್ದ ಶವದ ಡಿಎನ್ಎಗೆ ಹೊಂದಾಣಿಕೆಯಾಗಿದೆ. ಇದರಿಂದ ಸ್ಫೋಟದ ಪ್ರಮುಖ ರೂವಾರಿ ಡಾ.ಉಮರ್ ನಬಿ ಎಂದು ತಿಳಿದುಬಂದಿದೆ.
ಶುಕ್ರವಾರ ಭದ್ರತಾ ಪಡೆಗಳಿ ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿದ್ದ ಉಗ್ರ ಉಮರ್ನ ಮನೆಯನ್ನು ನೆಲಸಮಗೊಳಿಸಿವೆ. ಈ ಮೂಲಕ ಭಾರತದ ನೆಲದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವವರಿಗೆ ಇಲ್ಲಿ ಜಾಗವಿಲ್ಲ ಎಂಬುವುದನ್ನು ತೋರಿಸಿವೆ. ಇದಕ್ಕೂ ಮೊದಲು ಪಹಲ್ಗಾಮ್ ದಾಳಿಯ ಸಂದರ್ಭದಲ್ಲಿಯೂ ಕೃತ್ಯದಲ್ಲಿ ಭಾಗಿಯಾದವರ ಮನೆಯನ್ನು ಧ್ವಂಸಗೊಳಿಸಲಾಗಿತ್ತು.
ಸೋಮವಾರ (ನ.10) ದೆಹಲಿ ಕೆಂಪು ಕೋಟೆಯಲ್ಲಿ ಬಳಿ ಸಂಭವಿಸಿದ್ದ ಸ್ಫೋಟದಲ್ಲಿ ಒಟ್ಟು 13 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸ್ಫೋಟಕ್ಕೂ ಮುನ್ನ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಹುಂಡೈ ಐ20 ಕಾರಿನಲ್ಲಿ ಉಮರ್ ಇರುವುದು ಕಂಡುಬಂದಿತ್ತು.















