ಮನೆ ರಾಷ್ಟ್ರೀಯ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ – ಮೋದಿಯಿಂದ ಧಾರ್ಮಿಕ ಧ್ವಜಾರೋಹಣ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ – ಮೋದಿಯಿಂದ ಧಾರ್ಮಿಕ ಧ್ವಜಾರೋಹಣ

0

ಲಕ್ನೋ : ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದ್ದ ಭವ್ಯ ರಾಮ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಈ ಹಿನ್ನೆಲೆ ನಾಳೆ (ಮಂಗಳವಾರ) ಧಾರ್ಮಿಕ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಲಿದ್ದಾರೆ.

ಮಂಗಳವಾರ ಮಧ್ಯಾಹ್ನ ಸುಮಾರು 11:52ರಿಂದ 12:35ರ ಶುಭ ಮುಹೂರ್ತದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. 191 ಅಡಿ ಎತ್ತರದ ರಾಮ ಮಂದಿರದ ಮೇಲ್ಭಾಗದಲ್ಲಿ 11 ಅಡಿ ಅಗಲ ಮತ್ತು 22 ಅಡಿ ಉದ್ದದ ತ್ರಿಕೋನಾಕಾರದ ಕೇಸರಿ ಧ್ವಜವನ್ನು ಹಾರಿಸಲಾಗುತ್ತಿದೆ. ದ್ವಜದ ಮೇಲೆ ಸೂರ್ಯವಂಶಿ ಮತ್ತು ತ್ರೇತಾಯುಗದ ಚಿಹ್ನೆಗಳನ್ನು ಇರಿಸಲಾಗಿದೆ.

ಧ್ವಜದ ವಿಶೇಷತೆಗಳೇನು ? – ರಾಮ ಮಂದಿರದ ಮೇಲೆ ಹಾರಲಿರುವ ಧ್ವಜ ತುಂಬಾ ವಿಶೇಷವಾಗಿದ್ದು, ದೈವಿಕ ಧ್ವಜವನ್ನು ಗುಜರಾತ್‌ನ ಅಹಮದಾಬಾದ್‌ನಲ್ಲಿ ತಯಾರಿಸಲಾಗಿದೆ. ಅಯೋಧ್ಯೆ ರಾಮ ಮಂದಿರದ ಧಾರ್ಮಿಕ ಧ್ವಜದಲ್ಲಿರುವ ಚಿಹ್ನೆಗಳಿಗೆ ಪ್ರತಿಯೊಂದಕ್ಕೂ ವಿಶೇಷ ಅರ್ಥವಿದೆ. ಕೇಸರಿ ಬಣ್ಣದ ಧ್ವಜ, ಸೂರ್ಯ ದೇವರು ಮತ್ತು ಓಂ ಚಿಹ್ನೆ ಹೊಂದಿದೆ.

ಧಾರ್ಮಿಕ ಮಹತ್ವವುಳ್ಳ ವಿಶಿಷ್ಟವಾದ ಮರದ ಚಿತ್ರವನ್ನು ಸಹ ಧ್ವಜದ ಮೇಲೆ ಚಿತ್ರಿಸಲಾಗಿದ್ದು, ತಯಾರಿಸಲು 25 ದಿನಗಳು ಬೇಕಾಯಿತು. ಮೂರು ಪದರಗಳ ಬಟ್ಟೆಯಿಂದ ತಯಾರಿಸಲಾಗಿದೆ. ಇದರಲ್ಲಿ ಬಳಸಲಾದ ಪ್ರತಿಯೊಂದು ಅಂಶವೂ ಸ್ಥಳೀಯವಾಗಿದೆ. ಅಂಚುಗಳನ್ನು ಗೋಲ್ಡನ್ ರೇಷ್ಮೆಯಿಂದ ಮಾಡಲಾಗಿದ್ದು, ಎಲ್ಲಾ ಚಿಹ್ನೆಗಳು ಕೈಯಿಂದ ಮಾಡಲಾಗಿದೆ. ಅವೆಲ್ಲವನ್ನೂ ಕೈಯಿಂದ ರಚಿಸಲು 7-8 ದಿನಗಳು ಬೇಕಾಯಿತು.

ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಭಾರತದ ವಿವಿಧೆಡೆಯ ಆರು ಸಾವಿರ ಪ್ರಮುಖ ಗಣ್ಯರು ಭಾಗವಹಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಭಾರಿ ಸಿದ್ದತೆ ನಡೆದಿದೆ.

ಮೋದಿ ಸ್ವಾಗತಕ್ಕೆ ಅದ್ಧೂರಿ ತಯಾರಿ – ಸಂತರು ವೇದ ಮಂತ್ರಗಳು, ಶಂಖ ಊದುವಿಕೆ ಮತ್ತು ಗಂಟೆಯ ನಾದದೊಂದಿಗೆ ಮತ್ತು ಐದು ಸಾವಿರಕ್ಕೂ ವಿವಿಧ ವರ್ಗಗಳ ಮಹಿಳೆಯರಿಂದಲೂ ಪ್ರಧಾನಿಯನ್ನು ಸ್ವಾಗತಿಸಲಿದ್ದಾರೆ. ದೆಹಲಿಯಿಂದ ಅಯೋಧ್ಯೆಗೆ ವಿಮಾನದ ಮೂಲಕ ಆಗಮನ, ವಿಮಾನನಿಲ್ದಾಣದಿಂದ ಅಯೋಧ್ಯೆಯ ಸಾಕೇತ್ ಕಾಲೇಜಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ.

ಅಲ್ಲಿಂದ ರೋಡ್ ಶೋ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ. ರೋಡ್ ಶೋನ ಒಂದು ಕಿಲೋಮೀಟರ್ ಉದ್ದದ ರಾಮಪಥವನ್ನು ಎಂಟು ವಲಯಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಲಯದಲ್ಲಿ, ಸ್ವಸಹಾಯ ಗುಂಪುಗಳ ಮಹಿಳೆಯರು ಪ್ರಧಾನಿಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಥಾಲಿ, ಆರತಿ, ಹೂವಿನ ಹಾರಗಳು ಮತ್ತು ನಮಸ್ಕಾರ ಮುದ್ರೆಯೊಂದಿಗೆ ಸ್ವಾಗತಿಸಲಿದ್ದಾರೆ.

ಎರಡು ದಿನ ಭಕ್ತರಿಗಿಲ್ಲ ದರ್ಶನ – ಧ್ವಜಾರೋಹಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಗಣ್ಯ ವ್ಯಕ್ತಿಗಳು ಭಾಗಿಯಾಗುತ್ತಿರುವ ಹಿನ್ನೆಲೆ ದೇವಸ್ಥಾನಕ್ಕೆ ಭಕ್ತರ ದರ್ಶನಕ್ಕೆ ನಿರ್ಬಂಧಿಸಿದೆ. ಭದ್ರತೆಯ ದೃಷ್ಠಿಯಿಂದ ಇಂದಿನಿಂದ ಬುಧವಾರದವರೆಗೂ ದರ್ಶನಕ್ಕೆ ನಿರ್ಬಂಧ ವಿಧಿಸಿದೆ. ಇನ್ನು ಇಡೀ ಅಯೋಧ್ಯೆಯನ್ನು ಮಧುವಣಗಿತ್ತಿಯಂತೆ ಸಿದ್ಧಗೊಳಿಸಿದ್ದು, ಎಲ್ಲೆಡೆ ಭದ್ರತೆ ಹೆಚ್ಚುಗೊಳಿಸಿದೆ.