ಮನೆ ಸುದ್ದಿ ಜಾಲ ಮೈಶುಗರ್‌ ಶಾಲಾ ಶಿಕ್ಷಕರಿಗೆ ನೆರವಾದ ಕೇಂದ್ರ ಸಚಿವ ಹೆಚ್‌ಡಿಕೆ

ಮೈಶುಗರ್‌ ಶಾಲಾ ಶಿಕ್ಷಕರಿಗೆ ನೆರವಾದ ಕೇಂದ್ರ ಸಚಿವ ಹೆಚ್‌ಡಿಕೆ

0

ಮಂಡ್ಯ : ಸುಮಾರು 15 ತಿಂಗಳಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್‌ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ತಮ್ಮ ಸಂಸದರ ವೇತನವನ್ನೇ ನೀಡಿದ್ದಾರೆ.

ಈ ಮೊದಲು ನೀಡಿದ್ದ ಭರವಸೆಯಂತೆ ಶನಿವಾರ ಬೆಳಗ್ಗೆ ಶಾಲೆಗೆ ಭೇಟಿ ನೀಡಿದ ಸಚಿವರು, ಇಂದು 19,94,200 ಮೊತ್ತದ ಚೆಕ್‌ ಅನ್ನು ಶಾಲೆಯ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಶಿಕ್ಷಕರು ಸಚಿವರಿಗೆ ಧನ್ಯವಾದ ಹೇಳಿದರು. ಇದಕ್ಕೆ ಸ್ಪಂದಿಸಿದ ಸಚಿವರು, ವೇತನವಿಲ್ಲದೆ ಕಷ್ಟ ಕೆಲಸ ಮಾಡುವುದು. ನೀವು ನೋವು ನನಗೆ ಅರ್ಥವಾಗಿದೆ. ಹೀಗಾಗಿ ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದು ಮಾತು ಕೊಟ್ಟಿದ್ದೆ. ನಿಮಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ಎಂದು ತಿಳಿಸಿದರು.

ಇದು ಐತಿಹಾಸಿಕ ಶಾಲೆ, ಮಂಡ್ಯದ ಇತಿಹಾಸದಲ್ಲಿ ಈ ಶಾಲೆಗೂ ಒಂದು ಸ್ಥಾನವಿದೆ. ಹೀಗಾಗಿ ಶಾಲೆ ಸಂಕಷ್ಟಕ್ಕೆ ಸಿಲುವುದು ನನಗೆ ಇಷ್ಟವಿಲ್ಲ. ಈ ಶಾಲೆಯನ್ನು ಉಳಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡುತ್ತೇನೆ. ಪಿಯುಸಿವರೆಗೆ ಈ ಶಾಲೆಯಲ್ಲಿ ಶಿಕ್ಷಣ ದೊರೆಯಲಿ. ನಾನು ಕೂಡ ಶಾಲೆಯ ಉಳಿವಿಗೆ ಕೈ ಜೋಡಿಸುತ್ತೇನೆ. ಆದಿಚುಂಚನಗಿರಿ ಶ್ರೀಗಳೊಂದಿಗೂ ಈ ಬಗ್ಗೆ ಮಾತಾಡಿದ್ದೇನೆ.

ಒಂದೇ ರಾತ್ರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ನಾನು ಹೇಳಲ್ಲ. ಹಂತ ಹಂತವಾಗಿ ಶಾಲೆಯ ಅಭಿವೃದ್ಧಿ ಮಾಡೋಣ. ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಿ ಎಂದು ಕೇಳುತ್ತೇನೆ. ಮಂಡ್ಯದಲ್ಲಿ ಮೈಶುಗರ್ ಶಾಲೆಯೇ ನಂ.1 ಶಾಲೆ ಆಗಿರಬೇಕು ಎಂಬುದು ನನ್ನ ಆಶಯವಾಗಿದೆ ಎಂದು ಹೇಳಿದರು.

ಶಿಕ್ಷಕರ ಕಷ್ಟ ತಿಳಿದು ನಾನು ಬಹಳ ನೊಂದಿದ್ದೆ. 15 ತಿಂಗಳಿಂದ ಸಂಬಳ ಇಲ್ಲದೇ ಕೆಲಸ ಮಾಡುವುದು ಎಂದರೆ ಸುಲಭವಲ್ಲ. ಆ ಸಂಕಷ್ಟದ ಕಾಲದಲ್ಲಿಯೂ ಅವರು ಮಕ್ಕಳಿಗೆ ವಿದ್ಯೆ ಕಲಿಸಿದ್ದಾರೆ. ಹೀಗಾಗಿ ಎಲ್ಲಾ ಶಿಕ್ಷಕರಿಗೆ ಅಭಿನಂದನೆ ಹೇಳುತ್ತೇನೆ. ಶಾಲೆ ಅಭಿವೃದ್ಧಿ ಎಲ್ಲರ ಕರ್ತವ್ಯ. ನನ್ನ ಕೈಲಾದದ್ದನ್ನು ನಾನು ಮಾಡುತ್ತೇನೆ. ಮಕ್ಕಳ ಅನುಕೂಲಕ್ಕೆ ಎರಡು ಶಾಲಾ ಬಸ್ ಬೇಕು ಎಂದು ಮನವಿ ಮಾಡಿದ್ದಾರೆ. ಮೈಶುಗರ್ ಶಾಲೆಯಲ್ಲಿ ಎಲ್‌ಕೆಜಿಯಿಂದ ಪಿಯುವರೆಗೆ ಉಚಿತ ಶಿಕ್ಷಣ ನೀಡಲು ಹೇಳಿದ್ದೇನೆ.

ಈ ಬಗ್ಗೆ ಚುಂಚನಗಿರಿ ಶ್ರೀಗಳ ಬಳಿ ಮನವಿ ಮಾಡಿದ್ದೇನೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಸತ್‌ ಕಲಾಪ ಮುಗಿದ ಬಳಿಕ ಶ್ರೀಗಳ ಮಾರ್ಗದರ್ಶನದಲ್ಲಿ ಚರ್ಚೆ ಮಾಡುತ್ತೇವೆ. ಕಾಂಗ್ರೆಸ್ ನಾಯಕರಿಗೂ ಈ ಬಗ್ಗೆ ಹೇಳುತ್ತೇನೆ. ಶಾಲೆ ವಿಷಯದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಮೈಶುಗರ್ ಶಾಲೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೆಚ್‌ಡಿಕೆ ಪ್ರತಿಪಾದಿಸಿದರು.