ಬೆಳಗಾವಿ/ಬೆಂಗಳೂರು : ಶಸ್ತ್ರಚಿಕಿತ್ಸೆಯ ವೇಳೆಯಲ್ಲಿ ಬಿಮ್ಸ್ ವೈದ್ಯರಿಂದ ಯಾವುದೇ ನಿರ್ಲಕ್ಷ್ಯ ಆಗಿಲ್ಲ ಅಂತ ಸಚಿವ ಶರಣು ಪ್ರಕಾಶ್ ಪಾಟೀಲ್ ತಿಳಿಸಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಪ್ರಶ್ನೆ ಉತ್ತರ ನೀಡಿದ ಅವರು, ಬಿಮ್ಸ್ ಸಂಸ್ಥೆಯಲ್ಲಿ ಶಸ್ತ್ರಚಿಕಿತ್ಸೆಯ ವೇಳೆಯಲ್ಲಿ ವೈದ್ಯರಿಂದ ಯಾವುದೇ ನಿರ್ಲಕ್ಷ್ಯ ಆಗಿರುವುದಿಲ್ಲ.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರ ನಿರ್ಲಕ್ಷ್ಯದಿಂದ ಒಬ್ಬ ರೋಗಿಯ ಹೊಟ್ಟೆಯ ಗಡ್ಡೆ ಬದಲಿಗೆ ಕರುಳನ್ನು ತೆಗೆದು ಹಾಕಲಾಗಿದೆ ಎಂದು ಸುದ್ದಿಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಪ್ರಕರಣದ ಬಗ್ಗೆ ಪರಿಶೀಲಿಸಲಾಗಿ, ರೋಗಿಯು ದೀರ್ಘಕಾಲದ ಮದ್ಯವ್ಯಸನಿ ಹಾಗೂ ತಂಬಾಕು ದಾಸನಾಗಿದ್ದ.
ರೋಗಿಗೆ ಅಪೆಂಡಿಕ್ಸ್ ಕರುಳಿನ ರಂಧ್ರ ಇರುವುದು ತಾಲೂಕು ಆಸ್ಪತ್ರೆಯಿಂದ ನೀಡಿದ ಶಿಫಾರಸು ಪತ್ರದಲ್ಲಿ ನಮೂದಿಸಲಾದ ಕಾರಣ, ಈ ರೋಗಿಗೆ ನಿಯಮಿತ ತನಿಖೆಗಳು, ಯುಎಸ್ಜಿ ಪರೀಕ್ಷೆ, ಸೋನಾಗ್ರಾಫಿ ಪರೀಕ್ಷೆಗಳನ್ನು ನಡೆಸಿದಾಗ ಅಪೆಂಡಿಕ್ಯೂಲರ್ ರಂಧ್ರ ಇರುವುದು ಕಂಡುಬರುತ್ತದೆ ಎಂದರು.
2025ರ ಜೂನ್ 20 ರಂದು ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಲ್ಯಾಪ್ರೋಟಮಿ ನಡೆಸಲಾಗಿದ್ದು, ಅಪೆಂಡಿಕ್ಸ್ ತುದಿಯಲ್ಲಿ ಉಬ್ಬಿಕೊಂಡಿರುವುದು ಕಂಡುಬಂದ ನಿಮಿತ್ತ ಅಪೆಂಡಿಸೆಕ್ಟಮಿ ಮಾಡಲಾಗಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕರುಳನ್ನು ಪರೀಕ್ಷಿಸಿದ್ದು, ಕರುಳು ಸಾಮಾನ್ಯವಾಗಿದ್ದುದರಿಂದ ತೆಗೆದಿರುವುದಿಲ್ಲವೆಂದು ಸಂಸ್ಥೆಯು ವರದಿಯಲ್ಲಿ ಸಲ್ಲಿಸಿರುತ್ತದೆ.
ಕಾಲಕಾಲಕ್ಕೆ ರೋಗಿಗೆ ಚಿಕಿತ್ಸೆ/ಪರೀಕ್ಷೆ ನಡೆಸುತ್ತಿದ್ದಾಗ್ಯೂ ವೈದ್ಯಕೀಯ ಸಲಹೆಯ ವಿರುದ್ಧವಾಗಿ ರೋಗಿಯನ್ನು ರೋಗಿಯ ಸಂಬಂಧಿಕರು ಬಿಮ್ಸ್ ಸಂಸ್ಥೆಯಿಂದ ಬಿಮ್ಸ್ ಸಂಸ್ಥೆಯಿಂದ ಕರೆದೊಯ್ದಿದ್ದರು. ರೋಗಿಗೆ ಬಿಮ್ಸ್ ಸಂಸ್ಥೆಯಲ್ಲಿ ಶಸ್ತ್ರಚಿಕಿತ್ಸೆಯ ವೇಳೆ ವೈದ್ಯರಿಂದ ಯಾವುದೇ ನಿರ್ಲಕ್ಷ್ಯ ಆಗಿಲ್ಲ ಎಂದು ಹೇಳಿದರು.















