ನವದೆಹಲಿ : ಕೇಂದ್ರದ ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ಶಿವರಾಜ್ ಪಾಟೀಲ್ ಅವರು ಶುಕ್ರವಾರ ಬೆಳಗ್ಗೆ ಮಹಾರಾಷ್ಟ್ರದ ಲಾತೂರ್ನಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಪಾಟೀಲ್ ಇಂದು ಬೆಳಗ್ಗೆ 6.30 ರ ಸುಮಾರಿಗೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು, ತೀವ್ರ ಅನಾರೋಗ್ಯ ಉಂಟಾದ ಪರಿಣಾಮ ಪಾಟೀಲ್ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನಕ್ಕೆ ಎಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಪಾಟೀಲ್ 1980 ರಿಂದ 2004 ರವರೆಗೆ ಸತತವಾಗಿ ಏಳು ಬಾರಿ ಲಾತೂರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1980, 1984, 1989, 1991, 1996, 1998 ಮತ್ತು 1999 ರಲ್ಲಿ ಲಾತೂರ್ ಕ್ಷೇತ್ರವನ್ನು ಗೆದ್ದಿದ್ದರು. ನಂತರ 2004 ರಲ್ಲಿ ಬಿಜೆಪಿಯ ರೂಪತೈ ಪಾಟೀಲ್ ನೀಲಂಗೇಕರ್ ವಿರುದ್ಧ ಸೋತಿದ್ದರು. 1972 ಮತ್ತು 1978 ರಲ್ಲಿ ಲಾತೂರ್ ವಿಧಾನಸಭಾ ಕ್ಷೇತ್ರವನ್ನೂ ಗೆದಿದ್ದರು. ತಮ್ಮ ರಾಜಕೀಯ ಜೀವನದಲ್ಲಿ, ಶಿವರಾಜ್ ಪಾಟೀಲ್ ಹಲವಾರು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ್ದರು.
ಮಹಾರಾಷ್ಟ್ರದವರಾದ ಪಾಟೀಲ್, ಮರಾಠವಾಡ ಪ್ರದೇಶದ ಲಾತೂರ್ ನಿಂದ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 2008 ರಲ್ಲಿ, 26/11 ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ, ಪಾಟೀಲ್ ದೇಶದ ಗೃಹ ಸಚಿವರಾಗಿದ್ದರು. ಭದ್ರತಾ ಲೋಪಗಳ ಬಗ್ಗೆ ಟೀಕೆಗಳು ಬಂದ ನಂತರ ಅವರು ರಾಜೀನಾಮೆ ನೀಡಿದ್ದರು.
ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭದ್ರತಾ ಲೋಪಗಳ ಬಗ್ಗೆ ಗಮನಾರ್ಹ ಟೀಕೆಗಳನ್ನು ಎದುರಿಸಿದ ನಂತರ, ಪಾಟೀಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಮುಂಬೈ ದಾಳಿಯನ್ನು ತಡೆಯುವಲ್ಲಿ ತಮ್ಮ ವೈಫಲ್ಯವನ್ನು ಒಪ್ಪಿಕೊಂಡರು ಮತ್ತು ನೈತಿಕ ಜವಾಬ್ದಾರಿಯನ್ನು ಹೊತ್ತು ರಾಜೀನಾಮೆ ನೀಡಿದ್ದರು.
ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್ ಅಕ್ಟೋಬರ್ 12, 1935 ರಂದು ಜನಿಸಿದರು. ಅವರ ತಂದೆಯ ಹೆಸರು ಶಿವರಾಮ್ ಪಾಟೀಲ್ ಮತ್ತು ತಾಯಿಯ ಹೆಸರು ಶಾರದಾ ಪಾಟೀಲ್. ಅವರ ತಂದೆ ರೈತರಾಗಿದ್ದರು ಮತ್ತು ಅವರು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಇದರ ಹೊರತಾಗಿಯೂ, ಅವರು ತಮ್ಮ ರಾಜಕೀಯ ಗುರುತನ್ನು ಸ್ಥಾಪಿಸಿದರು.
ಶಿವರಾಜ್ ಪಾಟೀಲ್ ಅವರನ್ನು ಭಾರತೀಯ ರಾಜಕೀಯದಲ್ಲಿ ಪ್ರಮುಖ ಮತ್ತು ಅನುಭವಿ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವರು ಲಾತೂರ್ ಜಿಲ್ಲೆಯ ಚಾಕೂರ್ನಲ್ಲಿ ಜನಿಸಿದರು. ಲಾತೂರ್ನಲ್ಲಿ ಆರಂಭಿಕ ಶಿಕ್ಷಣ ಪಡೆದ ನಂತರ, ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಪದವಿ ಪಡೆದರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ ನಂತರ, ಅವರು ರಾಜಕೀಯ ಪ್ರವೇಶಿಸಿದರು.














