ಮನೆ ರಾಜ್ಯ ಸುತ್ತೂರು ಜಾತ್ರೆಯಲ್ಲಿ ಸಾಮೂಹಿಕ ವಿವಾಹ – ಕೈಹಿಡಿದ 135 ಜೋಡಿ

ಸುತ್ತೂರು ಜಾತ್ರೆಯಲ್ಲಿ ಸಾಮೂಹಿಕ ವಿವಾಹ – ಕೈಹಿಡಿದ 135 ಜೋಡಿ

0

ಮೈಸೂರು : ಮೈಸೂರು ಜಿಲ್ಲೆಯ ಸುತ್ತೂರು ತಾಲ್ಲೂಕಿನಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ 11 ಅಂತರ್ಜಾತಿ, ಮೂರು ಮರು ಮದುವೆ ಸೇರಿ 135 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕನ್ನಡ, ಮಲಯಾಳಂ, ತಮಿಳು ಸೇರಿದಂತೆ ಬಹುಭಾಷಿಕ ದಂಪತಿಗಳೂ ಇದ್ದದ್ದು ಜಾತ್ರೆಯ ವಿವಾಹ ಮಹೋತ್ಸವದ ವೈವಿಧ್ಯವನ್ನೂ ಸಾರಿತು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ‌ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ತಿರುವನಂತಪುರಂನ ಬಿಷಪ್ ಗೇಬ್ರಿಯಲ್ ಮಾರ್ ಗ್ರೆಗೋರಿಯಸ್, ಮೈಸೂರು ಧರ್ಮಪ್ರಾಂತ್ಯದ ಬಿಷಪ್ ಫ್ರಾನ್ಸಿಸ್ ಸೆರಾವ್ ಸೇರಿದಂತೆ ಹರಗುರು ಚರಮೂರ್ತಿಗಳು, ಪೋಷಕರು, ಬಂಧುಗಳು, ಮಿತ್ರರು ಹಾಗೂ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಸಮ್ಮುಖದಲ್ಲಿ ಸತಿ–ಪತಿಗಳಾದರು.

4 ವೀರಶೈವ ಲಿಂಗಾಯತ, 84 ಪರಿಶಿಷ್ಟ ಜಾತಿ, 15 ಪರಿಶಿಷ್ಟ ಪಂಗಡ, 21 ಹಿಂದುಳಿದ ವರ್ಗ, 11 ಅಂತರ್ಜಾತಿ, 3 ಅಂಗವಿಕಲ‌, 5 ತಮಿಳುನಾಡಿನ ಜೋಡಿಗಳು ಮಧ್ಯಾಹ್ನ 12.10ಕ್ಕೆ ವಿವಾಹವಾದರು.‌ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ನಂತರ ಮೊಳಗಿದ ಡಾ.ರಾಜ್ ಕುಮಾರ್ ಅವರ ‘ಹೊಸಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ’ ಚಲನಚಿತ್ರ ಗೀತೆಯೇ ನವ ದಂಪತಿಗಳಿಗೆ ಮಂಗಳವನ್ನು ಕೋರಿತು. ಸಾರಿಗೆ ಮತ್ತು‌ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ,‌ ಶಾಸಕ ಆರ್.ವಿ.ದೇಶಪಾಂಡೆ ಪಾಲ್ಗೊಂಡಿದ್ದರು.