ಹೈದರಾಬಾದ್ : ತೆಲಂಗಾಣದ ಖಮ್ಮಂ ಜಿಲ್ಲೆಯ ಪುರಸಭೆ ಚುನಾವಣೆ ವೇಳೆ ವಿಚಿತ್ರ ಘಟನೆಯೊಂದು ನಡೆದಿದೆ. ಅಶ್ವರಾವ್ಪೇಟೆ ಪುರಸಭೆಯ ವಾರ್ಡ್ ಸಂಖ್ಯೆ 10ರ ಕಾಂಗ್ರೆಸ್ ಅಭ್ಯರ್ಥಿ ಸೋಲುತ್ತೇನೆ ಅನ್ನೋ ಭಯದಿಂದ ಮತದಾರರಿಗೆ ಕೊಟ್ಟಿದ್ದ ಕುಕ್ಕರ್ ಹಾಗೂ ನಗದು ಹಣವನ್ನ ವಾಪಸ್ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಎಂ. ಹರಿಬಾಬು ವಿರುದ್ಧ ಮತದಾರರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ಗಳನ್ನ ಬೀದಿಗೆ ಎಸೆದು ಬಾಯಿಗೆ ಬಂದಂತೆ ಬೈಯ್ದಿದ್ದಾರೆ. ಈ ಕುರಿತ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಅಶ್ವರಾವ್ಪೇಟೆ ಪುರಸಭೆಯ ವಾರ್ಡ್ ಸಂಖ್ಯೆ-10 ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ. ಹರಿಬಾಬು, ಪ್ರಚಾರ ಸಮಯದಲ್ಲಿ ಹಣ ಹಾಗೂ ಪ್ರೆಶರ್ ಕುಕ್ಕರ್ಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳು ಹಾಗೂ ನಗದು ಹಣವನ್ನೂ ವಿತರಿಸಿದ್ದರು. ಆದ್ರೆ ಚುನಾವಣೆಯಲ್ಲಿ ಸೋಲಿನ ಮುನ್ಸೂಚನೆ ಬರುತ್ತಿದ್ದಂತೆ ಕೊಟ್ಟಿದ್ದ ಕುಕ್ಕರ್ ಹಾಗೂ ವಸ್ತುಗಳನ್ನೆಲ್ಲ ವಾಪಸ್ ಕೇಳಿದ್ದಾರೆ.
ಇದರಿಂದ ಮತದಾರರು ಆಕ್ರೋಶಗೊಂಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ನಾವು ಹಣ, ಕುಕ್ಕರ್ ಯಾವುದನ್ನೂ ಕೇಳಿರಲಿಲ್ಲ. ಈಗ ಬಂದು ಬೆದರಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿದ್ದು, ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ. ಆದ್ರೆ ಅಭ್ಯರ್ಥಿ ವಿರುದ್ಧ ದೂರು ದಾಖಲಾಗಿದೆಯೇ ಇಲ್ಲವೇ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ ಎಂದು ವರದಿಯಾಗಿದೆ.














