ಮನೆ ಸುದ್ದಿ ಜಾಲ ಮೈಸೂರು ರಸ್ತೆ – ಎರಡು ಮೇಲ್ಸೇತುವೆ; ಡಿಸಿಎಂ ಡಿಕೆಶಿ

ಮೈಸೂರು ರಸ್ತೆ – ಎರಡು ಮೇಲ್ಸೇತುವೆ; ಡಿಸಿಎಂ ಡಿಕೆಶಿ

0

ಬೆಂಗಳೂರು : ಚಾಮರಾಜಪೇಟೆಯಿಂದ ಕೆಂಗೇರಿವರೆಗೆ ವಾಹನಗಳ ದಟ್ಟಣೆ ತಡೆಯಲು ಸುರಂಗ ರಸ್ತೆ ನಿರ್ಮಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಬದಲಿಗೆ ಎರಡು ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಕೆ.ಶಿವಕುಮಾರ್‌ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಚಾಮರಾಜಪೇಟೆಯಿಂದ ಕೆಂಗೇರಿವರೆಗೆ ವಾಹನಗಳ ದಟ್ಟಣೆ ತಡೆಯಲು ಈಗಾಗಲೇ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗಿದೆ.

ಚಾಮರಾಜಪೇಟೆಯ ಸಿರಸಿ ವೃತ್ತದಲ್ಲಿ ಕೊನೆಗೊಳ್ಳುವ ಮೇಲ್ಸೇತುವೆಯನ್ನು ಬಿಎಚ್‌ಇಎಲ್‌ವರೆಗೂ ವಿಸ್ತರಿಸಲು ₹810 ಕೋಟಿ ವೆಚ್ಚದಲ್ಲಿ ಅಂದಾಜುಪಟ್ಟಿ ಸಿದ್ಧಪಡಿಸಲಾಗಿದೆ. ಆಡಳಿತಾತ್ಮಕ ಅನುಮೋದನೆಯ ನಂತರ ಕಾಮಗಾರಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ನಾಯಂಡಹಳ್ಳಿ ಮೇಲ್ಸೇತುವೆ ನಂತರ ರಾಜರಾಜೇಶ್ವರಿ ನಗರದ ಮುಖ್ಯರಸ್ತೆಗೆ ಸೇತುವೆ ನಿರ್ಮಿಸಲು ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿಂದ ಕೆಂಗೇರಿವರೆಗೆ ₹75 ಕೋಟಿ ವೆಚ್ಚದಲ್ಲಿ ಡಾಂಬರು ರಸ್ತೆ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.