ನವದೆಹಲಿ: ಸಂಘರ್ಷದಿಂದಾಗಿ ವಾಯುಪ್ರದೇಶ ನಿರ್ಬಂಧ ಮತ್ತು ಜೆಟ್ ಇಂಧನ ಬೆಲೆ ಹೆಚ್ಚಳವು ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಗೆ ಭಾರಿ ಪೆಟ್ಟು ನೀಡಿವೆ. ಇದೇ ಕಾರಣಕ್ಕಾಗಿ, ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ಇಂದಿನಿಂದ ತನ್ನ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಕಡಿತಗೊಳಿಸಿದೆ ಎನ್ನಲಾಗುತ್ತಿದೆ.
ಈ ಕುರಿತು ದೆಹಲಿ-ಚಿಕಾಗೋ ಸೇರಿದಂತೆ ಆರು ಮಾರ್ಗಗಳಲ್ಲಿ ತನ್ನ ಅಂತಾರಾಷ್ಟ್ರೀಯ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ವಿಮಾನಯಾನ ಸಂಸ್ಥೆಯು ಬುಧವಾರ ಘೋಷಿಸಿದೆ. ಈಗಾಗಲೇ ಕೆಲವು ಮಾರ್ಗಗಳಲ್ಲಿ ವಿಮಾನಗಳನ್ನು ಕಡಿತಗೊಳಿಸಿರುವುದು ನಷ್ಟವುಂಟಾಗುತ್ತಿದೆ ಎಂದು ಸಂಸ್ಥೆಯು ತಿಳಿಸಿದೆ. ಕೆಲವು ಪ್ರದೇಶಗಳಲ್ಲಿ ನಿರಂತರವಾಗಿ ವಾಯುಪ್ರದೇಶ ನಿರ್ಬಂಧಿಸಲಾಗಿದೆ. ಜೆಟ್ ಇಂಧನ ಬೆಲೆ ಏರಿಕೆಯಿಂದ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳಿಗೆ ಭಾರಿ ವ್ಯಯವಾಗುತ್ತಿದೆ. ಹೀಗಾಗಿ, ಕೆಲ ಮಾರ್ಗಗಳಿಗೆ ಸೇವೆಗಳನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲಾಗಿದೆ ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಕುರಿತ್ತಾಗಿ ನಷ್ಟದಲ್ಲಿರುವ ವಿಮಾನಯಾನ ಸಂಸ್ಥೆಯು ಆಗಸ್ಟ್ವರೆಗೆ ದೆಹಲಿ-ಚಿಕಾಗೋ, ಮುಂಬೈ-ನ್ಯೂಯಾರ್ಕ್, ದೆಹಲಿ-ಶಾಂಘೈ, ಚೆನ್ನೈ-ಸಿಂಗಾಪುರ, ಮುಂಬೈ-ಢಾಕಾ ಮತ್ತು ದೆಹಲಿ-ಮಾಲೆ ಮಾರ್ಗಗಳಲ್ಲಿ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತಿದೆ ಎಂದು ಘೋಷಿಸಿದೆ. ಕೆಲ ಮಾರ್ಗಗಳ ಕಡಿತದ ನಂತರವೂ, ವಿಮಾನಯಾನ ಸಂಸ್ಥೆಯು ಪ್ರತಿ ತಿಂಗಳು 1,200ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸುವುದನ್ನು ಮುಂದುವರಿಸಲಿದೆ.
ಇವುಗಳಲ್ಲಿ ಉತ್ತರ ಅಮೆರಿಕಾಕ್ಕೆ ವಾರಕ್ಕೆ 33 ವಿಮಾನಗಳು, ಯುರೋಪ್ಗೆ ವಾರಕ್ಕೆ 47 ವಿಮಾನಗಳು, ಯುಕೆಗೆ ವಾರಕ್ಕೆ 57 ವಿಮಾನಗಳು, ಆಸ್ಟ್ರೇಲಿಯಾಕ್ಕೆ ವಾರಕ್ಕೆ 8 ವಿಮಾನಗಳು, ಪೂರ್ವ, ಆಗ್ನೇಯ ಏಷ್ಯಾ ಮತ್ತು ಸಾರ್ಕ್ ಪ್ರದೇಶಗಳಿಗೆ ವಾರಕ್ಕೆ 158 ವಿಮಾನಗಳು ಮತ್ತು ಮಾರಿಷಸ್ ಗೆ ವಾರಕ್ಕೆ ಏಳು ವಿಮಾನಗಳು ಹಾರಾಟ ನಡೆಸಲಿವೆ ಎಂದು ಸಂಸ್ಥೆಯು ಮಾಹಿತಿ ನೀಡಿದೆ ಎನ್ನಲಾಗಿದೆ.

















