ರಾಯಚೂರು : ನಕಲಿ ವೈದ್ಯ ನೀಡಿದ ಇಂಜೆಕ್ಷನ್ನಿಂದ ಆರೋಗ್ಯದಲ್ಲಿ ಏರುಪೇರಾಗಿ 9ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಮೀನಗಡ ಗ್ರಾಮದಲ್ಲಿ ನಡೆದಿದೆ.
ಇಂಜೆಕ್ಷನ್ ರಿಯಾಕ್ಷನ್ನಿಂದ 14 ವರ್ಷದ ವಿದ್ಯಾರ್ಥಿನಿ ಬಿಂದು ಮೃತಪಟ್ಟಿದ್ದಾಳೆ. ಅಮೀನಗಡ ಗ್ರಾಮದ ಬಿಂದು ಜ್ವರ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದಳು. ನಕಲಿ ವೈದ್ಯನ ಬಳಿ ಇಂಜೆಕ್ಷನ್ ಪಡೆದ ಬಳಿಕ ಔಷಧಿ ರಿಯಾಕ್ಷನ್ ಆಗಿದ್ದು, ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾಳೆ.
ವಿದ್ಯಾರ್ಥಿನಿ ಸಾವನ್ನಪ್ಪಿದ ಸುದ್ದಿ ಕೇಳಿ ನಕಲಿ ವೈದ್ಯ ಪರಾರಿಯಾಗಿದ್ದಾನೆ. ಮರಣೋತ್ತರ ಪರೀಕ್ಷೆಗಾಗಿ ವಿದ್ಯಾರ್ಥಿನಿ ಮೃತದೇಹವನ್ನ ಕವಿತಾಳ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.















