ಮನೆ ಸುದ್ದಿ ಜಾಲ ತಂದೆ ಕೆಸಿಆರ್‌ಗೆ ಸೆಡ್ಡು – ಹೊಸ TRS ಪಕ್ಷ ಸ್ಥಾಪಿಸಿದ ಕವಿತಾ

ತಂದೆ ಕೆಸಿಆರ್‌ಗೆ ಸೆಡ್ಡು – ಹೊಸ TRS ಪಕ್ಷ ಸ್ಥಾಪಿಸಿದ ಕವಿತಾ

0

ಹೈದರಾಬಾದ್‌ : ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಮತ್ತು ಮಾಜಿ ಸಂಸದೆ ಕೆ. ಕವಿತಾ ಅವರು ಇಂದು ಹೈದರಾಬಾದ್‌ನಲ್ಲಿ ತಮ್ಮ ನೂತನ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಕವಿತಾ ಅವರು ತಮ್ಮ ಪಕ್ಷಕ್ಕೆ ತೆಲಂಗಾಣ ರಾಷ್ಟ್ರ ಸೇನಾ ಎಂದು ಹೆಸರಿಸಿದ್ದಾರೆ. ಇದು ಈ ಹಿಂದೆ ಅವರ ತಂದೆ ಕೆಸಿಆರ್ ಅವರು ಬಳಸುತ್ತಿದ್ದ ‘ತೆಲಂಗಾಣ ರಾಷ್ಟ್ರ ಸಮಿತಿ’ ಹೆಸರನ್ನು ನೆನಪಿಸುವಂತಿದ್ದು, ತೆಲಂಗಾಣದ ಮೂಲ ಅಸ್ಮಿತೆಯನ್ನು ಮರಳಿ ಪಡೆಯುವ ಸಂಕೇತವಾಗಿ ಬಳಸಲಾಗಿದೆ.

ಕವಿತಾ ಅವರು ಸೆಪ್ಟೆಂಬರ್ 2025 ರಲ್ಲಿ ಭಾರತ್ ರಾಷ್ಟ್ರ ಸಮಿತಿಯಿಂದ ಹೊರಬಂದಿದ್ದರು. ಆಂತರಿಕ ಭಿನ್ನಮತ ಮತ್ತು ಅವರ ಸಹೋದರ ಕೆ.ಟಿ. ರಾಮರಾವ್ ಅವರೊಂದಿಗಿನ ವೈಮನಸ್ಸಿನಿಂದಾಗಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ನಂತರ ಅವರು ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಇಂದು ಹೈದರಾಬಾದ್‌ನ ಮುನೀರ್‌ಬಾದ್‌ನಲ್ಲಿ ನಡೆದ ಸಮಾವೇಶದಲ್ಲಿ ಪಕ್ಷದ ಧ್ವಜ ಮತ್ತು ಸಿದ್ಧಾಂತಗಳನ್ನು ಅನಾವರಣಗೊಳಿಸಲಾಗಿದೆ. ಈ ಹೊಸ ಪಕ್ಷವು ನೇರವಾಗಿ ಬಿಆರ್‌ಎಸ್ ಮತ್ತು ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷಗಳಿಗೆ ಸವಾಲು ಒಡ್ಡಲಿದೆ.

ತೆಲಂಗಾಣದ ಮೂಲ ಆಶಯಗಳನ್ನು ಬಿಆರ್‌ಎಸ್ ಮರೆತಿದೆ ಎಂದು ಕವಿತಾ ಅವರು ತಮ್ಮ ತಂದೆಯ ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಈ ಹೋರಾಟವು ಕೇವಲ ರಾಜಕೀಯವಲ್ಲ, ತೆಲಂಗಾಣದ ಸ್ವಾಭಿಮಾನಕ್ಕಾಗಿ ಎಂದು ಅವರು ಬಣ್ಣಿಸಿದ್ದಾರೆ. ಈ ಹೊಸ ಪಕ್ಷವು ಮುಂಬರುವ 2028-29ರ ವಿಧಾನಸಭಾ ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ತಮ್ಮ ಪಕ್ಷವು ತೆಲಂಗಾಣದ ಧ್ವನಿ ಇಲ್ಲದವರಿಗೆ ಧ್ವನಿ ನೀಡುವ ವೇದಿಕೆಯಾಗಲಿದೆ. ಮುಖ್ಯವಾಗಿ ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಹಿತರಕ್ಷಣೆಗಾಗಿ ಶ್ರಮಿಸಲಿದೆ ಎಂದು ಕವಿತಾ ಹೇಳಿದ್ದಾರೆ.