ಮನೆ ಕಾನೂನು ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ಶೇ.50 ರಷ್ಟು ಶಾಸಕರು

ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ಶೇ.50 ರಷ್ಟು ಶಾಸಕರು

0

ಬೆಂಗಳೂರು(Bengaluru): ವಿಧಾನ ಮಂಡಳದ ಉಭಯ ಸದನಗಳ 179 ಜನಪ್ರತಿನಿಧಿಗಳು ಲೋಕಾಯುಕ್ತಕ್ಕೆ ಕಳೆದ ಹಣಕಾಸು ವರ್ಷದಲ್ಲಿ ತಾವು ಹೊಂದಿರುವ ಆಸ್ತಿ ವಿವರ ಘೋಷಣೆ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ.

ಪ್ರತಿವರ್ಷದ ಜೂನ್ ತಿಂಗಳ 30ರೊಳಗೆ ವಿವರ ಸಲ್ಲಿಸುವುದು ಲೋಕಾಯುಕ್ತ ಕಾಯ್ದೆ 1984 ರ ಕಲಂ 22 ರ ಪ್ರಕಾರ ಕಡ್ಡಾಯ. ಹಾಗಿದ್ದರೂ, ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್​ನ​ ಶೇ. 50ಕ್ಕಿಂತಲೂ ಹೆಚ್ಚು ಶಾಸಕರು ನಿಗದಿತ ಗಡುವಿನೊಳಗೆ ಲೋಕಾಯುಕ್ತಕ್ಕೆ ಮಾಹಿತಿ ನೀಡಿಲ್ಲ.

ಇದರಲ್ಲಿ ವಿಧಾನಸಭೆಯ 224 ಶಾಸಕರ ಪೈಕಿ 127 ಶಾಸಕರು ಹಾಗು ವಿಧಾನ ಪರಿಷತ್ತಿನ 75 ಸದಸ್ಯರ ಪೈಕಿ 52 ಸದಸ್ಯರು ಆಸ್ತಿ ವಿವರವಿರುವ ಪ್ರಮಾಣಪತ್ರ ಸಲ್ಲಿಸದವರ ಗುಂಪಿನಲ್ಲಿದ್ದಾರೆ. ಸಕಾಲಕ್ಕೆ ವಿವರ ಸಲ್ಲಿಸದವರಲ್ಲಿ ಹೆಚ್ಚು ಗಣ್ಯ ರಾಜಕಾರಣಿಗಳ ಹೆಸರುಗಳೇ ಇವೆ.

ಆಸ್ತಿ ಮಾಹಿತಿ ನೀಡದವರು:

ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗು ಮಾಜಿ ಸಿಎಂ ಸಿದ್ದರಾಮಯ್ಯಮಾಜಿ ಸಿಎಂ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿಗೃಹ ಸಚಿವ ಆರಗ ಜ್ಞಾನೇಂದ್ರಕೃಷಿ ಸಚಿವ ಬಿ.ಸಿ.ಪಾಟೀಲ್ಅಬಕಾರಿ ಸಚಿವ ಕೆ.ಗೋಪಾಲಯ್ಯತೋಟಗಾರಿಕೆ ಸಚಿವ ಮುನಿರತ್ನಯುವಜನ ಸೇವೆ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡಸಹಕಾರ ಸಚಿವ ಎಸ್.ಟಿ.ಸೋಮಶೇಖರ್ಸಾರಿಗೆ ಸಚಿವ ಶ್ರೀರಾಮುಲುಗಣಿ ಮತ್ತು ಭೂವಿಜ್ನಾನ ಸಚಿವ ಹಾಲಪ್ಪ ಆಚಾರ್ಮೀನುಗಾರಿಕೆ ಸಚಿವ ಎಸ್.ಅಂಗಾರಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್

ಜೂನ್ 30ರ ಗಡುವು ಮುಗಿದ ನಂತರ ಜುಲೈ ಮೊದಲ ವಾರದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಬಿ.ಜಿ.ಪಾಟೀಲ್, ಶರಣಗೌಡ ಪಾಟೀಲ್ ಸೇರಿದಂತೆ 16 ಜನಪ್ರತಿನಿಧಿಗಳು ಆಸ್ತಿ ವಿವರ ಸಲ್ಲಿಸಿದ್ದಾರೆ.

ಸಕಾಲಕ್ಕೆ ಮಾಹಿತಿ ನೀಡದ ಶಾಸಕರಿಗೆ ಲೋಕಾಯುಕ್ತವು ನೋಟಿಸ್ ಜಾರಿ ಮಾಡಿ ಮತ್ತೊಮ್ಮೆ ಕಾಲಾವಕಾಶ ನೀಡಲಿದೆ. ಆನಂತರವೂ ವಿವರ ಸಲ್ಲಿಸದಿದ್ದರೆ ರಾಜ್ಯಪಾಲರಿಗೆ ವರದಿ ನೀಡಿ, ಶಾಸಕರ ಬಗ್ಗೆ ದಿನಪತ್ರಿಕೆಗಳಲ್ಲಿ ಹೆಸರು ಪ್ರಕಟಿಸುತ್ತದೆ. ಅಷ್ಟೇ ಅಲ್ಲ, ಸಂಬಂಧಪಟ್ಟ ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ವಿಚಾರಣೆ ನಡೆಸಲೂ ಲೋಕಾಯುಕ್ತ ಕಾಯ್ದೆಯಲ್ಲಿ ಅವಕಾಶವಿದೆ.