ಕೋಲ್ಕತ್ತಾ : ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನಪ್ರಿಯ ಬಂಗಾಳಿ ತಿನಿಸು ನೀಡಿ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳದ ಜಲ್ಮುರಿ ಮಾರಾಟಗಾರನಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬೆದರಿಕೆ ಕರೆಗಳು ಬರುತ್ತಿವೆ. ಜಲ್ಮುರಿ ಮಾರಾಟಗಾರ ಬಿಕ್ರಮ್ ಸೌಗೆ ಕಳೆದ ಕೆಲವು ದಿನಗಳಿಂದ ಕೊಲೆ ಬೆದರಿಕೆಗಳು ಬಂದಿವೆ. ಪದೇ ಪದೇ ಫೋನ್ ಮತ್ತು ವೀಡಿಯೊ ಕರೆಗಳ ಮೂಲಕ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಏಪ್ರಿಲ್ 19 ರಂದು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ಮೋದಿ ಜಾರ್ಗ್ರಾಮ್ನಲ್ಲಿರುವ ತಮ್ಮ ರಸ್ತೆ ಬದಿಯ ಜಲ್ಮುರಿ ಅಂಗಡಿಯಲ್ಲಿ ಸ್ಥಳೀಯ ತಿನಿಸನ್ನು ಸವಿದಿದ್ದರು. ಮೋದಿಗೆ ಜಲ್ಮುರಿ ನೀಡಿದ್ದ ವ್ಯಾಪಾರಿ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾದರು. ಬೆದರಿಕೆ ಕರೆಗಳು ನನ್ನನ್ನು ಮತ್ತು ಕುಟುಂಬದವರನ್ನು ತೀವ್ರ ಚಿಂತೆಗೀಡು ಮಾಡಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಬಿಕ್ರಮ್ ಸೌ ತಿಳಿಸಿದ್ದಾರೆ.
ಕೆಲವರು ಕರೆ ಮಾಡಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇನ್ನೂ ಕೆಲವರು ನಿಂದನೀಯ ಮತ್ತು ಅಸಭ್ಯ ಪದಗಳನ್ನು ಬಳಸಿ ಬೆದರಿಸುತ್ತಿದ್ದಾರೆ ಎಂದು ದೂರಿದ್ದಾರೆ. ಆರೋಪಿಗಳು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಧಾನಿ ಮೋದಿಯವರ ಭೇಟಿಯ ಬಳಿಕ ಜಲ್ಮುರಿ ವ್ಯಾಪಾರಿ ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ಮಾರಾಟಗಾರ ದೇಶಾದ್ಯಂತ ಗಮನ ಸೆಳೆದಿದ್ದಾರೆ. ಅಂಗಡಿಗೆ ಗ್ರಾಹಕರು ಲಗ್ಗೆ ಇಡುತ್ತಿದ್ದಾರೆ.
















