ಬೆಂಗಳೂರು(Bengaluru): ಉಗ್ರ ಅಖ್ತರ್ ಹುಸೇನ್ ಲಷ್ಕರ್ ಎಂಬಾತನನ್ನು ಸಿಸಿಬಿ ಪೊಲೀಸರು ಭಾನುವಾರ ರಾತ್ರಿ ವಶಕ್ಕೆ ಪಡೆದಿರುವ ಘಟನೆ ತಿಲಕ್ ನಗರದಲ್ಲಿ ನಡೆದಿದೆ.
ಅಸ್ಸಾಂ ಮೂಲದ ಅಖ್ತರ್, ತಿಲಕ್ ನಗರದ ಬಹುಮಹಡಿ ಕಟ್ಟಡದ ಮೂರನೇ ಮಹಡಿಯಲ್ಲಿದ್ದ ಮನೆಯಲ್ಲಿ ನೆಲೆಸಿದ್ದ. ಆತನ ಜೊತೆ ಆಹಾರ ಡೆಲಿವರಿ ಬಾಯ್ಗಳು ವಾಸವಿದ್ದರು. ಶಂಕಿತನ ಬಗ್ಗೆ ಕೇಂದ್ರ ಗುಪ್ತದಳದಿಂದ ಮಾಹಿತಿ ತಿಳಿದುಬಂದಿದ್ದು, ಭಾನುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮನೆಯ ಮೇಲೆ ದಾಳಿ ಮಾಡಿ ಶಂಕಿತ ಉಗ್ರನನ್ನು ವಶಕ್ಕೆ ಪಡೆದಿದ್ದಾರೆ.
ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿದ್ದ ಅಖ್ತರ್, ಉತ್ತರ ಭಾರತದಿಂದ ಪರಾರಿಯಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಈತನನ್ನು ವಿಚಾರಣೆ ನಡೆಸಿದ ಬಳಿಕವೇ ಮತ್ತಷ್ಟು ಮಾಹಿತಿ ಸಿಗಲಿದೆ ಎಂದು ಸಿಸಿಬಿ ಮೂಲಗಳು ಹೇಳಿವೆ.
ಕಳೆದ ತಿಂಗಳಷ್ಟೇ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಆಗಿದ್ದ ತಾಲೀಬ್ ಹುಸೇನ್ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಆತ ಕಳೆದ ಕೆಲ ತಿಂಗಳಿನಿಂದ ನಗರದ ಶ್ರೀರಾಮಪುರದಲ್ಲಿ ನೆಲೆಸಿದ್ದ. ಇದೀಗ ಮತ್ತೊಬ್ಬ ಶಂಕಿತ ಉಗ್ರನನ್ನು ವಶಕ್ಕೆ ಪಡೆಯಲಾಗಿದೆ.