ಮನೆ ಅಪರಾಧ ಚಿರತೆ ದಾಳಿ:  ವ್ಯಕ್ತಿಗೆ ತೀವ್ರ ಗಾಯ

ಚಿರತೆ ದಾಳಿ:  ವ್ಯಕ್ತಿಗೆ ತೀವ್ರ ಗಾಯ

0

ಬೆಳಗಾವಿ(Belagavi): ನಗರದ ಜನವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಕಟ್ಟಡ ಕಾರ್ಮಿಕನ  ಮೇಲೆ ದಾಳಿ ನಡೆಸಿರುವ ಘಟನೆ ಶುಕ್ರವಾರ ಜಾಧವ ನಗರದಲ್ಲಿ ನಡೆದಿದೆ.

ಜಾಧವ ನಗರದಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಖನಗಾವಿ ಗ್ರಾಮದ ನಿವಾಸಿ ಸಿದರಾಯಿ ಲಕ್ಷ್ಮಣ ಮಿರಜಕರ್ (38) ಅವರು ಕೆಲಸದಲ್ಲಿ ನಿರತರಾದ ವೇಳೆ ಅವರ ಮೇಲೆ ಎಗರಿದ ಚಿರತೆ ಭುಜಕ್ಕೆ ಪರಚಿದೆ.

ಅಲ್ಲಿ ಜನರ ಚೀರಾಟ ಕೇಳಿದ ನಂತರ ಓಡಿ ಹೋಗಿ ಪೊದೆಯಲ್ಲಿ ಅವಿತುಕೊಂಡಿದೆ. ಇದೇ ಜಾಗದಲ್ಲಿರುವ ಯಶೋಧನ್ ಜಾಧವ ಎನ್ನುವವರ ಮನೆ ಪಕ್ಕದಲ್ಲೇ ಚಿರತೆ ಓಡಾಡಿದ್ದು, ಹೆಜ್ಜೆ ಗುರುತುಗಳೂ ಪತ್ತೆಯಾಗಿವೆ.

ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಅವಿತಿರುವ ಜಾಗದ ಶೋಧ ನಡೆಸಿದರು.

ಸವದತ್ತಿ, ಮುನವಳ್ಳಿ, ಚಿಕ್ಕೋಡಿ ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿಯೂ ಚಿರತೆ ಓಡಾಡಿದ ಗುರುತುಗಳು ಪತ್ತೆಯಾಗಿದ್ದವು.