ಮನೆ ಅಪರಾಧ ಹಾಡಹಗಲೇ ಮನೆಗೆ ನುಗ್ಗಿ ರಿಯಲ್ ಎಸ್ಟೇಟ್ ಏಜೆಂಟ್ ಹತ್ಯೆ

ಹಾಡಹಗಲೇ ಮನೆಗೆ ನುಗ್ಗಿ ರಿಯಲ್ ಎಸ್ಟೇಟ್ ಏಜೆಂಟ್ ಹತ್ಯೆ

0

ಮೈಸೂರು(Mysuru): ಮನೆಗೆ ನುಗ್ಗಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಬೃಂದಾವನ ಬಡಾವಣೆಯಲ್ಲಿ ಸೋಮವಾರ ಹಾಡಹಗಲೇ ನಡೆದಿದೆ.

ಬೃಂದಾವನ ಬಡಾವಣೆ, 1ನೇ ಹಂತ, 7ನೇ ಕ್ರಾಸ್ ನ ನಿವಾಸಿ, ಸಂಪತ್ ಕುಮಾರ್ (60) ಹತ್ಯೆಯಾದವರು.

ಸೋಮವಾರ ಮಧ್ಯಾಹ್ನ ಸುಮಾರು 3.30ರ ವೇಳೆಯಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿ ರಾಡ್ ನಿಂದ ತಲೆಗೆ ಹೊಡೆದು ಪರಾರಿಯಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದು, ತೀವ್ರ ರಕ್ತಸ್ರಾವದಿಂದ ಸಂಪತ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಿಯಲ್ ಎಸ್ಟೇಟ್ ಹಾಗೂ ಅಗರ ಬತ್ತಿ ವ್ಯಾಪಾರ ಮಾಡಿಕೊಂಡಿದ್ದ ಸಂಪತ್ ಕುಮಾರ್, ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಪತ್ನಿ ಗಾಯತ್ರಿ ಹಾಗೂ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ 16 ವರ್ಷದ ಪುತ್ರನೊಂದಿಗೆ ವಾಸವಿದ್ದರು. ಇಂದು ಎಂದಿನಂತೆ ಗಾಯತ್ರಿ ಅವರು ಶಾಲೆಗೆ ತೆರಳಿದ್ದರು. ಕಾಲೇಜಿಗೆ ತೆರಳಿದ್ದ ಪುತ್ರ, ಮನೆಗೆ ವಾಪಸ್ಸಾದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ, ಡಿಸಿಪಿಗಳಾದ ಪ್ರದೀಪ್ ಗುಂಟಿ, ಎಂ.ಎಸ್.ಗೀತಾ, ನರಸಿಂಹರಾಜ ುಪ ವಿಭಾಗದ ಎಸಿಪಿ ಶಿವಶಂಕರ್, ವಿವಿಪುರಂ ಠಾಣೆಯ ಇನ್ಸ್ ಪೆಕ್ಟರ್ ವೆಂಕಟೇಶ್, ಬೆರಳಚ್ಚು ತಜ್ಞರು ಮತ್ತು ಶ್ವಾನದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.