ಮನೆ ರಾಜ್ಯ ದಸರಾ: ಅಂಬಾರಿ ಆನೆಗೆ ಭಾರ ಹೊರಿಸುವ ತಾಲೀಮು ಆರಂಭ

ದಸರಾ: ಅಂಬಾರಿ ಆನೆಗೆ ಭಾರ ಹೊರಿಸುವ ತಾಲೀಮು ಆರಂಭ

0

ಮೈಸೂರು(Mysuru): ವಿಶ್ವವಿಖ್ಯಾತ ನಾಡಹಬ್ಬ ದಸರೆಯ ಅಂಬಾರಿ ಆನೆ ‘ಅಭಿಮನ್ಯು’ಗೆ ಭಾರ ಹೊರಿಸುವ ತಾಲೀಮನ್ನು ಗುರುವಾರ ಆರಂಭಿಸಲಾಗಿದೆ.

ಅರಮನೆ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಪೂಜೆ ಸಲ್ಲಿಸಲಾಯಿತು. ಡಿಸಿಎಫ್ ಡಾ.ವಿ.ಕರಿಕಾಳನ್ ಅವರು ‘ಅಭಿಮನ್ಯು’ ಜೊತೆ ಕುಮ್ಕಿ ಆನೆಗಳಾದ ‘ಚೈತ್ರಾ’, ‘ಕಾವೇರಿ’ಗೂ ಪೂಜೆ ಸಲ್ಲಿಸಿ, ತಾಲೀಮಿಗೆ ಚಾಲನೆ ನೀಡಿದರು‌.

ಆನೆಗಳ ಮೇಲೆ ಗಾದಿ, ನಮ್ದಾ ಇಟ್ಟು ತಾಲೀಮು ಆರಂಭಿಸಲಾಯಿತು. ಅರಮನೆಯ ಬಲರಾಮ ದ್ವಾರದಿಂದ ಬನ್ನಿಮಂಟಪದವರೆಗೆ 300 ಕೆ.ಜಿ. ತೂಕದ ಮರಳಿನ ಮೂಟೆ ಹೊತ್ತ ‘ಅಭಿಮನ್ಯು’ ಆನೆ ಹೆಜ್ಜೆ ಹಾಕಿದನು.

ಉಳಿದ ಆನೆಗಳಾದ ಧನಂಜಯ, ಗೋಪಾಲಸ್ವಾಮಿ, ಲಕ್ಷ್ಮಿ, ಮಹೇಂದ್ರ, ಭೀಮ, ಅರ್ಜುನ ಕೂಡ ತಾಲೀಮಿನಲ್ಲಿ ಭಾಗಿಯಾದವು.

ಡಿಸಿಎಫ್ ಡಾ.ವಿ.ಕರಿಕಾಳನ್ ಮಾತನಾಡಿ, ಇಂದು ತಾಲೀಮು ನಡೆಸಲಾಗುತ್ತಿದೆ. ಮೊದಲು 300 ಕೆ.ಜಿ ಮರಳಿನ ಮೂಟೆ ಇಟ್ಟು ತಾಲೀಮು ನಡೆಸಲಾಗುತ್ತಿದೆ. ಅರ್ಜುನ ಬಿಟ್ಟು 5 ಗಂಡಾನೆಗಳಿಗೆ ಭಾರ ಹೊರಿಸುವ ತಾಲೀಮನ್ನು ರೊಟೆಷನ್ ಆಗಿ ಐದು ದಿನ ನಡೆಸಲಾಗುತ್ತದೆ. 300ಕೆ.ಜಿ.ಆದ ನಂತರ ಮತ್ತೆ ಹೆಚ್ಚಿಸುತ್ತೇವೆ. 750ಕೆಜಿ ಬರುವ ತನಕ ತಾಲೀಮು ಮಾಡುತ್ತೇವೆ. ಇಲ್ಲಿಂದ ಬನ್ನಿಮಂಟಪ 5ಕಿ.ಮಿ.ಇದೆ. ನಾವು ನಿನ್ನೆ ಮೊನ್ನೆ ಎಲ್ಲ ಬರಿ ವಾಕ್ ಮಾಡಿಸಿದ್ದೇವೆ. ಆ ಟೈಮ್ ನಲ್ಲಿ ನಮಗೆ ಇಲ್ಲಿಂದ ಅಲ್ಲಿಗೆ ತಲುಪಲು ಒಂದುಕಾಲು ಗಂಟೆ ಹಿಡಿದಿದೆ. ಇವತ್ತು ತೂಕ ಹಾಕಿ ಆನೆಗಳು ಸಾಗಲಿವೆ. ಎಷ್ಟು ಗಂಟೆ ಆಗತ್ತೆ ನೋಡಬೇಕು. ಸೆಪ್ಟೆಂಬರ್ ಮೊದಲ ವಾರ ಎರಡನೇ ಹಂತದ ಆನೆ ಕರೆತರಲಾಗುತ್ತದೆ. ಮರಳ ಮೂಟೆ 300 ಕೆ.ಜಿ, ನಮ್ದಾ, ಗಾದಿ, ಹಗ್ಗ ಎಲ್ಲ ಸೇರಿ 500ರಿಂದ550ಕೆಜಿ ತೂಕವಿರಿಸಿ ಆನೆಗಳು ನಡೆಯುತ್ತಿವೆ. ಹಂತ ಹಂತವಾಗಿ ಭಾರ ಹೆಚ್ಚಿಸುವ ನಂತರ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಗುತ್ತದೆ ಎಂದು ತಿಳಿಸಿದರು.

ಮೊದಲು 300ಕೆಜಿ ತೂಕದ ಮರಳು ಮೂಟೆಯನ್ನು ಇಟ್ಟು ತಾಲೀಮು ನಡೆಸಲಾಗುತ್ತಿದೆ. ಹಂತಹಂತವಾಗಿ ತೂಕವನ್ನು ಹೆಚ್ಚಿಸಿ ಜಂಬೂ ಸವಾರಿ ವೇಳೆಗೆ 750ಕೆ.ಜಿ.ತೂಕವನ್ನು ಭಾರ ಹೊರಲು ಗಜಪಡೆಯನ್ನು ಸಜ್ಜುಗೊಳಿಸಲಾಗುತ್ತದೆ. ಅದಕ್ಕಾಗಿ ಈಗಾಗಲೇ ವಿಶೇಷ ಡಯಟ್ ಮೂಲಕ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದ್ದು ಗಜಪಡೆಯ ಭುಜದ ಬಲವನ್ನು ಹೆಚ್ಚಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.