ಮನೆ ಅಪರಾಧ ವಿವಾಹಿತೆಯೊಂದಿಗಿನ ಪ್ರೀತಿ ಆತ್ಮಹತ್ಯೆಯಲ್ಲಿ ಅಂತ್ಯ

ವಿವಾಹಿತೆಯೊಂದಿಗಿನ ಪ್ರೀತಿ ಆತ್ಮಹತ್ಯೆಯಲ್ಲಿ ಅಂತ್ಯ

0

ದಾವಣಗೆರೆ (Davanagere): ವಿವಾಹಿತೆಯೊಂದಿಗಿನ ಪ್ರೀತಿ ಕೊನೆಗೆ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಬೆಂಕಿ ಕೆರೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರಿನ ರಾಜ ಗೋಪಾಲ ನಗರ ನಿವಾಸಿ ನಾಗರತ್ನ (21) ಹಾಗೂ ಪಿ. ಚರಣ್ ಆತ್ಮಹತ್ಯೆ ಮಾಡಿಕೊಂಡವರು. ವಿವಾಹಿತೆಯಾಗಿದ್ದ ನಾಗರತ್ನ ಅವರು ಆಧಾರ್ ಕಾರ್ಡ್ ಮಾಡಿಕೊಡುವ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ಇವರ ಪ್ರಿಯಕರ ಚರಣ್, ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಏಳು ತಿಂಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸುವ ವಿಚಾರವಾಗಿ ಇವರಿಬ್ಬರೂ ಮಾತುಕತೆ ನಡೆಸಿದ್ದರು. ಆಗ ಆದ ಪರಿಚಯ, ಕೆಲವೇ ದಿನಗಳಲ್ಲಿ ಪ್ರೀತಿಯಾಗಿ ಮಾರ್ಪಟ್ಟಿತ್ತು.

ತಾನು ಬೇರೊಬ್ಬ ವ್ಯಕ್ತಿಯ ಪತ್ನಿಯಾಗಿದ್ದರೂ ಕೂಡಾ ಚರಣ್ ಜೊತೆ ಪ್ರೇಮ ಸಂಬಂಧ ಮುಂದುವರೆಸಿದ್ದರು ನಾಗರತ್ನ. ನಾಗರತ್ನ ಅವರ ಪತಿ ರಾಜ ಗೋಪಾಲ ನಗರದ ನಿವಾಸಿ ಪ್ರಸನ್ನ, ಬಸವೇಶ್ವರ ನಗರದ ಟಿವಿಎಸ್ ಶೋರೂಂನಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಈ ನಡುವೆ, ಸುಮಾರು 20 ದಿನಗಳಿಂದ ಕೆಲಸ ಬಿಟ್ಟು ಮನೆಯಲ್ಲಿಯೇ ಇರಲು ಆರಂಭಿಸಿದ್ದ ನಾಗರತ್ನ ಅವರು ಕೆಲಸದ ಮೇಲೆ ಹೊರಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಕಾಲ್ಕಿತ್ತಿದ್ದರು.

ಅಂಗಡಿಗೆ ಹೋಗಿದ್ದ ಪತ್ನಿ ವಾಪಸ್ ಬಂದಿಲ್ಲ ಎಂದು ಕಂಗಾಲಾದ ಪತಿ ಪ್ರಸನ್ನ, ಈ ಸಂಬಂಧ ರಾಜ ಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನ್ನ ಪತ್ನಿ ಚರಣ್ ಎಂಬಾತನ ಜೊತೆ ಆಗಾಗ ಮಾತನಾಡುತ್ತಿದ್ದರು ಎಂಬ ಮಾಹಿತಿಯನ್ನೂ ಪೊಲೀಸರಿಗೆ ನೀಡಿದ್ದರು.

ಆದರೆ ಪ್ರೇಮಿಗಳು ಜಾಲಿ ರೈಡ್‌ನಲ್ಲಿ ಬ್ಯುಸಿಯಾಗಿದ್ದರು. ವಿವಾಹಿತೆ ನಾಗರತ್ನ ಹಾಗೂ ಚರಣ್ ಇಬ್ಬರೂ ಪಲ್ಸರ್ ಬೈಕಿನಲ್ಲಿ ಬೆಂಗಳೂರಿನಿಂದ ಜಾಲಿ ರೈಡ್ ಹೊರಟಿದ್ದರು. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಬೆಂಕಿ ಕೆರೆಯ ಬಳಿ ಬಂದ ಈ ಪ್ರೇಮಿಗಳು ಇಲ್ಲಿಯೇ ಎರಡು ದಿನಗಳಷ್ಟು ಕಾಲ ಟೈಂ ಪಾಸ್ ಮಾಡಿದ್ದರು. ಸ್ಥಳೀಯರಾದ ಶಿವ ಸ್ವಾಮಿ ಎಂಬುವರು ಇವರಿಬ್ಬರನ್ನೂ ಗಮನಿಸಿದ್ದರು. ಈ ವೇಳೆ, ಪ್ರೇಮಿಗಳು ಕೆರೆಯ ಬಳಿ ಕಾಲ ಕಳೆಯುತ್ತಿದ್ದರು. ಆಗ ಇವರಿಗೆ ಎಚ್ಚರಿಕೆ ನೀಡಿದ್ದ ಶಿವ ಸ್ವಾಮಿ, ಕೆರೆ ಆಳವಾಗಿದೆ ಹೋಗಬೇಡಿ ಎಂದು ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಇದಾದ ಕೆಲವೇ ಹೊತ್ತಿನಲ್ಲಿ ಪ್ರೇಮಿಗಳಿಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತ ದೇಹವನ್ನು ಚನ್ನಗಿರಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ತನಿಖೆ ಮುಂದುವರಿದಿದೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. ಈ ಕುರಿತು ಮಾಹಿತಿ ನೀಡಿರುವ ದಾವಣಗೆರೆ ಎಸ್ಪಿ ಸಿ.ಬಿ.ರಿಷ್ಯಂತ್, ಬೆಂಗಳೂರಿನ ರಾಜಗೋಪಾಲ್ ನಗರದಲ್ಲಿ ನಾಗರತ್ನ ಹಾಗೂ ಚರಣ್ ಬಗ್ಗೆ ನಾಪತ್ತೆ ಪ್ರಕರಣ ದಾಖಲಾಗಿದೆ. ಇವರಿಬ್ಬರೂ ಪ್ರೇಮಿಗಳಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.