ಮನೆ ರಾಜ್ಯ ಮಳೆಯಿಂದ ಸಾಕಷ್ಟು ಹಾನಿಯಾದರೂ ಸರ್ಕಾರ ಪರಿಹಾರ ನೀಡಿಲ್ಲ: ಸಿದ್ದರಾಮಯ್ಯ

ಮಳೆಯಿಂದ ಸಾಕಷ್ಟು ಹಾನಿಯಾದರೂ ಸರ್ಕಾರ ಪರಿಹಾರ ನೀಡಿಲ್ಲ: ಸಿದ್ದರಾಮಯ್ಯ

0

ಹಾಸನ(Hassan): ಮಳೆಯಿಂದ ಸಾಕಷ್ಟು ಹಾನಿಯಾದ್ರೂ ರಾಜ್ಯ ಸರ್ಕಾರ ಒಂದು ರೂಪಾಯಿ ಪರಿಹಾರ ನೀಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ನಾನು ಮಳೆಯಿಂದ ಅನಾಹುತ ಆಗಿರುವ ಪ್ರದೇಶಗಳನ್ನು ನೋಡಲು ಹೋಗಿದ್ದೆ. ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿದ್ದೆ. ನಿನ್ನೆ ಕೊಡಗಿನಲ್ಲಿ, ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದೆ. ಆದರೆ, ಇಲ್ಲಿಯವರೆಗೂ ಸರ್ಕಾರ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ಚಿಕ್ಕಮಗಳೂರು, ಕೊಡಗಿಗೂ ಕೊಟ್ಟಿಲ್ಲ. ಮನೆಗಳೆಲ್ಲಾ ಸಂಪೂರ್ಣ ಹಾನಿಯಾಗಿದ್ರೂ, ಮನೆ ಕಟ್ಟಿಕೊಡುವ ಪ್ರಯತ್ನ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ನಾನು ಮೂಡಿಗೆರೆಯಲ್ಲಿ ಕೆಲವು ಮನೆಗಳಿಗೆ ಭೇಟಿ ಕೊಟ್ಟಿದ್ದೆ. 2019 ರಲ್ಲಿ ಮಳೆಯಿಂದ ಪ್ರಾಣ ಕಳೆದುಕೊಂಡಿರುವ ವ್ಯಕ್ತಿಗೆ ಇದುವರೆಗೂ ಪರಿಹಾರ ಕೊಟ್ಟಿಲ್ಲ, ಮನೆ ಕೂಡ ನಿರ್ಮಿಸಿ ಕೊಟ್ಟಿಲ್ಲ ಎಂದು ಕಿಡಿಕಾರಿದರು.

ಕರ್ನಾಟಕದಲ್ಲಿ 18 ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದೆ. ಸುಮಾರು ಐದು ಲಕ್ಷದ ಇಪ್ಪತ್ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇವತ್ತಿನವರೆಗೂ ಸರ್ವೆ ಮಾಡಿಲ್ಲ, ಎಷ್ಟು ಬೆಳೆ ಹಾನಿಯಾಗಿದೆ ಅಂದಾಜು ಮಾಡಿಲ್ಲ. ಹದಿನೆಂಟು ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ನಾವು ಹೋದಾಗ ಆರ್’ಎಸ್’ಎಸ್, ಭಜರಂಗದಳದವರು ಕಪ್ಪು ಬಾವುಟ ತೋರಿಸುತ್ತಿದ್ದಾರೆ. ಯಾಕೆಂದರೆ ಬಿಜೆಪಿಯವರಿಗೆ ಭಯ ಹುಟ್ಟಿದ್ದು, ಹತಾಶರಾಗಿ ಕಪ್ಪು ಬಾವುಟ ಹಿಡಿಯುತ್ತಿದ್ದಾರೆ. ಕಪ್ಪು ಬಾವುಟ ಹಿಡಿಯೋದು ಅದೇನು ಧೀರರ, ವೀರರ ಕೆಲಸವೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪರಿಹಾರ ಕೊಟ್ಟಿದ್ದೀವಿ ಎಂದು ಹೇಳ್ತಾರೆ. ಆದರೆ ಇದು ರೈತರಿಗೆ ತಲುಪಿದೆಯೇ ಎಂಬುದು ಮುಖ್ಯವಾಗುತ್ತದೆ. ಎಲ್ಲಾ ರೈತರು ಸಾಲ ಮಾಡಿಯೇ ಬಿತ್ತನೆ ಮಾಡುತ್ತಾರೆ. ಮಳೆ ಹಾನಿಯಿಂದ ನಷ್ಟವಾಗಿ ಸಾಲ ಮಾಡಿಕೊಂಡು, ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸರ್ಕಾರ ಪರಿಹಾರ ಕೊಟ್ಟಿದ್ದೀವೆ ಅಂತ ಹೇಳ್ತಾರೆ. ಆದರೆ ಗ್ರೌಂಡ್ ರಿಯಾಲಿಟಿ ಬೇರೆಯೇ ಇದೆ. ಇದು ಸರ್ಕಾರದ ಸಂಪೂರ್ಣ ವೈಫಲ್ಯವಾಗಿದೆ ಎಂದು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.