ಮನೆ ಅಪರಾಧ ಜಾಹೀರಾತು ಫಲಕಕ್ಕೆ ಅಳವಡಿಸಿದ್ದ ವಿದ್ಯುತ್‌ ಪ್ರವಹಿಸಿ ಯುವತಿ ಸಾವು

ಜಾಹೀರಾತು ಫಲಕಕ್ಕೆ ಅಳವಡಿಸಿದ್ದ ವಿದ್ಯುತ್‌ ಪ್ರವಹಿಸಿ ಯುವತಿ ಸಾವು

0

ಬೆಂಗಳೂರು(Bengaluru):  ರಸ್ತೆ ವಿಭಜಕಕ್ಕೆ ಅಳವಡಿಸಿದ್ದ ಜಾಹೀರಾತು ಫಲಕ ತಗಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸಿದ್ದಾಪುರ-ವರ್ತೂರು ಮುಖ್ಯರಸ್ತೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

ಸಿದ್ದಾಪುರ- ವರ್ತೂರು ಮುಖ್ಯರಸ್ತೆ ಸಮೀಪದ ಡಿ-ಮಾರ್ಟ್‌ ಬಳಿ ಈ ಅವಘಡ ಸಂಭವಿಸಿದೆ. ಅಖಿಲಾ (23) ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಮಳೆ ನೀರಿನಿಂದಾಗಿ ಅವರ ಸ್ಕೂಟರ್‌ ಆಯಾ ತಪ್ಪಿ ಕೆಳಗೆ ಬಿತ್ತು, ಈ ಸಂದರ್ಭದಲ್ಲಿ  ರಸ್ತೆ ವಿಭಜಕಕ್ಕೆ ಅಳವಡಿಸಿದ್ದ ಜಾಹೀರಾತು ಫಲಕದ ಮೇಲೆ ಅಖಿಲಾ ಬಿದ್ದಿದ್ದಾರೆ. ಜಾಹೀರಾತು ಫಲಕಕ್ಕೆ ಅಳವಡಿಸಿದ್ದ ವಿದ್ಯುತ್‌ ಪ್ರವಹಿಸಿ ಮೃತಪಟ್ಟಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿರುವ ಬೆಸ್ಕಾಂ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇದೊಂದು ಇಲಾಖೇತರ ವಿದ್ಯುತ್‌ ಅವಘಡವಾಗಿದ್ದು, ಬೆಸ್ಕಾಂ ನಿರ್ಲಕ್ಯದಿಂದ ಅವಘಡ ಸಂಭವಿಸಿಲ್ಲ.ಬೆಸ್ಕಾಂನ ಯಾವುದೇ ವಿದ್ಯುತ್‌ ಸಂಪರ್ಕ ಅಥವಾ ತಂತಿ, ಅವಘಡ ನಡೆದ ಸ್ಥಳದಲ್ಲಿ ಹಾದುಹೋಗಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರಿಂದ ಮಾಹಿತಿ ಬಂದ ತಕ್ಷಣ ಆ ಪ್ರದೇಶದ ವಿದ್ಯುತ್‌ ಫೀಡರ್‌ ನ ಸಂಪರ್ಕ ಕಡಿತಗೊಳಿಸಿ,  ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಜಿ.ಎಸ್‌ ಮೀಡಿಯಾ ಕಂಪನಿಗೆ ಸಂಬಂಧಿಸಿದ ಜಾಹೀರಾತು ಫಲಕದಿಂದ ವಿದ್ಯುತ್‌ ಪ್ರವಹಿಸಿ ಮಹಿಳೆ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಮೃತ ದೇಹವನ್ನು ಖಾಸಗಿ ಆಸ್ಪತ್ರೆ ಸಾಗಿಸಲಾಗಿದ್ದು, ಇಲೆಕ್ಟ್ರಿಕಲ್‌ ಇನ್ಸ್ ಪೆಕ್ಟರೇಟ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ವೈಟ್‌ ಫೀಲ್ಡ್‌ ಪೋಲಿಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.