ಮನೆ ಅಪರಾಧ ಲಂಚ ಹಿಂತಿರುಗಿಸುವಾಗ ಕೆಐಎಡಿಬಿ ಅಧಿಕಾರಿಗಳ ಬಂಧನ

ಲಂಚ ಹಿಂತಿರುಗಿಸುವಾಗ ಕೆಐಎಡಿಬಿ ಅಧಿಕಾರಿಗಳ ಬಂಧನ

0

ಬೆಂಗಳೂರು(Bengaluru): ವ್ಯಕ್ತಿಯೊಬ್ಬರ ಜಮೀನು ಭೂಸ್ವಾಧೀನಗೊಂಡಿಲ್ಲ ಎಂದು ನಿರಾಕ್ಷೇಪಣಾ ಪತ್ರ ನೀಡಲು  2.5 ಲಕ್ಷ ರೂ. ಲಂಚ ಪಡೆದು, ಈ ಕುರಿತು ದೂರು ದಾಖಲಾದ ಬಳಿಕ ಲಂಚದ ಹಣವನ್ನು ಮರಳಿಸುತ್ತಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಭೂಮಾಪಕರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ–2 ಹುದ್ದೆಯಲ್ಲಿದ್ದ ಕೆಎಎಸ್‌ ಅಧಿಕಾರಿ ಎ.ಬಿ. ವಿಜಯಕುಮಾರ್‌ ಮತ್ತು ಅವರ ಕಚೇರಿಯ ಭೂಮಾಪಕ ರಘುನಾಥ್‌ ಬಂಧಿತರು.

ಬೆಂಗಳೂರು ಉತ್ತರ ತಾಲ್ಲೂಕಿನ ಲಗ್ಗೆರೆ ಹೋಬಳಿಯಲ್ಲಿರುವ 30 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ನಿರಾಕ್ಷೇಪಣಾ ಪತ್ರ ಕೋರಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ₹ 2.5 ಲಕ್ಷ ಲಂಚ ಪಡೆದುಕೊಂಡು ಆರೋಪಿಗಳು ನಿರಾಕ್ಷೇಪಣಾ ಪತ್ರ ನೀಡಿದ್ದರು.

ಈ ಕುರಿತು ಅರ್ಜಿದಾರರು ಕೆಐಎಡಿಬಿ ಉಪ ಆಯುಕ್ತರಿಗೆ ದೂರು ನೀಡಿದ್ದರು. ಹಿರಿಯ ಅಧಿಕಾರಿಗಳು ತನಿಖೆ ಆರಂಭಿಸುತ್ತಿದ್ದಂತೆ ದೂರುದಾರರನ್ನು ಸಂಪರ್ಕಿಸಿದ್ದ ಆರೋಪಿಗಳು, ದೂರನ್ನು ಹಿಂಪಡೆದರೆ ₹ 2.5 ಲಕ್ಷದೊಂದಿಗೆ ₹ 50,000 ಸೇರಿಸಿ ವಾಪಸ್‌ ನೀಡುವುದಾಗಿ ಆಮಿಷ ಒಡ್ಡಿದ್ದರು. ದೂರುದಾರರಿಗೆ ಹಣ ವಾಪಸ್‌ ನೀಡುತ್ತಿದ್ದಾಗ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.