ಮನೆ ರಾಜಕೀಯ ಕಾಂಗ್ರೆಸ್ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ: ಸಿಎಂ ಬೊಮ್ಮಾಯಿ

ಕಾಂಗ್ರೆಸ್ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ: ಸಿಎಂ ಬೊಮ್ಮಾಯಿ

0

ಚಿತ್ರದುರ್ಗ(Chiradurga): ‘ಪೇಸಿಎಂ’ ಅಭಿಯಾನ ಕಾಂಗ್ರೆಸ್ ನ ಡರ್ಟಿ ಪಾಲಿಟಿಕ್ಸ್. ನೇರವಾಗಿ ಮಾತನಾಡುವ, ಎದುರಿಸುವ, ದಾಖಲೆ ನೀಡುವ ಬದಲು ಅನ್ಯ ಮಾರ್ಗ ತುಳಿದಿದೆ. ಇದು ಕಾಂಗ್ರೆಸ್ ನೈತಿಕತೆಯ ಅಧಃಪತನದ ಸೂಚಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

ಸಿರುಗೆರೆಯ ತರಳಬಾಳು ಮಠದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 30ನೇ ಶ್ರದ್ಧಾಂಜಲಿ ಸಮಾರಂಭಕ್ಕೆ ಶನಿವಾರ ಆಗಮಿಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಪೇ ಸಿಎಂ ಅಭಿಯಾನ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ನಾಯಕರು ಸಂಪೂರ್ಣ ಹತಾಶರಾಗಿದ್ದಾರೆ. ಯಾವುದೇ ವಿಚಾರವನ್ನು ಸರಿಯಾಗಿ ತಿಳಿಯುವ ವ್ಯವಧಾನ ಅವರಲ್ಲಿ ಉಳಿದಿಲ್ಲ. ಪೂರ್ವತಯಾರಿ ಇಲ್ಲದೇ ಸದನಕ್ಕೆ ಬರುತ್ತಿದ್ದಾರೆ. ಜನಪರ ಕಾಳಜಿ ಅವರಲ್ಲಿ ಕಾಣುತ್ತಿಲ್ಲ. ಕೆಟ್ಟ ರಾಜಕೀಯ ಮಾಡಿಕೊಂಡು ಅಧಿಕಾರಕ್ಕೆ ಬರುವ ಭ್ರಮೆಯಲ್ಲಿ ಇದ್ದಾರೆ. ಕರ್ನಾಟಕದಲ್ಲಿ ಇದು ಸಾಧ್ಯವಿಲ್ಲ ಎಂದರು.

ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಂಬಂಧ ದೆಹಲಿಗೆ ಭೇಟಿ ನೀಡಿ ವರಿಷ್ಠರೊಂದಿಗೆ ಚರ್ಚೆ ಮಾಡಲಾಗುವುದು. ಚುನಾವಣಾ ಪೂರ್ವ ಸಮೀಕ್ಷೆ ಒಂದೊಂದು ರೀತಿ ಬರುತ್ತಿವೆ. ಜನರ ನಾಡಿ ಮಿಡಿತ ನಮಗೂ ಗೊತ್ತಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.