ಮನೆ ರಾಜ್ಯ ಚಿಗುರು ಕವಿಗೋಷ್ಠಿಯಲ್ಲಿ ಯುವಕವಿಗಳ ಕಲರವ

ಚಿಗುರು ಕವಿಗೋಷ್ಠಿಯಲ್ಲಿ ಯುವಕವಿಗಳ ಕಲರವ

0

ಮೈಸೂರು(Mysuru): ಇಡೀ ಜಗತ್ತನ್ನೇ ಎದುರಿಸಬಲ್ಲೇ ನನ್ನಪ್ಪ ನನ್ನೊಟ್ಟಿಗಿದ್ದರೆ ಎಂಬ ಸಾಲಿನೊಂದಿಗೆ ಅಪ್ಪನ ಮೇಲಿನ ಪ್ರೀತಿ ಹಾಗೂ ಈ ಜಗತ್ತಿಗೆ ತಾಯಿಯಷ್ಟೇ ತಂದೆಯ ಪಾತ್ರವೂ ಮುಖ್ಯವಾದುದ್ದು ಎಂಬುದನ್ನು ಬಿಂಬಿಸುವ ಯುವಕವಿ ದೀಕ್ಷಾ ಎಂಬುವರ ಕವಿತೆಗೆ ಕೇಳುಗರ ಕಿವಿನೆಟ್ಟಿತು.

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಚಿಗುರು ಕವಿಗೋಷ್ಠಿಯಲ್ಲಿ ಇಂತಹ ಸಾಲುಗಳಿಂದ ಕೂಡಿದ ಕವಿತೆಯು ಯುವ ಕವಿಗಳಿಂದ ಹೊರಹೊಮ್ಮಿತು.

ಅಪ್ಪ ಅಮ್ಮ ದೇವರಲ್ಲ ಮುಕ್ಕೋಟಿ ದೇವರನ್ನೇ ಮೀರಿಸಿದವರು ಎಂದು ಹೇಳುವ ಮೂಲಕ ತಂದೆ ತಾಯಿ ಇಬ್ಬರ ಶ್ರಮವು ಒಂದೇ ಸಮನಾದವು ಎನ್ನುತ್ತಾ ಕವನ ವಾಚಿಸುತ್ತಾ ತಂದೆ ತಾಯಿಗೆ ಗೌರವ ಸೂಚಿಸಿದರೆ, ಮತ್ತೊಬ್ಬ ಕವಿಯೂ ಇಂದಿನ ಯುವಕರ ಟ್ರೆಂಡ್ ಎಂದೇ ಬಿಂಬಿತವಾಗಿರುವ ಗಡ್ಡದ ಮೇಲೆ ಕವನ ವಾಚಿಸುವ ಮೂಲಕ ಗಡ್ಡ ಬಿಟ್ಟಿರುವವರು ಯಾವೆಲ್ಲಾ ರೀತಿಯಾಗಿ ಮಾತುಗಳನ್ನು ಕೇಳಬಹುದು ಎಂಬುದನ್ನು ನಿಸ್ಸಾರವಾಗಿ ನುಡಿದುಬಿಟ್ಟರು.

ಅಂತೆಯೇ ಕುವೆಂಪು ಅವರ ವಿಶ್ವಮಾನವ ಕನಸ್ಸನ್ನು ನಾ ಗೆದ್ದೆ, ನೀ ಗೆದ್ದೆ ಎಂಬ ಬಿರುದು ಭಾವಗಳು ಬೇಡವೋ ಮೂಢ ಎಂದು ಹೇಳಿದರೆ, ಮತ್ತೊಬ್ಬರೂ ಆನಂದ ಭಾಷ್ಪವಾಗಲೀ, ದುಃಖವಾಗಲೀ ಕಣ್ಣಂಚಿನಲ್ಲಿ ಕಾಣಿಸಿಕೊಳ್ಳುವ ಕಣ್ಣೀರಿನ ಬಗ್ಗೆ ಕವಿತೆಯನ್ನು ವಾಚಿಸಿದರು.  ಹೀಗೆ ಜೀವನದಲ್ಲಿ ಉಂಟಾಗುವ ಜಂಜಾಟ, ಭವ್ಯ ಭವನ, ಜಗತ್ತಿಗೆಲ್ಲಾ ಆಹಾರ ಒದಗಿಸುವ ರೈತ ಹಾಗೂ ಮಹಿಳಾ ಸಬಲೀಕರಣ ಹೀಗೆ ಒಂದೊಂದು ಶೀರ್ಷಿಕೆಯನ್ನು ವೈಶಿಷ್ಟ್ಯಪೂರ್ಣವಾಗಿ ಹೊರಹೊಮ್ಮಿಸುವಂತಹ ಹಲವಾರು ಕವಿತೆಗಳು ಯುವಗೋಷ್ಢಿಯಲ್ಲಿ ಸಭಿಕರ ಮನಸೂರೆ ಮಾಡಿತು‌.

ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕರಾದ ಎಲ್.‌ನಾಗೇಂದ್ರ ಅವರು ಮಾತನಾಡಿ, ಕಂಪ್ಯೂಟರ್ ಯುಗದಲ್ಲಿಯೂ ನಮ್ಮ‌ ನಾಡಿನ ಕಲೆ, ಸಂಸ್ಕೃತಿ, ಆಚಾರ-ವಿಚಾರವನ್ನು  ಕವಿತೆಯ ಮೂಲಕ ವಾಚಿಸಲು ಆಸಕ್ತರಾಗಿರುವ ಯುವ ಕವಿಗಳು ಭಾರತದ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸಲು ಸಿದ್ಧರಾಗುವಂತೆ ಭಾಸವಾಗುತ್ತಿದೆ‌ ಎಂದರು.

ಜಿಲ್ಲೆಯಿಂದ‌ ಜಿಲ್ಲೆಗೆ ಆಹಾರ, ಭಾಷೆ ಹಾಗೂ ಸಂಸ್ಕೃತಿಗಳು ವೈವಿಧ್ಯಮಯವಾಗಿರುತ್ತದೆ. ಇದೆಲ್ಲದರ ಮಧ್ಯೆ ಹಳೇ ಬೇರು ಹೊಸ ಚಿಗುರು ಎಂಬುದನ್ನು ಸಾಬೀತು ಪಡಿಸುವ ಮೂಲಕ ನಮ್ಮ ಕನ್ನಡ ಭಾಷೆಯನ್ನು ಎತ್ತರೆತ್ತರಕ್ಕೆ ಹಾರಿಸಲು  ಜ್ಙಾನಪೀಠ ಪುರಸ್ಕೃತ ಕವಿಗಳಂತೆ ಇಂದಿನ‌ ಯುವ ಕವಿಗಳು ಎತ್ತರಕ್ಕೆ ಬೆಳೆಯಲು‌ ಮುಂದಾಗಬೇಕು. ಜೊತೆಗೆ ಕನ್ನಡ ಮತ್ತು ಕನ್ನಡತನದ ಬೆಳಕನ್ನು ಪ್ರಪಂಚದಾದ್ಯಂತ ಪಸರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಕವಿ ಮತ್ತು ವಿಮರ್ಶಕರಾದ ಡಾ.ಸಿ.ಆರ್.ಸಿದ್ದಾಶ್ರಮ ಪಾಲ್ಗೊಂಡಿದರೆ, ಇದರ ಅಧ್ಯಕ್ಷತೆಯನ್ನು ಖ್ಯಾತ ಕವಿಯಿತ್ರಿ ಜ್ಯೋತಿ ಗುರುಪ್ರಸಾದ್ ಅವರು ವಹಿಸಿಕೊಂಡರು. ಈ ವೇಳೆ ದಸರಾ ವಿಶೇಷಾಧಿಕಾರಿಯಾದ ಡಾ.ಎಂ.ದಾಸೇಗೌಡ, ಕಾರ್ಯದರ್ಶಿ ಹೆಚ್.ಡಿ.ಗಿರೀಶ್ ಸೇರಿದಂತೆ‌ ಸಮಿತಿ‌ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.