ಮನೆ ರಾಜ್ಯ ಸರ್ಕಾರಿ ಶಾಲೆಗಳಲ್ಲಿ ದೇಣಿಗೆ ಸಂಗ್ರಹ:  ನನ್ನದಾಗಲಿ, ಮುಖ್ಯಮಂತ್ರಿಯದ್ದಾಗಲಿ ಪಾತ್ರವಿಲ್ಲ ಎಂದ ಬಿ.ಸಿ.ನಾಗೇಶ್

ಸರ್ಕಾರಿ ಶಾಲೆಗಳಲ್ಲಿ ದೇಣಿಗೆ ಸಂಗ್ರಹ:  ನನ್ನದಾಗಲಿ, ಮುಖ್ಯಮಂತ್ರಿಯದ್ದಾಗಲಿ ಪಾತ್ರವಿಲ್ಲ ಎಂದ ಬಿ.ಸಿ.ನಾಗೇಶ್

0

ಮೈಸೂರು(Mysuru): ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅಗತ್ಯವಿರುವ ಖರ್ಚು–ವೆಚ್ಚಗಳಿಗಾಗಿ ಪೋಷಕರಿಂದ ದೇಣಿಗೆ ಸಂಗ್ರಹ ವಿಚಾರದಲ್ಲಿ ಎಸ್‌ಡಿಎಂಸಿಗಳಿಗೆ ಅನುಮತಿ ನೀಡಿ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಇದರಲ್ಲಿ ನನ್ನದಾಗಲಿ ಅಥವಾ ಮುಖ್ಯಮಂತ್ರಿಯದ್ದಾಗಲಿ ಪಾತ್ರವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿದರು.

ಹೀಗೆ ದೇಣಿಗೆ ಸಂಗ್ರಹಿಸಲು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ಯಡಿ ಅವಕಾಶವಿದೆ. ಅದನ್ನು ಬಳಸಿ, ಎಸ್‌ಡಿಎಂಸಿಗಳ ಮನವಿ ಮೇರೆಗೆ ಅನುಮತಿ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ಮಹತ್ವದ ವಿಷಯವೂ ಸಚಿವರ ಗಮನದಲ್ಲಿಲ್ಲವೇ ಎಂಬ ಪ್ರಶ್ನೆಗೆ, ಸುತ್ತೋಲೆಗಳನ್ನು ಹೊರಡಿಸುವುದಕ್ಕೆ ಅಧಿಕಾರಿಗಳಿಗೆ ಕಾನೂನಿನಲ್ಲಿ ಅಧಿಕಾರವಿದೆ. ಎಲ್ಲ ಸುತ್ತೋಲೆಗಳನ್ನೂ ಸರ್ಕಾರದ ಗಮನಕ್ಕೆ ತಂದೇ ಹೊರಡಿಸಬೇಕು ಎಂದೇನೂ ಇಲ್ಲ ಎಂದರು.

ಕೆಲವರು, ಸುತ್ತೋಲೆಯನ್ನು ಸರಿಯಾಗಿ ಓದದೇ ಪ್ರತಿಕ್ರಿಯಿಸಿದ್ದಾರೆ. ಶಾಲೆಯ ಅಭಿವೃದ್ಧಿಗೆ ಸ್ಥಳೀಯವಾಗಿ ಹಣ ಸಂಗ್ರಹಿಸಲು ಆರ್‌ಟಿಇಯಡಿ ಅವಕಾಶ ಕಲ್ಪಿಸಲಾಗಿದೆ. ಇದನ್ನು ಜಾರಿಗೆ ತಂದವರೇ ಕಾಂಗ್ರೆಸ್‌ನವರು. ಅದರಲ್ಲಿರುವ ಅಂಶ ಬಳಸಿಕೊಂಡು ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡರೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧಿಸುತ್ತಿದ್ದಾರೇಕೆ? ಎಂದು ಕೇಳಿದರು.

ಪೋಷಕರಿಂದ ಬಲವಂತವಾಗಿ ಹಣ ಸಂಗ್ರಹಿಸುವಂತೆ ಹೇಳಿಲ್ಲ. ಅವರಾಗಿಯೇ ಕೊಟ್ಟರೆ, ತಿಂಗಳಿಗೆ ₹ 100 ಪಡೆದು ರಸೀದಿ ಕೊಡಬೇಕು. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಕಾನೂನು ಪಂಡಿತ ಎಂದು ಭಾವಿಸಿರುವ ಸಿದ್ದರಾಮಯ್ಯ ಇಂಥದ್ದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ಎಸ್‌ಡಿಎಂಸಿಗಳು ಹಣ ದುರುಪಯೋಗ ಮಾಡಿಕೊಳ್ಳುವುದು ಕಂಡುಬಂದರೆ ಸುತ್ತೋಲೆ ಹಿಂಪಡೆಯಲಾಗುವುದು ಎಂದು ಪ್ರತಿಕ್ರಿಯಿಸಿದರು.

ಶಾಲೆಗಳಲ್ಲಿ ಎಲ್‌ಕೆಜಿ–ಯುಕೆಜಿ ಆರಂಭಿಸಿದವರು ಅಲ್ಲಿ ಪಾಠ ಮಾಡುವವರಿಗೆ ಸಂಭಾವನೆಗೆ ವ್ಯವಸ್ಥೆ ಮಾಡಿಲ್ಲ. ಹೀಗಾಗಿ, ಸಂಭಾವನೆಗಾಗಿ ಹಣ ಸಂಗ್ರಹಿಸಲು ಸುತ್ತೋಲೆ ಹೊರಡಿಸಲಾಗಿದೆ. ಕಾಂಗ್ರೆಸ್ ಸರ್ಕಾರವಿದ್ದಾಗಲೇ ಮಾಡಿರುವ ಕಾಯ್ದೆಯದು. ಆಗೇಕೆ ಅವಕಾಶ ಕೊಟ್ಟರು? ಅವರ ಸರ್ಕಾರದಲ್ಲಿ ಹಣವಿರಲಿಲ್ಲವೇ? ದುಡ್ಡಿದ್ದಿದ್ದರೆ 5 ವರ್ಷಗಳಲ್ಲಿ ಶಾಲೆಗಳಲ್ಲಿ 4,618 ಕೊಠಡಿಗಳನ್ನು ಮಾತ್ರ ಕಟ್ಟಿದರೇಕೆ? ಹೆಚ್ಚಿನ ಶಿಕ್ಷಕರನ್ನು ನೇಮಿಸಿಕೊಳ್ಳಲಿಲ್ಲವೇಕೆ? ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ದೇಣಿಗೆ ಸಂಗ್ರಹಿಸುವುದು ಬೇಡ ಎನ್ನುವುದಾದರೆ, ಎಲ್‌ಕೆಜಿ–ಯುಕೆಜಿ ತರಗತಿಗಳನ್ನು ನಿಲ್ಲಿಸಿ ಬಿಡೋಣವಾ? ಎಂದು ಕೇಳಿದರು.