ಮನೆ ಅಪರಾಧ ಕಲಬುರಗಿ: ಬಯಲು ಬಹಿರ್ದೆಸೆಗೆ ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ

ಕಲಬುರಗಿ: ಬಯಲು ಬಹಿರ್ದೆಸೆಗೆ ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ

0

ಕಲಬುರಗಿ(Kalburgi) : ಬಯಲು ಬಹಿರ್ದೆಸೆಗೆ ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಅಮಾನವೀಯ ಘಟನೆ ಆಳಂದ ತಾಲ್ಲೂಕಿನ ಗ್ರಾಮವೊಂದರಲ್ಲಿ ಮಂಗಳವಾರ ನಡೆದಿದೆ.

ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಅಫಜಲಪುರ ತಾಲ್ಲೂಕಿನ ಗ್ರಾಮವೊಂದರ ಬಾಲಕಿಯು ಆಳಂದ ತಾಲ್ಲೂಕಿನ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು, ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಳು. ದೀಪಾವಳಿ ರಜೆಗೆಂದು ಸ್ವಗ್ರಾಮಕ್ಕೆ ಹೋಗಿ, ನವೆಂಬರ್ 3ರಂದು ನಡೆಯುವ ಪರೀಕ್ಷೆಗೆ ಹಾಜರಾಗಲು ಮಂಗಳವಾರ ಮಧ್ಯಾಹ್ನವೇ ಸಂಬಂಧಿಕರ ಮನೆಗೆ ವಾಪಸ್ ಆಗಿದ್ದಳು. ಮನೆಯಲ್ಲಿ ಇರುವಂತೆ ಹೇಳಿ ಬಾಲಕಿಯ ಅತ್ತೆ ಗ್ರಾಮದಲ್ಲಿನ ಮತ್ತೊಂದು ಮನೆಗೆ ಹೋಗಿದ್ದರು.

ಈ ನಡುವೆ ಬಾಲಕಿಯು ಬಯಲು ಬಹಿರ್ದೆಸೆಗೆ ಹೋಗುವುದಾಗಿ ಪಕ್ಕದ ಮನೆಯವರ ಬಳಿ ಹೇಳಿ ತೆರಳಿದ್ದಳು. ಸಂಜೆ ವೇಳೆ ಬಾಲಕಿ ಮನೆಯಲ್ಲಿ ಕಾಣದಿದ್ದಾಗ, ಆಕೆಯ ಅತ್ತೆ ಆತಂಕದಿಂದ ಪಕ್ಕದ ಮನೆಯವರನ್ನು ವಿಚಾರಿಸಿದರು. ಬಾಲಕಿಯನ್ನು ಹುಡುಕುತ್ತಾ ಹೊರಟಾಗ ಕಬ್ಬಿನ ಗದ್ದೆ ಸಮೀಪ ಚಪ್ಪಲಿ ಬಿದ್ದಿತ್ತು. ಸುಮಾರು 500 ಮೀಟರ್ ದೂರದಲ್ಲಿ ಇನ್ನೊಂದು ಚಪ್ಪಲಿ ಕಾಣಿಸಿತು. ಇದರಿಂದ ಆತಂಕಗೊಂಡು ಗ್ರಾಮಸ್ಥರು ತೀವ್ರ ಹುಡುಕಾಟ ನಡೆಸಿದಾಗ, ಸಂಜೆ ವೇಳೆ ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.

ಬಾಲಕಿಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ಮಾಡಲಾಗಿದೆ. ದೇಹದ ಮೇಲೂ ಗಾಯಗಳಾಗಿವೆ. ಕುತ್ತಿಗೆಗೆ ವೇಲ್ ಬಿಗಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಬಳಿಕ ಕೊಲೆ ಮಾಡಿದ ಆರೋಪಿಗಳು ಪರಾರಿ ಆಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ರವೀಂದ್ರ ಶಿರೂರ, ಸಿಪಿಐ ಬಾಸು ಚವ್ಹಾಣ, ಪಿಎಸ್‌ಐ ತಿರುಮಲೇಶ ಅವರು ಭೇಟಿ ನೀಡಿ ಪರಿಶೀಲಿಸಿದರು.

ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.