ಮನೆ ಸುದ್ದಿ ಜಾಲ ಕೆ.ಆರ್.ನಗರದಲ್ಲಿ ಚಿರತೆ ದಾಳಿ: ನಾಲ್ವರಿಗೆ ಗಾಯ

ಕೆ.ಆರ್.ನಗರದಲ್ಲಿ ಚಿರತೆ ದಾಳಿ: ನಾಲ್ವರಿಗೆ ಗಾಯ

0

ಮೈಸೂರು(Mysuru): ಕೆ.ಆರ್.ನಗರ ಪಟ್ಟಣದ ಮುಳ್ಳೂರು ರಸ್ತೆ, ರಾಜ್ ಪ್ರಕಾಶ್ ಶಾಲೆ ಬಳಿ ಶುಕ್ರವಾರ ಬೆಳಿಗ್ಗೆ ಕಾಣಿಸಿಕೊಂಡ ಚಿರತೆ ನಾಲ್ವರ ಮೇಲೆ ಎಗರಿ ಗಾಯಗೊಳಿಸಿದ್ದು, ಚಿರತೆಯನ್ನು  ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದಾರೆ.

ಪಟ್ಟಣದ ಕನಕನಗರ ನಿವಾಸಿಗಳಾದ ವೆಂಕಟೇಶ್, ಕರಿಗೌಡ, ಪರಶಿವ ಮತ್ತು ಚಿರತೆ ಹಿಡಿಯಲು ಬಂದಿದ್ದ ಅರಣ್ಯಾಧಿಕಾರಿ ಮಂಜು ಗಾಯಗೊಂಡಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ಸಾರ್ವಜನಿಕರಿಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ, ಜನರಲ್ಲಿ ಭಯ ಉಂಟು ಮಾಡುತ್ತಿತ್ತು, ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೂ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಅಲ್ಲಗಳೆದಿದ್ದರು. ಗುರುವಾರ ಸಂಜೆ ಸುಮಾರು 7ಗಂಟೆಯಲ್ಲಿ ಕಾಲೇಜು ಬಳಿ ಮತ್ತೆ ಕಾಣಿಸಿಕೊಂಡಿದೆ ಎಂದು ಹೇಳಿದಾಗ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿ ರಾತ್ರಿ 10ಗಂಟೆಯವರೆಗೂ ಕಾಲೇಜು ಸುತ್ತ ಜಾಲಾಡಿದ್ದಾರೆ. ಆದರೆ ಚಿರತೆ ಬಗ್ಗೆ ಸುಳಿವು ಸಿಗಲಿಲ್ಲ, ಆದರೂ ಇದೊಂದು ಹುಸಿ ಹೇಳಿಕೆಯಾಗಿರಬಹುದು ಎಂದು ಸುಮ್ಮನಾಗಿದ್ದರು.

ಪಟ್ಟಣದ ಮುಳ್ಳೂರು ರಸ್ತೆ, ರಾಜ್ ಪ್ರಕಾಶ್ ಶಾಲೆ ಬಳಿ ಶುಕ್ರವಾರ ಬೆಳಿಗ್ಗೆ ಸುಮಾರು 8 ಗಂಟೆಗೆ ಸಾರ್ವಜನಿಕರಿಗೆ ಕಾಣಿಸಿಕೊಂಡ ಚಿರತೆ ಪಟ್ಟಣದ ಕನಕನಗರ ನಿವಾಸಿಗಳಾದ ವೆಂಕಟೇಶ್, ಕರಿಗೌಡ, ಪರಶಿವ ಅವರ ಮೇಲೆ ಎಗರಿ ಗಾಯಗೊಳಿಸಿದೆ, ಚಿರತೆ ಹಿಡಿಯಲು ಬಂದಿದ್ದ ಅರಣ್ಯಾಧಿಕಾರಿ ಮಂಜು ಅವರ ಮೇಲೂ ದಾಳಿ ಮಾಡಿದೆ. ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಅರವಳಿಕೆ ಮದ್ದು ನೀಡಿ ಚಿರತೆ ಸೆರೆ ಹಿಡಿದಿದ್ದಾರೆ.