ಮನೆ ಸುದ್ದಿ ಜಾಲ ರಸ್ತೆಗಳು ಉತ್ತಮವಾಗಿರಬೇಕಾದರೆ ಪ್ರಧಾನಿ ತಿಂಗಳಿಗೊಮ್ಮೆ ಆಗಮಿಸಲಿ: ಎಎಪಿ

ರಸ್ತೆಗಳು ಉತ್ತಮವಾಗಿರಬೇಕಾದರೆ ಪ್ರಧಾನಿ ತಿಂಗಳಿಗೊಮ್ಮೆ ಆಗಮಿಸಲಿ: ಎಎಪಿ

0

ಬೆಂಗಳೂರು(Bengaluru): ಪ್ರಧಾನಿ ಅವರು ಆಗಮಿಸಲು ಒಂದೆರಡು ದಿನಗಳಿರುವಾಗ ಮಾತ್ರ ರಸ್ತೆ ದುರಸ್ತಿ ಮಾಡಲು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ನಿರ್ಧರಿಸಿದೆ ಎಂದು ಆರೋಪಿಸಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಗುರುವಾರ ಬೆಳಿಗ್ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಎದುರಿನ ರಸ್ತೆಯಲ್ಲಿ ಹಾಗೂ ಮಧ್ಯಾಹ್ನ ಮಲ್ಲೇಶ್ವರದ ದತ್ತಾತ್ರೇಯ ದೇವಸ್ಥಾನ ರಸ್ತೆಯಲ್ಲಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಸರ್ಕಾರದ ವಿರುದ್ಧ ಭಿತ್ತಿಪತ್ರಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ರೈಲು ನಿಲ್ದಾಣದ ಸಮೀಪ ಪ್ರತಿಭಟಿಸಿದ ಎಎಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ನಗರದ ರಸ್ತೆಗಳು ಸದಾ ಉತ್ತಮವಾಗಿರಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅವರು ತಿಂಗಳಿಗೊಮ್ಮೆ ಆಗಮಿಸಬೇಕು ಎಂದು ಒತ್ತಾಯಿಸಿದರು.

ಜನಸಾಮಾನ್ಯರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲದ ಸರ್ಕಾರ, ರಾಜ್ಯದಲ್ಲಿ ಅಧಿಕಾರದಲ್ಲಿದೆ. ವಾಹನ ಸವಾರರು ರಸ್ತೆ ಗುಂಡಿಗಳಿಗೆ ಬಿದ್ದು ಕೈಕಾಲು ಮುರಿದುಕೊಂಡರೂ ಸರ್ಕಾರ ತಲೆಕೆಡಿಸಿಕೊಂಡಿರಲಿಲ್ಲ.ಈಗ ಮೋದಿ ಅವರು ಆಗಮಿಸುತ್ತಾರೆ ಎನ್ನುವ ಕಾರಣಕ್ಕೆ ತರಾತುರಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತಿದೆ. ಅವರು ಸಂಚರಿಸುವ ರಸ್ತೆಗಳನ್ನು ಮಾತ್ರ ದುರಸ್ತಿ ಮಾಡಿ, ಉಳಿದ ರಸ್ತೆಗಳ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ. ಮೋದಿ ಅವರನ್ನು ಮೆಚ್ಚಿಸಿ, ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗುವುದೇ ಬಸವರಾಜ ಬೊಮ್ಮಾಯಿಯವರ ಏಕೈಕ ಉದ್ದೇಶ ಎಂದು ಎಎಪಿ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್‌ ದಾಸರಿ ಟೀಕಿಸಿದರು.

ತರಾತುರಿಯಲ್ಲಿ ಮುಚ್ಚಿರುವ ಗುಂಡಿಗಳು ಕೆಲವೇ ದಿನಗಳಲ್ಲಿ ಮತ್ತೆ ಬಾಯಿ ತೆರೆಯಲಿವೆ. ಗುಣಮಟ್ಟ ಕಾಯ್ದುಕೊಳ್ಳದೇ ಅವಸರದಲ್ಲಿ ಮಾಡಿದ ಕಾಮಗಾರಿಗಳು ಒಂದು ತಿಂಗಳು ಬಾಳಿಕೆ ಬರುವುದೂ ಅನುಮಾನ ಎಂದು ಅವರು ದೂರಿದರು.