ಮನೆ ರಾಜಕೀಯ ಸ್ಫೋಟ ಪ್ರಕರಣದ ಹಿಂದಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮವಹಿಸಿ: ಎಚ್‌.ಡಿ.ಕುಮಾರಸ್ವಾಮಿ

ಸ್ಫೋಟ ಪ್ರಕರಣದ ಹಿಂದಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮವಹಿಸಿ: ಎಚ್‌.ಡಿ.ಕುಮಾರಸ್ವಾಮಿ

0

ಕೋಲಾರ(Kolar): ಸ್ಫೋಟ ಪ್ರಕರಣವನ್ನು ನಾನು ಖಂಡಿಸುತ್ತೇನೆ. ಪ್ರಕರಣದ ಹಿಂದೆ ಸಮಾಜಘಾತುಕ ಶಕ್ತಿಗಳಿದ್ದು, ಕಠಿಣ ಕ್ರಮ ವಹಿಸಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಸೋಮವಾರ ಜೆಡಿಎಸ್‌ ಪಂಚರತ್ನ ರಥಯಾತ್ರೆ ವೇಳೆ ತಾಲ್ಲೂಕಿನ ಕೋರಗಂಡಹಳ್ಳಿಯಲ್ಲಿ ಮಾತನಾಡಿ, ಪೊಲೀಸರಿಗೆ ಮುಕ್ತ ಅವಕಾಶ ನೀಡಿ ಯಾವುದೇ ಸಂಘಟನೆ ಇದ್ದರೂ ಪತ್ತೆ ಹಚ್ಚಬೇಕು. ಈಗಿನ ಪ್ರಕರಣದಲ್ಲಿ ದೇವರೇ ಆ ಭಾಗದ ಜನರನ್ನು ಕಾಪಾಡಿದ್ದಾನೆ ಎಂದು ಹೇಳಿದರು.

ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲ ವ್ಯಕ್ತಿಗಳ ಕೋಮು ಸಂಘರ್ಷಕ್ಕೆ ಕಾರಣವಾಗುವ ಹೇಳಿಕೆಗಳು ಹಾಗೂ ಪರಸ್ಪರ ದ್ವೇಷ ಮನೋಭಾವ ಬೆಳೆಸುವ ಚಟುವಟಿಕೆಗಳು ಸ್ಫೋಟದಂಥ ಪ್ರಕರಣಗಳಿಗೆ ಉತ್ತೇಜನ ನೀಡುತ್ತಿವೆ

ಎರಡೂ ರಾಷ್ಟ್ರೀಯ ಪಕ್ಷಗಳು ಕರಾವಳಿ ಪ್ರದೇಶದಲ್ಲಿ ಕೋಮುಗಲಭೆ ವಾತಾವರಣ ನಿರ್ಮಿಸಿವೆ. ಈಗ ಅಲ್ಲಿ ಸ್ಫೋಟ ಸಂಭವಿಸಿದ್ದು, ಆರ್ಥಿಕ ವಹಿವಾಟಿಗೆ ತೊಂದರೆ ಆಗುತ್ತದೆ. ಜನರೂ ಆತಂಕಕ್ಕೆ ಒಳಗಾಗುತ್ತಾರೆ ಎಂದರು.

ಯಾವುದೇ ಪಕ್ಷ, ಸಮುದಾಯಗಳಿರಲಿ ನಮ್ಮ ಜವಾಬ್ದಾರಿ ನಾಡಿನ ಜನತೆಗೆ ಸಂಪೂರ್ಣ ರಕ್ಷಣೆ ನೀಡುವುದು, ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸುವುದು ಆಗಬೇಕು. ಪಕ್ಷಗಳ ಅಂಗ ಪಕ್ಷಗಳು, ಸಂಘಟನೆಗಳು, ಬೇರೆ ಸಮುದಾಯದ ಸಂಘಟನೆಗಳು ಮತ್ತು ಅಲ್ಲಿನ ಧಾರ್ಮಿಕ ಗುರುಗಳು ಇಂಥ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬಾರದು ಎಂದು ಮನವಿ ಮಾಡಿದರು.

ಗೃಹ ಇಲಾಖೆ ವೈಫಲ್ಯ ಎಂದು ಹೇಳುವುದಿಲ್ಲ. ಗುಪ್ತಚರ ಇಲಾಖೆ ಕೆಲಸ ಮಾಡುತ್ತಿದ್ದರೂ ಪುಲ್ವಾಮದಲ್ಲಿ 40 ಯೋಧರ ಹತ್ಯೆ ನಡೆಯಲಿಲ್ಲವೇ? ಸರ್ಕಾರ, ರಾಜಕಾರಣಿಗಳು, ಸಂಘಟನೆಗಳು ದ್ವೇಷದ ವಾತಾವರಣ ನಿರ್ಮಾಣ ಮಾಡಬಾರದು. ಅನಾಹುತ ನಡೆದರೆ ಅಮಾಯಕರು ಸಮಸ್ಯೆಗೆ ಒಳಗಾಗುತ್ತಾರೆ ಎಂದರು.